ಕರ್ನಾಟಕ

karnataka

ETV Bharat / state

ಕೂಡಲಸಂಗಮದಲ್ಲಿ ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ

ನಾಡಿನ ಶ್ರೇಷ್ಠ ಸಂತರಾಗಿದ್ದ ಸಿದ್ದೇಶ್ವರ ಸ್ವಾಮೀಜಿಯವರ ಅಸ್ಥಿ ವಿಸರ್ಜನೆ ಕಾರ್ಯ ಇಂದು ಕೂಡಲಸಂಗಮದಲ್ಲಿ ನೆರವೇರಿತು. ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ವಿಶೇಷ ವಾಹನದಲ್ಲಿ‌ ಬೆಳಗ್ಗೆ 5 ಗಂಟೆಗೆ ಚಿತಾಭಸ್ಮ ತೆಗೆದುಕೊಂಡು ಹೋಗಲಾಗಿತ್ತು.

By

Published : Jan 8, 2023, 8:45 AM IST

Updated : Jan 8, 2023, 1:47 PM IST

siddheshwar Swamiji chitabhasma
ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ

ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ

ವಿಜಯಪುರ: ನಡೆದಾಡುವ ದೇವರೆಂದೇ ಖ್ಯಾತಿ ಗಳಿಸಿದ್ದ ಶ್ರೀ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ಇಂದು ಬೆಳಗ್ಗೆ ತ್ರಿವೇಣಿ ಸಂಗಮ ಸುಕ್ಷೇತ್ರ ಕೂಡಲಸಂಗಮದಲ್ಲಿ ವಿಧಿವಿಧಾನದಂತೆ ವಿಸರ್ಜನೆ ಮಾಡಲಾಯಿತು. ದೋಣಿಯಲ್ಲಿ ಶ್ರೀಗಳ ಚಿತಾಭಸ್ಮ ಇರಿಸಿಕೊಂಡು ತೆರಳಿದ ಬಸವಲಿಂಗ ಸ್ವಾಮೀಜಿ, ಪಂಚಮಸಾಲಿ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗು ಜ್ಞಾನಯೋಗಾಶ್ರಮದ ಸ್ವಾಮೀಜಿ ನದಿಗೆ ಅರ್ಪಿಸಿದರು. ಸಂಜೆ 5 ಗಂಟೆ ಗೋಕರ್ಣಕ್ಕೆ ತೆರಳಿ ಸಮುದ್ರದಲ್ಲಿ ಅಸ್ಥಿ ವಿಸರ್ಜನೆ ಕಾರ್ಯ ನೆರವೇರಲಿದೆ.‌

ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಅಸ್ಥಿಯನ್ನು ಕೂಡಲಸಂಗದಲ್ಲಿ ವಿಸರ್ಜಿಸಿದ ಬಳಿಕ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಮಾಧ್ಯಮಗಳ ಜೊತೆ ಮಾತನಾಡಿದರು. ಮೂರು ನದಿಗಳ ಸಂಗಮ, ಇದು ಬಸವಣ್ಣ ಮತ್ತು ಸಿದ್ದೇಶ್ವರ ಸ್ವಾಮೀಜಿಗಳ ಪುಣ್ಯಕ್ಷೇತ್ರ. ಆದ್ದರಿಂದ ಈ ಪುಣ್ಯ ಸ್ಥಳದಲ್ಲಿ ಈ ಕಾರ್ಯಕ್ರಮ ನೆರವೇರಿಸಿದ್ದು, ನಮ್ಮೆಲ್ಲರಿಗೂ ಸಂತೋಷ ಕೊಟ್ಟಿದೆ. ಜೊತೆಗೆ ಸಿದ್ದೇಶ್ವರ ಸ್ವಾಮೀಜಿಗಳಿಗೂ ಸಂತಸ ಕೊಟ್ಟಿರುತ್ತೆ ಅಂತಾ ಭಾವಿಸಿದ್ದೇವೆ ಎಂದರು.

ಎಲ್ಲ ಕಾರ್ಯಗಳು ಸಿದ್ದೇಶ್ವರ ಸ್ವಾಮೀಜಿಯವರ ಇಚ್ಛೆಯಂತೆಯೇ ನೆರವೇರುತ್ತಿವೆ. ಅವರ ಶಕ್ತಿಯೇ ನಮ್ಮೆಲ್ಲರಲ್ಲಿ ಈ ಕಾರ್ಯವನ್ನು ಮಾಡಿಸುತ್ತಿದೆ. ಗೋಕರ್ಣದಲ್ಲಿಯೂ ಇದೇ ರೀತಿಯ ಕಾರ್ಯಕ್ರಮ ಮಾಡುತ್ತೇವೆ. ಸ್ವಾಮೀಜಿಗಳು ಪ್ರಾಣಿ ಪಕ್ಷಿಗಳ ಮೇಲೆ ಬಹಳ ಪ್ರೀತಿ ಇಟ್ಟಿದ್ದರು. ಈಗ ಪಕ್ಷಿಗಳು ಕೂಡ ಮೌನವಾಗಿವೆ ಎಂದು ಭಾವನೆ ಇದೆ ಎಂದು ಬಸವಲಿಂಗ ಸ್ವಾಮೀಜಿ ತಿಳಿಸಿದರು.

ನೆರವೇರಿದ ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನಾ ಕಾರ್ಯ

ಇದಕ್ಕೂ ಮೊದಲು, ಮುಂಜಾನೆ ಶ್ರೀಗಳು ವಾಸವಿದ್ದ ಆಶ್ರಮದ ಕಟ್ಟಡದ ಕೋಣೆಯಿಂದ ದೊಡ್ಡ ಮಡಿಕೆಗಳಲ್ಲಿ ಸಂಗ್ರಹಿಸಿದ್ದ ಚಿತಾಭಸ್ಮವನ್ನು ವಿಶೇಷ ವಾಹನದಲ್ಲಿ ವಿಧಿವಿಧಾನಗಳಂತೆ ತಂದಿರಿಸಿ, ಕೂಡಲಸಂಗಮ ಮತ್ತು ಗೋಕರ್ಣಕ್ಕೆ ತೆರಳಲಾಯಿತು. ವಿವಿಧ ಮಠಾಧೀಶರು, ಆಶ್ರಮದ ಸಿಬ್ಬಂದಿ, ನೂರಾರು ಭಕ್ತರು ವಿವಿಧ ವಾಹನಗಳ ಮೂಲಕ ಅಸ್ಥಿ ಇರಿಸಿದ ವಿಶೇಷ ವಾಹನ ಹಿಂದೆ ತೆರಳಿದ್ದರು.

ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನ್ನಮ್ಮನವರ ಚಿತಾಭಸ್ಮದ ಅಂತಿಮ ದರ್ಶನ ಪಡೆದರು. ಬೆಳಗ್ಗೆ 4 ಗಂಟೆಗೆ ವಿಶೇಷ ವಾಹನಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ಶ್ರೀಗಳು ವಾಸಿಸುತ್ತಿದ್ದ ಕೋಣೆಯ ಮುಖ್ಯದ್ವಾರದಿಂದ ವಿಶೇಷ ವಾಹನದವರೆಗೆ ಹೂವಿನ‌ ಹಾಸಿಗೆ ಹಾಸಲಾಗಿತ್ತು. ‌ಬೆಳಗ್ಗೆ 3 ಗಂಟೆಯಿಂದಲೇ ಭಕ್ತರು ಚಿತಾಭಸ್ಮ ರವಾನೆಯ ಅಂತಿಮ ವಿಧಿವಿಧಾನ ನೋಡಲು ಆಗಮಿಸಿದ್ದರು.

ಇದನ್ನೂ ಓದಿ:ಸಿದ್ದೇಶ್ವರ ಶ್ರೀಗಳ ಅಸ್ಥಿ ಸಂಗ್ರಹ ಕಾರ್ಯ ಪೂರ್ಣ: ಭಾನುವಾರ ವಿಸರ್ಜನೆ

ಚಿತಾಭಸ್ಮ ಸಾಗಿದ ಮಾರ್ಗ: ಜ್ಞಾನಯೋಗಾಶ್ರಮದಿಂದ ಹೊರಟ ವಿಶೇಷ ವಾಹನ ಗಾಂಧಿಚೌಕ, ಬಾಗಲಕೋಟೆ ರಸ್ತೆಯಿಂದ ರಾಷ್ಟ್ರಿಯ ಹೆದ್ದಾರಿಯಲ್ಲಿ ಹಾದು ಹೋಗಿ ನಿಡಗುಂದಿ ಮಾರ್ಗವಾಗಿ ಕೂಡಲಸಂಗಮ ತಲುಪಿದೆ.‌ ಈ ಸಂದರ್ಭದಲ್ಲಿ 40ಕ್ಕೂ ಅಧಿಕ ಮಠಾಧೀಶರಿದ್ದರು. ವಿಶೇಷ ಅಸ್ಥಿ ವಿಸರ್ಜನಾ ವಾಹನದ ಜೊತೆಗೆ ಭಕ್ತರು ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ:ಶತಮಾನದ ಸಂತನಿಗೆ ರಂಗೋಲಿ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಹುಬ್ಬಳ್ಳಿಯ ಕಲಾವಿದ

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, 'ಶ್ರೀಗಳ ಆಶಯದಂತೆ ಅವರ ಅಂತ್ಯಕ್ರಿಯೆ ‌ನಡೆದಿತ್ತು. ಈಗ ಅಸ್ಥಿ ವಿಸರ್ಜನೆ ನಡೆಯುತ್ತಿದೆ. ನೂರಾರು ವಾಹನಗಳಲ್ಲಿ ಭಕ್ತರು ಸಂಗಮ ಹಾಗೂ ಗೋಕರ್ಣಕ್ಕೆ ತೆರಳುತ್ತಿದ್ದಾರೆ' ಎಂದರು. ಶ್ರೀಗಳ ಅಸ್ತಿ ವಿಸರ್ಜನೆಯ ಅಂತಿಮ ವಿಧಿವಿಧಾನ ನೋಡಲು ನೂರಾರು ಭಕ್ತೆಯರು ಆಗಮಿಸಿದ್ದರು. ಶ್ರೀಗಳು ಮತ್ತೊಮ್ಮೆ ಇದೇ ಪುಣ್ಯಭೂಮಿಯಲ್ಲಿ ಜನಿಸಿ ನಮಗೆ ದರ್ಶನ ನೀಡಬೇಕೆಂದು ಆಶಿಸಿ ಕಣ್ಣೀರು ಹಾಕಿದರು.

ಇದನ್ನೂ ಓದಿ:ಸಿದ್ಧೇಶ್ವರ ಶೀ ಲಿಂಗೈಕ್ಯ.. ಕಂಬನಿ ಮಿಡಿದ ಬೀದಿ ಬದಿ ವ್ಯಾಪಾರಿಗಳು, ಜಗದೀಶ್ ಶೆಟ್ಟರ್ ಸಂತಾಪ

Last Updated : Jan 8, 2023, 1:47 PM IST

ABOUT THE AUTHOR

...view details