ವಿಜಯಪುರ:ಸರ್ಕಾರ ಹಾಗೂ ಪಕ್ಷದಲ್ಲಿನ ಬದಲಾವಣೆಯ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದಾರೆ.
ಸಚಿವ ಸಂಪುಟ ಕುರಿತಂತೆ ಯತ್ನಾಳ್ ಮಾತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಬಲ ಪಡಿಸಲು ಸಚಿವ ಸಂಪುಟದಲ್ಲಿ ಹಾಗೂ ಪಕ್ಷದ ಸಂಘಟನೆಯಲ್ಲಿ ಬದಲಾವಣೆಯಾಗಲಿದೆ ಎಂದು ಇತ್ತೀಚೆಗೆ ಸಿಎಂ ಸಹ ಹೇಳಿದ್ದಾರೆ. ಪ್ರಧಾನಿ ಅವರ ಗುಪ್ತಚರ ಇಲಾಖೆ ಎಲ್ಲವನ್ನೂ ನೋಡುತ್ತಿದೆ. ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಪ್ರಧಾನಿ ಗಮನಿಸುತ್ತಿದ್ದಾರೆ. ಸಂಕ್ರಾಂತಿ ಬಳಿಕ ಮೋದಿ ದೊಡ್ಡ ನಿರ್ಧಾರ ತೆಗೆದುಕೊಳ್ತಾರೆ. ಕಳೆದ ಸಂಕ್ರಾಂತಿಗೆ ಹೇಳಿದ್ದೆ, ಅದರಂತೆ ಒಂದು ವಿಕೆಟ್ ಹಾರಿದೆ. ಈ ಸಂಕ್ರಾಂತಿಯವರೆಗೆ ಕಾಯಿರಿ ಎಂದರು.
ಸಿಎಂ ವಿದೇಶ ಪ್ರವಾಸ:
ಸಿಎಂ ವೀಸಾ ಬಂದಿದ್ದರೆ ನನಗೆ ತೋರಿಸಿ, ಮುಖ್ಯಮಂತ್ರಿಗಳ ಪ್ರವಾಸ ಇಲ್ಲ, ಇದ್ದರೆ ಗೊತ್ತಾಗುತ್ತಿತ್ತು. ಮುಖ್ಯಮಂತ್ರಿಗಳ ಚಲನವಲನ ಸಾರ್ವಜನಿಕವಾಗಿರುತ್ತದೆ. ನಾನು ಸಿಎಂ ಬದಲಾವಣೆ ಬೇಡ ಅನ್ನೋದು ಇಲ್ಲ, ಬೇಕು ಅನ್ನೋದು ಇಲ್ಲ, ಇದು ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಯತ್ನಾಳ್ ಅಡ್ಡಗೋಡೆ ಮೇಲೆ ದೀಪ ಇಟ್ಟರು.
ಗಟ್ಸ್ ಬೇಕು:
ಗಟ್ಸ್ ಇರೋರು ಗೃಹ ಸಚಿವರಾಗಬೇಕು. ನಮ್ಮಂತವರ ಕೈಗೆ ಕೊಟ್ರೆ ಬರೋಬ್ಬರಿ ಮಾಡ್ತೀವಿ. ದೇಶ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೆವು. ಈಗಿನ ಗೃಹಮಂತ್ರಿ ಒಳ್ಳೆಯರು, ಪ್ರಾಮಾಣಿಕರು. ಆರಗ ಜ್ಞಾನೇಂದ್ರ ಅರಣ್ಯ, ಕಂದಾಯ, ಗ್ರಾಮೀಣಾಭಿವೃದ್ಧಿಗೆ ಸೂಕ್ತರಿದ್ದಾರೆ ಎಂದು ಹೇಳಿದ್ರು.
ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ವಾಗ್ದಾಳಿ :
ವಿಜಯಪುರಕ್ಕೆ ಯಾರು ಉಸ್ತುವಾರಿನೆ ಇಲ್ಲ, ಈಗ ಇರೋರು ಜೆಂಡಾ (ಧ್ವಜ) ಹಾರಿಸೋಕೆ ಮತ್ತು ಕೊರೊನಾ ಸಭೆ ನಡೆಸಲು ಮಾತ್ರ ಬರ್ತಾರೆ. ಕೆಡಿಪಿ ಸಭೆ ಮಾಡೋಕೆ ಬರೋಲ್ಲ. ಆದಷ್ಟು ಬೇಗ ಉಸ್ತುವಾರಿ ಬದಲಾವಣೆ ಆಗುತ್ತದೆ. ಜನವರಿ 14 ರ ಬಳಿಕ ಸಚಿವ ಸಂಪುಟ ಪುನರ್ ರಚನೆಯಾಗುತ್ತದೆ. ಇದರ ಬಗ್ಗೆ ಸಿಎಂ ಸುಳಿವು ಕೊಟ್ಟಿದ್ದಾರೆ. ಎಲ್ಲಾ ಜಿಲ್ಲೆಗೂ ಸೂಕ್ತ ಪ್ರಾತಿನಿಧ್ಯ ಸಿಗಲಿದೆ. ಆ ಸ್ಥಾನಕ್ಕೆ ಸೂಕ್ತ ಇರುವವರು ಉಸ್ತುವಾರಿ ಸಚಿವರಾಗ್ತಾರೆ. ನನಗೆ ಪಕ್ಷ ಸಿಹಿ ಸುದ್ದಿ ಕೊಡಲಿದೆ ಎಂದು ಹೇಳಿದ್ರು.
ಬಂದ್ನಿಂದ ಜನಸಾಮಾನ್ಯರಿಗೆ ತೊಂದರೆ:
ಈಗಾಗಲೇ ಸಿಎಂ ಅವರು ಕನ್ನಡಪರ ಸಂಘಟನೆಗಳಿಗೆ ಬಂದ್ ಮಾಡದಂತೆ ವಿನಂತಿ ಮಾಡಿದ್ದಾರೆ. ಈ ರೀತಿ ಮಾಡೋವುದರಿಂದ ಯಾವುದೇ ಲಾಭವಿಲ್ಲ. ಮಹಾರಾಷ್ಟ್ರದಲ್ಲಿ ಘಟನೆಯಾಗಿದೆ. ಹಾಗಾಗಿ ಕರ್ನಾಟಕ ಬಂದ್ ಮಾಡೋದ್ರಿಂದ ವ್ಯಾಪಾರಸ್ಥರಿಗೆ, ಜನ ಸಾಮಾನ್ಯರಿಗೆ ಸಮಸ್ಯೆ ಆಗಲಿದೆ. ಮೊದಲೇ ಕೊರೊನಾದಿಂದ ಆರ್ಥಿಕ ವ್ಯವಸ್ಥೆ ಬುಡಮೇಲಾಗಿದೆ. ಮೇಲಿಂದ ಮೇಲೆ ಈ ರೀತಿ ಬಂದ್ ಮಾಡುವುದರಿಂದ ಸರ್ಕಾರವನ್ನು ದಿವಾಳಿಯತ್ತ ನಾವೇ ತೆಗೆದುಕೊಂಡು ಹೋದಂತಾಗುತ್ತದೆ ಎಂದರು.
ಈಗಾಗಲೇ ವಿಧಾನಸಭೆಯಲ್ಲಿ ಎಂಇಎಸ್ ಕಿಡಿಗೇಡಿಗಳ ವಿರುದ್ಧ ಎಲ್ಲಾ ಪಕ್ಷದವರು ಸೇರಿ ಸರ್ವಾನುಮತದಿಂದ ನಿರ್ಣಯ ಮಾಡಿವೆ. ಮಹಾರಾಷ್ಟ್ರ ಸರ್ಕಾರದೊಂದಿಗೆ ಕರ್ನಾಟಕ ಡಿಜಿ, ಐಜಿಪಿ, ಹೋಂ ಸೆಕ್ರೆಟರಿ ಮಾತನಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ದೇಶದಲ್ಲಿ ಅನೇಕ ಭಾಷೆಗಳಿವೆ. ಎಲ್ಲದಕ್ಕೂ ಗೌರವ ಕೊಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ ಮರಾಠಿ ಮತ್ತು ಕನ್ನಡ ಎಂದು ಜಗಳ ಹಚ್ಚಿ, ರಾಜಕೀಯ ಲಾಭಕ್ಕಾಗಿ ಒಂದು ರಾಷ್ಟ್ರೀಯ ಪಕ್ಷದ ಸಂಚಿನಿಂದ ಧ್ವಜ ಸುಡಲಾಗಿದೆ ಎಂದು ಯತ್ನಾಳ್ ಆರೋಪಿಸಿದರು.
ಬೆಳಗಾವಿಯಲ್ಲಿ ಪುಂಡಾಟಿಕೆ ಮಾಡಿದವರ ವಿರುದ್ಧ ಸರ್ಕಾರ ಗಂಭೀರ ಕ್ರಮ ತೆಗೆದುಕೊಂಡಿದೆ. ಅವರ ವಿರುದ್ಧ ಗೂಂಡಾ ಆ್ಯಕ್ಟ್ ತೆರೆಯೋಕೆ ಮುಂದಾಗಿದೆ. ಸರ್ಕಾರ ಇಷ್ಟೆಲ್ಲ ಭರವಸೆ ಕೊಟ್ಟ ಮೇಲೂ ಹೋರಾಟ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ : BIG BREAKING... ನಾಳೆ ಕರ್ನಾಟಕ ಬಂದ್ ಇಲ್ಲ: ಸಿಎಂ ಸಂಧಾನ ಸಭೆ ಸಕ್ಸಸ್