ಕರ್ನಾಟಕ

karnataka

ಆಸ್ಪತ್ರೆ ಮೇಲೆ ಕಲ್ಲು ತೂರಾಟ: ಪ್ರಕರಣ ದಾಖಲಿಸಲು ಮುಂದಾದ ವೈದ್ಯರು

By

Published : Aug 31, 2020, 11:38 AM IST

ವಿಜಯಪುರದಲ್ಲಿ ಕೊರೊನಾದಿಂದ ಸಾವಿಗೀಡಾದ ವ್ಯಕ್ತಿಯ ಮೃತದೇಹವನ್ನು ರೋಗಿಯ ಸಂಬಂಧಿಕರು ತೆಗೆದುಕೊಂಡು ಹೋಗಿದ್ದು, ಘಟನೆಗೆ ಸಂಬಂಧಿಸಿದಂತೆ ಗಲಾಟೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಡಾ. ದೀಪಕ ಚವ್ಹಾಣ ಸ್ಪಷ್ಟಪಡಿಸಿದ್ದಾರೆ.

 ಡಾ. ದೀಪಕ ಆರ್ ಚವ್ಹಾಣ
ಡಾ. ದೀಪಕ ಆರ್ ಚವ್ಹಾಣ

ವಿಜಯಪುರ: ಕೊರೊನಾ ಸೋಂಕಿತ ವ್ಯಕ್ತಿಯ ಸಾವಿನಿಂದ ರೊಚ್ಚಿಗೆದ್ದ ಸಂಬಂಧಿಕರು ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಪ್ರಕರಣ ದಾಖಲಿಸಲು ವೈದ್ಯರು ಮುಂದಾಗಿದ್ದಾರೆ.

ಈ ಸಂಬಂಧ ಮಾತನಾಡಿರುವ ವಿಜಯಪುರ ಬಂಜಾರಾ ಆಸ್ಪತ್ರೆ ಆಡಳಿತಾಧಿಕಾರಿ ಡಾ. ದೀಪಕ ಆರ್ ಚವ್ಹಾಣ, ರೋಗಿ ಆಸ್ಪತ್ರೆಗೆ ಬಂದಾಗ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಕೊರೊನಾ ಪಾಸಿಟಿವ್ ಇತ್ತು. ಪ್ರತಿದಿನ ಐದು ಜನ ವೈದ್ಯರ ತಂಡ ರೋಗಿಯ ಆರೋಗ್ಯ ತಪಾಸಣೆ ನಡೆಸಿದ್ದಾರೆ. ನಿನ್ನೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರ ಸಂಬಂಧಿಕರಿಗೆ ತಿಳಿಸಿದ್ದೆವು. ಅವರು ಚಿಕಿತ್ಸೆ ಮುಂದುವರೆಸಿ ಎಂದು ಕೇಳಿದ್ದರು. ಅಲ್ಲದೇ ರೋಗಿಯ ಸಂಬಂಧಿಕರು ಹಣವನ್ನೂ ಕಟ್ಟಿದ್ದರು ಎಂದು ಹೇಳಿದ್ದಾರೆ.

ಇನ್ನು ರೋಗಿ ಸಾವಿಗೀಡಾದ ಹಿನ್ನೆಲೆ ಸಂಬಂಧಿಕರಿಗೆ ಈ ಕುರಿತು ಮಾಹಿತಿ ನೀಡಿದ್ದೆವು. ಆದರೆ ಯಾರೋ ರೋಗಿಗೆ ಇಂಜೆಕ್ಷನ್ ನೀಡಿದ್ದರಿಂದ ಸಾವಿಗೀಡಾಗಿದ್ದಾರೆ ಎಂದು ಸುಳ್ಳು ಸುದ್ದಿ ನೀಡಿದ್ದಾರೆ. ಹಾಗಾಗಿ ರೋಗಿಯ ಸಂಬಂಧಿಕರು ವೈದ್ಯರು ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ತಕರಾರು ಮಾಡಿ, ಮಾಸ್ಕ್ ಧರಿಸದೆ ಐಸಿಯುಗೆ ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಅದನ್ನು ತಡೆದಾಗ ರಂಪಾಟ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿಸಿದರು.

ಸಾವಿಗೀಡಾದ ವ್ಯಕ್ತಿಯ ಮೃತದೇಹವನ್ನು ರಾತ್ರಿಯೇ ರೋಗಿಯ ಸಂಬಂಧಿಕರು ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗಲಾಟೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಡಾ. ದೀಪಕ ಆರ್ ಚವ್ಹಾಣ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details