ವಿಜಯಪುರ:21ನೇ ಶತಮಾನ ಭಾರತೀಯರ ಶತಮಾನವಾಗಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಜಯಪುರ ಸೈನಿಕ ಶಾಲೆಯ 56ನೇ ವಾರ್ಷಿಕ ಕ್ರೀಡಾಕೂಟ ಸಮಾರೋಪ ನಗರದ ಸೈನಿಕ ಶಾಲೆಯ 56ನೇ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಂದಿನ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ ಹಾಗೂ ಬಿ.ಡಿ. ಜತ್ತಿಯವರ ಶ್ರಮ ಮತ್ತು ಮಾಜಿ ಶಿಕ್ಷಣ ಮಂತ್ರಿ ಎಸ್. ಆರ್. ಕಂಠಿಯವರ ಪ್ರಯತ್ನದಿಂದ ವಿಜಯಪುರದಲ್ಲಿ ಸೈನಿಕ ಶಾಲೆ ಪ್ರಾರಂಭವಾಯಿತು. ಈ ಶಾಲೆಯಲ್ಲಿ ಓದಿದ 600ಕ್ಕೂ ಹೆಚ್ಚು ಮಕ್ಕಳು ವಾಯುಸೇನೆ, ನೌಕಾದಳ ಹಾಗೂ ಭೂ ಸೇನೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಮುಧೋಳದ ರಮೇಶ ಹಲಗಲಿ ಭಾರತೀಯ ಸೇನೆಯ ಡೆಪ್ಯೂಟಿ ಚೀಫ್ ಆಗಿ ನಿವೃತ್ತಿ ಹೊಂದಿದ್ದಾರೆ. ಅವರು ವಿಜಯಪುರ ಸೈನಿಕ ಶಾಲೆಯಲ್ಲಿ ಬೆಳೆದವರು ಎಂದು ಹೇಳಲು ಹೆಮ್ಮೆಯೆನಿಸುತ್ತಿದೆ ಎಂದರು.
ಕಳೆದ ಐದೂವರೆ ವರ್ಷದಲ್ಲಿ 190 ದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಕೀರ್ತಿ, ಗೌರವ ಹೆಚ್ಚಿಸಿದ್ದಾರೆ. ಇವರೊಂದಿಗೆ ನಾಡಿನ ಜನತೆ ಕೈ ಜೋಡಿಸಿದ್ದರಿಂದ ಯುವ ದೇಶ ಭಾರತ ಎಂಬ ಕೀರ್ತಿ ಗೌರವ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖೆಯಿಂದ 2.45 ಕೋಟಿ ವೆಚ್ಚದಲ್ಲಿ ಶಾಲೆಯ ಹೊರ ಕ್ರೀಡಾಂಗಣ ಹಾಗೂ ಸುಮಾರು 2 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಹಣ ಮಂಜೂರು ಮಾಡಲಾಗಿದೆ ಎಂದರು.
ಕಾರ್ಯಕ್ರಮ ಆರಂಭಕ್ಕೂ ಮೊದಲು ಸೈನಿಕ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಪ್ರಾಚಾರ್ಯರು ಹಾಗೂ ಭಾರತೀಯ ನೌಕಾದಳದ ಕ್ಯಾಪ್ಟನ್ ವಿನಯ ತಿವಾರಿ ಮತ್ತು ಉಪ ಪ್ರಾಚಾರ್ಯ ನೌಕಾದಳದ ಕಮಾಂಡರ್ ರವಿಕಾಂತ ಶುಕ್ಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.