ಮುದ್ದೇಬಿಹಾಳ: ತಾಲೂಕಿನ ಬಿಜ್ಜೂರ ಗ್ರಾಪಂನಲ್ಲಿ ಅಕ್ರಮ ನಡೆಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಬಿಜ್ಜೂರ ಗ್ರಾಮಸ್ಥರು, ದಲಿತಪರ ಸಂಘಟನೆಗಳ ಹೋರಾಟಗಾರರು ಬುಧವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಹೋರಾಟಗಾರರಾದ ಮಲ್ಲು ತಳವಾರ, ಎಂ.ಬಿ.ದಖನಿ, ಜಗದೀಶ ಜಗ್ಲರ್ ಮಾತನಾಡಿ, ಬಿಜ್ಜೂರ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಎಸಗಿ ವಸತಿ ಯೋಜನೆಯಡಿ ಲಕ್ಷಾಂತರ ರೂಪಾಯಿಗಳನ್ನು ಗ್ರಾಪಂ ಅಧಿಕಾರಿಗಳು ಲಪಟಾಯಿಸಿದ್ದಾರೆ. ಅಲ್ಲದೇ ಬಿಜ್ಜೂರ ಹಾಗೂ ಸುಲ್ತಾನಪುರದ ಸರ್ಕಾರಿ ಜಾಗವಾದ ಸರ್ವೇ ನಂಬರ್ 3, 60, 61, 79, 81, 82, 187, 306, 309, 311,316, 333, 334, 516, 588 ತಿದ್ದುಪಡಿ ಮಾಡಲಾಗಿದ್ದು, ಈ ಬಗ್ಗೆ ದೂರು ಸಲ್ಲಿಸಿದ್ದೇವೆ. ಇಲ್ಲಿಯವರೆಗೂ ಅಧಿಕಾರಿಗಳು ಕ್ರಮ ಕೈಗೊಳ್ಳುವ ಬಗ್ಗೆ ಚಕಾರವೆತ್ತುತ್ತಿಲ್ಲ. ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು.
ಓದಿ: ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದ ಮಹಿಳಾ ಕಾಯಕೋತ್ಸವ
ಗ್ರಾಪಂ ದಾಖಲೆಗಳು ಒಂದು ವೇಳೆ ಸಿಗದೇ ಇದ್ದರೆ ಇಂತವರ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಧಿನಿಮಯ 2010ರ ಸಂಖ್ಯೆ ಸರ್ಕಾರದ ಆದೇಶ ಕಲಂ ಪ್ರಕಾರ ಸಂಬಂಧಿಸಿದ ಅಧಿಕಾರಿಗಳು ದೂರು ದಾಖಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.