ಕರ್ನಾಟಕ

karnataka

By

Published : Jul 24, 2022, 12:24 PM IST

ETV Bharat / state

ಸಮುದಾಯ ಭವನದಲ್ಲೇ ಮಕ್ಕಳಿಗೆ ಪಾಠ: ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ

ಶಹಾಪುರ ತಾಲೂಕಿನ ಸಗರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡವಿಲ್ಲ. ಸಮುದಾಯ ಭವನವೇ ಮಕ್ಕಳಿಗೆ ಪಾಠ ಶಾಲೆಯಾಗಿದೆ. ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಪೋಷಕರು ಕೋಪಗೊಂಡಿದ್ದಾರೆ.

Building problem to Primary school in Yadgiri
ಸಮುದಾಯ ಭವನದಲ್ಲೇ ಮಕ್ಕಳಿಗೆ ಪಾಠ

ಯಾದಗಿರಿ:ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಂದರೂ ಬಳಕೆಯಾಗುತ್ತಿಲ್ಲ ಎಂಬ ಆರೋಪಗಳು ಮತ್ತೆ ಮತ್ತೆ ಕೇಳಿ ಬರುತ್ತಿವೆ. ಶಾಲಾ ಕಟ್ಟಡವಿಲ್ಲದೆ ಮಕ್ಕಳು ಗ್ರಾಮದ ಸಮುದಾಯ ಭವನದಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಧ್ಯಾಹ್ನದ ಬಿಸಿಯೂಟ, ಅಡುಗೆ ಕೋಣೆ, ಮಕ್ಕಳ ಪಾಠವೆಲ್ಲಾ ಒಂದೇ ಕಡೆ ನಡೆಯುತ್ತಿದೆ. ಇದು ಶಹಾಪುರ ತಾಲೂಕಿನ ಸಗರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಹೊಳೆಕಟ್ಟಿಯ ದುಸ್ಥಿತಿ.

1 ರಿಂದ 5ನೇ ತರಗತಿಯವರೆಗೂ ಇರುವ ಈ ಶಾಲೆಯಲ್ಲಿ 170 ಮಕ್ಕಳು ಓದುತ್ತಿದ್ದಾರೆ. ಸೂಕ್ತ ಶಾಲಾ ಕಟ್ಟಡವಿಲ್ಲದೆ ಒಂದು ವರ್ಷದಿಂದ ಸಮುದಾಯ ಭವನವನ್ನೇ ಶಾಲೆಯನ್ನಾಗಿ ಮಾಡಿಕೊಂಡು ಮಕ್ಕಳಿಗೆ ಪಾಠ ಹೇಳಿ ಕೊಡಲಾಗುತ್ತಿದೆ. ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹೊಸ ಕಟ್ಟಡ ನಿರ್ಮಾಣಕ್ಕೆ ಆಗ್ರಹ:ಈ ಮೊದಲು ಸಗರ ಗ್ರಾಮದಲ್ಲಿ ದುಸ್ಥಿತಿಯಲ್ಲಿದ್ದ ಶಾಲಾ ಕಟ್ಟಡವನ್ನು ಕೆಡವಲಾಗಿದೆ. ಕಟ್ಟಡ ಕೆಡವಿ ವರ್ಷಗಳೇ ಉರುಳಿದರೂ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಆಶ್ವಾಸನೆಗಳ ಮೂಲಕ ಅಧಿಕಾರಿಗಳು ಜಾರಿಗೊಳ್ಳುತ್ತಿದ್ದಾರೆ. ಮುಂಗಾರು ಮಳೆ ಆರಂಭವಾಗಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಇಲ್ಲ. ಹೀಗಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಈಗಾಲಾದರೂ ಸಂಬಂಧಿಸಿದ ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು ಶಾಲಾ ಕಟ್ಟಡ ವ್ಯವಸ್ಥೆಗೆ ಮುಂದಾಗಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಶಾಲೆ ಕೆಡವಿದ್ದರಿಂದ ಮಕ್ಕಳ ಪಾಠಕ್ಕೆ ವ್ಯವಸ್ಥೆ ಇಲ್ಲ. ಈ ಗ್ರಾಮದಲ್ಲಿ ಇರುವುದು ಇದೊಂದೇ ಸರ್ಕಾರಿ ಶಾಲೆ. ಮಕ್ಕಳು ಭವನದಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಸಂಚರಿಸುವ ದಾರಿಯಲ್ಲಿ ಮಕ್ಕಳು ತಿರುಗಾಡಿ ಊಟ ಮಾಡುವಂತಾಗಿದೆ. ಊಟದ ವ್ಯವಸ್ಥೆಯೂ ಸರಿಯಾಗಿಲ್ಲ. ನಾವು ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ನಮ್ಮ ಬಳಿ ಹಣವಿಲ್ಲ. ಇಲ್ಲಿ ವಿಷ ಜಂತುಗಳ ಹಾವಳಿ ಇದೆ. ಕೇವಲ ಆಶ್ವಾಸನೆಗಳಿಂದ ವರ್ಷಗಳು ತಳ್ಳಲ್ಪಡುತ್ತಿವೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಶಿಥಿಲಗೊಂಡ ಘತ್ತರಗಾ ಸರ್ಕಾರಿ ಶಾಲೆ: ಮಕ್ಕಳು, ಶಿಕ್ಷಕರಿಗೆ ಜೀವ ಭಯ

ABOUT THE AUTHOR

...view details