ಕರ್ನಾಟಕ

karnataka

ಮಕ್ಕಳಿಗಾಗಿ ಪ್ರತಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್​ ಆರಂಭ : ಸಚಿವೆ ಶಶಿಕಲಾ ಜೊಲ್ಲೆ

By

Published : Aug 8, 2021, 1:55 PM IST

Updated : Aug 8, 2021, 2:56 PM IST

ತಜ್ಞರಿಂದ ಶಾಲೆಗಳನ್ನು ತೆರೆಯುವುದಕ್ಕೆ ವರದಿ ಸಲ್ಲಿಕೆ ಆಗಿದೆ. ಮೂರನೇ ಅಲೆ ಅಷ್ಟೊಂದು ಗಂಭೀರ ಪರಿಣಾಮ ಮಕ್ಕಳ ಮೇಲೆ ಬೀರುವುದಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಸರ್ಕಾರ ಶಾಲೆಗಳನ್ನು ತೆರೆಯಲು ನಿರ್ಧಾರ ಕೈಗೊಂಡಿದೆ..

Minister Sasikala Jolle
ಸಚಿವೆ ಶಶಿಕಲಾ ಜೊಲ್ಲೆ

ಮುದ್ದೇಬಿಹಾಳ :ಕೋವಿಡ್ ಮೂರನೇ ಅಲೆಯ ನಿಯಂತ್ರಣಕ್ಕೆ ಸರ್ಕಾರದ ಮಟ್ಟದಲ್ಲಿ ಕಳೆದ ಆರು ತಿಂಗಳಿನಿಂದ ಚರ್ಚೆಗಳು ನಡೆಯುತ್ತಿವೆ. ಮೂರನೇ ಅಲೆ ಬಾಧಿಸಿದರೆ ಮಕ್ಕಳಿಗೆ ಸಮಸ್ಯೆ ಆಗದಂತೆ ಪ್ರತಿ ತಾಲೂಕಾ ಆಸ್ಪತ್ರೆಯಲ್ಲಿ ಅವರಿಗಾಗಿ ಪ್ರತ್ಯೇಕ ಕೋವಿಡ್ ವಾರ್ಡ್​​​ ತೆರೆಯಲಾಗುವುದು ಎಂದು ಮುಜರಾಯಿ ಹಾಗೂ ಹಜ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಮುಜರಾಯಿ ಹಾಗೂ ಹಜ್ ಸಚಿವೆ ಶಶಿಕಲಾ ಜೊಲ್ಲೆ

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನ್ ಪ್ಲಾಂಟ್ ಕಾಮಗಾರಿಯನ್ನು ವೀಕ್ಷಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ತಾಲೂಕಾ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿಯೇ 10 ಬೆಡ್​ಗಳ ವ್ಯವಸ್ಥೆ ಇರಲಿದೆ. ತಾಲೂಕಾ ಆಸ್ಪತ್ರೆಯಲ್ಲಿ ನಿರ್ವಹಿಸಲಾಗದ ರೋಗಿಗಳಿದ್ದರೆ ಅವರನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್‌ ಮಾಡಿ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುವುದು.

ತಾಲೂಕಿಗೊಂದು ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು. ಮಕ್ಕಳಿಗಾಗಿ ಐಸಿಯು, ವೆಂಟಿಲೆಟರ್ ವ್ಯವಸ್ಥೆಯನ್ನು ಮಾಡಲಾಗುವುದು. ಕೊರೊನಾ ಬಂದ ಮಕ್ಕಳ ಜೊತೆಗೆ ಓರ್ವ ಪಾಲಕರಿಗೆ ಆಸ್ಪತ್ರೆಯಲ್ಲಿ ಮಗುವನ್ನು ನೋಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು.

ತಜ್ಞರಿಂದ ಬಂದ ವರದಿ ಬಳಿಕ ಈ ತೀರ್ಮಾನ :ತಜ್ಞರಿಂದ ಶಾಲೆಗಳನ್ನು ತೆರೆಯುವುದಕ್ಕೆ ವರದಿ ಸಲ್ಲಿಕೆ ಆಗಿದೆ. ಮೂರನೇ ಅಲೆ ಅಷ್ಟೊಂದು ಗಂಭೀರ ಪರಿಣಾಮ ಮಕ್ಕಳ ಮೇಲೆ ಬೀರುವುದಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಸರ್ಕಾರ ಶಾಲೆಗಳನ್ನು ತೆರೆಯಲು ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ಪ್ಲಾಂಟ್‌ ಮಷಿನ್ ಬರುವುದು ವಿಳಂಬವಾಗಿದ್ದು, ಎರಡನೇ ಅಲೆಯ ತೀವ್ರತೆ ಓಡಾಟದ ಮಧ್ಯೆ ಸಮಸ್ಯೆ ಇದ್ದು, ಪಟ್ಟಣದ ಆಸ್ಪತ್ರೆಗೆ 100 ಕೆ.ವಿ ಜನರೇಟರ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ತಿಂಗಳು ಮುಗಿಯುವುದರಲ್ಲಿ ಪ್ಲಾಂಟ್‌ಗೆ ಮಷಿನ್‌ಗಳ ಜೋಡಣೆ ಕಾರ್ಯ ಮುಗಿಯಲಿದೆ ಎಂದು ಹೇಳಿದರು.

ಅಳಲು ತೋಡಿಕೊಂಡ ದಲಿತ ಮುಖಂಡರು :ಇದೇ ವೇಳೆ ದಲಿತರ ಮೇಲೆ ಪಿಎಸ್‌ಐ ಎಂ ಬಿ ಬಿರಾದಾರ್ ದೌರ್ಜನ್ಯ ನಡೆಸುತ್ತಿದ್ದು, ಅವರನ್ನು ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿ ದಲಿತ ಮುಖಂಡರು ಸಚಿವೆ ಎದುರಿಗೆ ಕಣ್ಣೀರು ಹಾಕುತ್ತಾ ಅಳಲು ತೋಡಿಕೊಂಡರು.

ಸಚಿವೆ ಬಳಿ ಅಳಲು ತೋಡಿಕೊಂಡ ದಲಿತ ಮುಖಂಡರು

ಓದಿ: ಖಾತೆ ಹಂಚಿಕೆ ಬಗ್ಗೆ ನನಗೆ ಅಸಮಾಧಾನವಿದೆ ; ಮುಂದಿನ 2-3 ದಿನಗಳಲ್ಲಿ ನಿರ್ಧಾರ ತಿಳಿಸುವೆ - ಸಚಿವ ಎಂಟಿಬಿ ಟ್ವೀಟ್‌

ತಾಲೂಕಿನ ಕೃಷ್ಣಾ ನದಿ ತೀರದ ಹಳ್ಳಿಗಳ ಪ್ರವಾಹ ಪರಿಸ್ಥಿತಿ ಅವಲೋಕಿಸಿ ಬಳಿಕ ಊಟಕ್ಕೆಂದು ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಸಚಿವರನ್ನು ಭೇಟಿಯಾದ ದಲಿತ ಮುಖಂಡರು, ನಮಗೆ ಅನ್ಯಾಯವಾಗುತ್ತಿದೆ. ಎರಡು ಬಾರಿ ಹೋರಾಟ ಮಾಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಆದರೆ, ಪಿಎಸ್‌ಐ ಬಿರಾದಾರ್‌ ನಮ್ಮ ಜನಾಂಗದವರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ.

ಮೂರನೇ ಹಂತದ ಹೋರಾಟವನ್ನೂ ಹಮ್ಮಿಕೊಂಡಿದ್ದಾಗಿ ಕರಪತ್ರಗಳನ್ನು ಸಚಿವೆಗೆ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರುಗಿಸುವುದಾಗಿ ದಲಿತ ಮುಖಂಡರಿಗೆ ಭರವಸೆ ನೀಡಿದರು.

Last Updated : Aug 8, 2021, 2:56 PM IST

For All Latest Updates

ABOUT THE AUTHOR

...view details