ಕರ್ನಾಟಕ

karnataka

ಶಾಲಾ ಮಕ್ಕಳ ಫುಡ್ ಫೆಸ್ಟ್.. ಚಿಣ್ಣರ ಕೈ ರುಚಿಗೆ ಆಹಾ.. ಏನ್​ ರುಚಿ ಎಂದ ಪೋಷಕರು

ಖಾಸಗಿ ಶಾಲೆಯಲ್ಲಿ ಫುಡ್ ಫೆಸ್ಟ್ - ನಾನಾ ಖಾದ್ಯಗಳನ್ನು ಮಾರಾಟ ಮಾಡಿದ ವಿದ್ಯಾರ್ಥಿಗಳು - ಪೋಷಕರ ಸಹಕಾರದಲ್ಲಿ ಶಾಲಾ ವತಿಯಿಂದ ಫುಡ್ ಫೆಸ್ಟ್ ಆಯೋಜನೆ - ವಿದ್ಯಾರ್ಥಿಗಳಲ್ಲಿ ವ್ಯಾಪಾರ ಜ್ಞಾನಕ್ಕಾಗಿ ವಿಶೇಷ ಕಾರ್ಯಾಗಾರ.

By

Published : Jan 8, 2023, 7:27 PM IST

Published : Jan 8, 2023, 7:27 PM IST

vijayapura-rabindranath-tagore-school-food-fest
ಶಾಲಾ ಮಕ್ಕಳ ಫುಡ್ ಫೆಸ್ಟ್

ಚಿಣ್ಣರ ಕೈ ರುಚಿಗೆ ಆಹಾ..! ಎಂದ ಪೋಷಕರು

ವಿಜಯಪುರ: ಎಲ್ಲಿ ನೋಡಿದ್ರೂ ತರಹೇವಾರಿ ತಿಂಡಿ ತಿನಿಸು. ಶಾಲಾ ಮಕ್ಕಳ ವಿವಿಧ ಖಾದ್ಯಗಳ ಅಂಗಡಿ. ಭರ್ಜರಿ ವ್ಯಾಪಾರ ನಡೆಸಿ, ಕಿಸೆ(ಪಾಕೆಟ್​) ತುಂಬಿಸಿಕೊಂಡು ಖುಷ್‌ ಆದ ವಿದ್ಯಾರ್ಥಿಗಳು. ಅಂದಹಾಗೇ ಮಕ್ಕಳೇ ತಯಾರಿಸಿದ ಖಾದ್ಯಗಳ ಮಾರಾಟಕ್ಕೆ ವೇದಿಕೆ ಒದಗಿಸಿದ್ದು ಫುಡ್ ಫೆಸ್ಟ್. ಇದು ನಡೆದಿದ್ದು ಗುಮ್ಮಟನಗರಿ ವಿಜಯಪುರ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಛತ್ರಪತಿ ಶಿವಾಜಿ ಮಹಾರಾಜ ಎಜ್ಯುಕೇಷನ್ ಸೊಸೈಟಿಯ ಶ್ರೀ ರವೀಂದ್ರನಾಥ ಠಾಗೋರ್ ಶಾಲೆಯ ಫುಡ್ ಫೆಸ್ಟ್​ನಲ್ಲಿ.

ವಿದ್ಯಾರ್ಥಿಗಳೇ ತಯಾರಿಸಿದ ಆಹಾರ.. ಈ ಫುಡ್ ಫೆಸ್ಟ್​ನಲ್ಲಿ ವಿದ್ಯಾರ್ಥಿಗಳೇ ವಿವಿಧ ಆಹಾರ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಿ ಸಂತಸ ಪಟ್ಟರು. ಮಕ್ಕಳು ಸಮೋಸಾ, ಬಜ್ಜಿ, ವೆಜ್ ಬಿರಿಯಾನಿ, ಮಸಾಲಾ ರೈಸ್, ಚುರುಮುರಿ, ಅವಲಕ್ಕಿ ಒಗ್ಗರಣೆ, ಕ್ಯಾರೆಟ್‌ ಹಲ್ವಾ, ಚಕ್ಕುಲಿ, ರವೆ ಉಂಡೆ ಸೇರಿದಂತೆ ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನು ತಾವೇ ತಯಾರಿಸಿದರು. ಬಗೆಬಗೆಯ ತಿನಿಸುಗಳನ್ನು ಪಕ್ಕಾ ವೃತ್ತಿಪರ ವರ್ತಕರಂತೆ ಮಾರಾಟ ಮಾಡಿ ಲಾಭಗಳಿಸಿ ಸಂಭ್ರಮಿಸಿದರು.

ಮಕ್ಕಳಲ್ಲಿ ವ್ಯಾಪಾರ ವಹಿವಾಟು, ಲಾಭ ಕುರಿತು ಅರಿವು ಮೂಡಿಸಲು ಶಾಲಾ ಆಡಳಿತ ಮಂಡಳಿಯು ಇಂಥದ್ದೊಂದು ವಿಶಿಷ್ಟ ಕಾರ್ಯಕ್ರಮ ರೂಪಿಸಿತ್ತು. ಅದರಂತೆ ಮಕ್ಕಳು ಪೋಷಕರ ನೆರವಿನಿಂದ ವಿಭಿನ್ನ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ಶಾಲಾ ಆವರಣದಲ್ಲಿ ತಾತ್ಕಾಲಿಕವಾಗಿ ತೆರೆದಿದ್ದ ಮಳಿಗೆಗಳಲ್ಲಿ ತಿನಿಸುಗಳನ್ನು ಮಾರಾಟ ಮಾಡಿದರಲ್ಲದೇ ಖರ್ಚು ವೆಚ್ಚ ಹಾಗೂ ತಾವುಗಳಿಸಿದ ಲಾಭಾಂಶ ಕುರಿತು ಶಿಕ್ಷಕರಿಗೆ ವರದಿ ನೀಡಿದರು.

80ಕ್ಕೂ ಹೆಚ್ಚು ಮಳಿಗೆ.. ಶಾಲೆಯ ಆವರಣದಲ್ಲಿ 80ಕ್ಕೂ ಹೆಚ್ಚು ಮಳಿಗೆಗಳಲ್ಲಿ ಪ್ರತಿ ನಾಲ್ವರು ವಿದ್ಯಾರ್ಥಿಗಳು ವ್ಯಾಪಾರ ವಹಿವಾಟು ನಡೆಸಿದರು. ಪಕ್ಕಾ ಹೊಟೆಲ್ ಸ್ಟೈಲ್​ನಲ್ಲಿ ಹಾಗೂ ಬೀದಿ ಬದಿಯ ಚಾಟ್ಸ್ ಅಂಗಡಿಗಳಲ್ಲಿ ಅದ್ಯಾವ ರೀತಿ ವ್ಯವಹರಿಸುತ್ತಾರೋ ಅದೇ ರೀತಿ ವ್ಯಾಪಾರ ಮಾಡಿದರು. ಸಂಜೆ 4ಕ್ಕೆ ಆರಂಭಗೊಂಡ ಆಹಾರ ಮೇಳ ಸಂಜೆ ಮುಕ್ತಾಯವಾಯಿತು. ಪೋಷಕರು, ಅವರ ಸಂಬಂಧಿಕರು, ಶಿಕ್ಷಕರು ಅಲ್ಲದೇ ಸಾರ್ವಜನಿಕರೂ ಕೂಡ ತಿನಿಸುಗಳನ್ನು ಖರೀದಿಸಿ ಸವಿದರು.

'ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಹೊಸ ರೀತಿಯ ಪಠ್ಯೇತರ ಚಟುವಟಿಕೆ ನೀಡಿದೆ. ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನಕ್ಕೆ ಇದು ಉತ್ತಮ ಆಗಿರಲಿದೆ. ಮಕ್ಕಳು ಉತ್ತಮವಾಗಿ ಭಾಗವಹಿಸಿದ್ದಾರೆ. ಎಲ್ಲಾ ಪೋಷಕರು ಸಹಹಕಾರ ನೀಡಿ ಕಾರ್ಯಕ್ರಮ ಚಂದಗಾಣಿಸಿದ್ದಾರೆ. ಮಕ್ಕಳು ಮಾಡಿದ ವಿವಿಧ ಖಾದ್ಯಗಳು ರುಚಿಕರವಾಗಿದ್ದವು' ಎಂದು ಪೋಷಕರಾದ ಶಿವಶಂಕರ ರೆಬಿನಾಳ ತಿಳಿಸಿದರು.

'ಸಂಜೆಯ ತಿನಿಸುಗಾಳಾದ ಸಮೋಸಾ, ಬಜ್ಜಿ, ಚುರುಮುರಿ, ಅವಲಕ್ಕಿ ಒಗ್ಗರಣೆ, ಕ್ಯಾರೆಟ್‌ ಹಲ್ವಾ, ಚಕ್ಕುಲಿ, ರವೆ ಉಂಡೆ ಮಾಡಿ ಮಾರಿದೆವು. ಪೋಷಕರು, ಶಿಕ್ಷಕರು ಮತ್ತು ಸಾರ್ವಜನಿಕರು ಬಂದು ಆಹಾರವನ್ನು ಖರೀದಿಸಿದರು. ಎಲ್ಲರು ಗುಂಪುಗಳಾಗಿ ಮಾಡಿ ಅಂಗಡಿ ಹಾಕಿ ವ್ಯಾಪಾರ ಮಾಡಿದ್ದೆವು. ಉತ್ತಮ ಆಹಾರ ಮಾಡಿದ ಮತ್ತು ಹೆಚ್ಚು ಮಾರಾಟ ಮಾಡಿದವರಿಗೆ ಶಾಲೆಯಿಂದ ಬಹುಮಾನ ನೀಡುತ್ತಾರೆ' ಎಂದು ವಿದ್ಯಾರ್ಥಿನಿ ಸೌಮ್ಯ ಪಾಟೀಲ ಹೇಳಿದರು.

ಪೋಷಕರು ಖುಷ್​.. ಎಲ್ಲರೂ ಮಕ್ಕಳು ತಯಾರಿಸಿದ ರುಚಿ - ಶುಚಿಯಾದ ವಿವಿಧ ಖಾದ್ಯಗಳನ್ನು ಸವಿದು ಬಾಯಿ ಚಪ್ಪರಿಸಿದರು‌. ಅಲ್ಲದೇ ಮಕ್ಕಳಿಗೆ ವ್ಯವಹಾರ ಜ್ಞಾನದ ಸಲುವಾಗಿ ಆಯೋಜನೆ ಮಾಡಲಾಗಿದ್ದ ಫುಡ್ ಫೆಸ್ಟ್​ನ್ನು ಪೊಷಕರು ಶ್ಲಾಘಿಸಿದರು. ಇನ್ನೂ ಉತ್ತಮ ವ್ಯವಹಾರ ಹಾಗೂ ರುಚಿಕರ ಖಾದ್ಯ ತಯಾರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಘೋಷಿಸಲಾಯಿತು. ಫುಡ್ ಫೆಸ್ಟ್ ಸಹ ಪಠ್ಯೇತರ ಚಟುವಟಿಕೆಯಾಗಿ ವಿದ್ಯಾರ್ಥಿಗಳ ವ್ಯವಹಾರದ ಜ್ಞಾನಮಟ್ಟ ಹೆಚ್ಚಿಸಿದರೆ, ಇತ್ತ ಪಾಲಕರು ತಮ್ಮ ಮಕ್ಕಳ ವ್ಯವಹಾರದ ಚತುರತೆ ಕಂಡು ಖುಷ್ ಆದರು.

ಇದನ್ನೂ ಓದಿ:ಕೆಸರು ಗದ್ದೆಯಲ್ಲಿ ಚಿಣ್ಣರಾಟ: ರೈತ ದಿನಕ್ಕಾಗಿ ಪುಟಾಣಿಗಳಿಗೆ ಕೃಷಿ ಪಾಠ

ABOUT THE AUTHOR

...view details