ಕರ್ನಾಟಕ

karnataka

ETV Bharat / state

12 ವರ್ಷ ಏಕಾಂಗಿ ಹೋರಾಟ: ಜೈನ ಸಮಾಜದಿಂದ ಬಹಿಷ್ಕಾರ ಹಾಕಿದ್ದ ಆರೋಪಿಗಳಿಗೆ ಶಿಕ್ಷೆ ಪ್ರಕಟ - ಮುದ್ದೇಬಿಹಾಳ ಜೆಎಂಎಫ್‌ಸಿ ನ್ಯಾಯಾಲಯ

ಅನ್ಯ ಧರ್ಮೀಯರೊಂದಿಗೆ ಮಹಾವೀರ ಜಯಂತಿ ಆಚರಣೆ ಮಾಡಿದ್ದಕ್ಕೆ ಜೈನ ಸಮಾಜದಿಂದ ಬಹಿಷ್ಕಾರ ಹಾಕಿದ್ದ ನಾಲ್ವರು ಆರೋಪಿಗಳಿಗೆ ಪಟ್ಟಣದ ಸಿವಿಲ್​ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

Mahavira B. Sagari
ಮಹಾವೀರ ಬಿ.ಸಗರಿ

By

Published : Oct 29, 2020, 8:48 PM IST

ಮುದ್ದೇಬಿಹಾಳ: 2008ರಲ್ಲಿ ಅನ್ಯಧರ್ಮೀಯರೊಂದಿಗೆ ಮಹಾವೀರ ಜಯಂತಿ ಆಚರಣೆ ಮಾಡಿದ್ದಕ್ಕೆ ಜೈನ ಸಮಾಜದಿಂದ ಬಹಿಷ್ಕಾರ ಹಾಕಿದ್ದ ನಾಲ್ವರು ಆರೋಪಿಗಳಿಗೆ ಪಟ್ಟಣದ ಸಿವಿಲ್​ ನ್ಯಾಯಾಲಯದಿಂದ ಅ.28 ರಂದು ಶಿಕ್ಷೆ ಪ್ರಕಟವಾಗಿದೆ ಎಂದು ಪ್ರಕರಣದಲ್ಲಿ ವಾದಿಯಾಗಿದ್ದ ಪಟ್ಟಣದ ಅರಿಹಂತ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಬಿ.ಸಗರಿ ಹೇಳಿದರು.

ಅರಿಹಂತ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಬಿ.ಸಗರಿ

ಪಟ್ಟಣದ ಅರಿಹಂತ ಚಾರಿಟಬಲ್ ಟ್ರಸ್ಟ್​ ಕಚೇರಿಯಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 18/4/2008 ರಂದು ಜೈನ ಸಮಾಜದ ಆರೋಪಿತರಾದ ತವನಪ್ಪ ಮನೋಹರ ದಂಡಾವತಿ, ರವೀಂದ್ರ ಮನೋಹರ ದಂಡಾವತಿ, ಶಾಂತಪ್ಪ ಪದ್ಮಣ್ಣ ದಂಡಾವತಿ, ಜಯಪಾಲ ಪದ್ಮಣ್ಣ ಶೆಟ್ಟಿ ಇವರು ಅವಮಾನ ಆಗುವ ರೀತಿಯಲ್ಲಿ ಚರಿತ್ರೆ ಹಾಗೂ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಇಲ್ಲಸಲ್ಲದ ಆರೋಪ ಮಾಡಿ ನೂರಾರು ಕರಪತ್ರಗಳನ್ನು ಮುದ್ದೇಬಿಹಾಳ, ತಾಳಿಕೋಟಿ, ಸರೂರ, ಯರಝರಿ ಹಾಗೂ ಇನ್ನಿತರ ಜೈನ ಸಮಾಜದವರಿಗೆ ಹಂಚಿ ಮಾನನಷ್ಟ ಮಾಡುವ ದುರುದ್ದೇಶ ಹೊಂದಿದ್ದರು. ಇವರ ವಿರುದ್ಧವಾಗಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು 2009ರಲ್ಲಿ ದಾಖಲಿಸಿ 12 ವರ್ಷಗಳ ಕಾಲ ಅವಿರತವಾಗಿ ಕೇಸ್ ಸಿ.ಸಿ ನಂ:274/2009ರ ಅಡಿ ನ್ಯಾಯಾಲಯದಲ್ಲಿ ದೂರು ನೀಡಿ ಸ್ವತಃ ನಾನೇ ಕೇಸ್‌ನಲ್ಲಿ ವಾದ ಮಾಡಿ ಗೆಲುವು ಸಾಧಿಸಿದ್ದೇನೆ ಎಂದು ಅವರು ತಿಳಿಸಿದರು.

ನ್ಯಾಯಾಲಯದ ಆದೇಶ ಪ್ರತಿ

ಹನ್ನೆರಡು ವರ್ಷಗಳ ಕಾಲ ಏಕಾಂಗಿ ಹೋರಾಟ:ಆರೋಪಿಗಳ ಪರವಾಗಿ ವಕೀಲರಾದ ಎಸ್.ಎಂ.ಗುಡದಿನ್ನಿ, ಸಿ.ಆರ್.ಜೋಷಿ, ವಿಜಯಪುರದ ವಕೀಲರಾದ ಮಾಗಿ ಹಾಗೂ ಪಟೇಲ್ ಅವರು ವಾದ ಮಂಡಿಸಿದ್ದರು. ಇವರ ವಿರುದ್ಧವಾಗಿ ಮುದ್ದೇಬಿಹಾಳದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪಾರ್ಟಿ ಇನ್ ಪರ್ಸನ್ ಆಗಿ ಏಕಾಂಗಿಯಾಗಿ ವಾದವನ್ನು ಮಂಡಿಸಿದ್ದು ಬಹುಶಃ ಮುದ್ದೇಬಿಹಾಳದ ನ್ಯಾಯಾಲಯದ ಇತಿಹಾಸದಲ್ಲಿ ಪ್ರಥಮ ಪ್ರಕರಣವಾಗಿದ್ದು, ಇದು ಸತ್ಯಕ್ಕೆ ಜಯ ದೊರೆತಿದೆ ಎಂದರು.

ಜೆಎಂಎಫ್‌ಸಿ ಕೋರ್ಟ್ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಸುರೇಶ ಸವದಿ ಅವರು ನಾಲ್ವರು ಆರೋಪಿಗಳಿಗೆ ಸೆಕ್ಷನ್ ನಂ.255/2 ಸಿ.ಆರ್.ಪಿ.ಸಿ ಅಡಿ ಆರೋಪಿಗಳು ದೋಷಿಗಳೆಂದು ಪರಿಗಣಿಸಿ ತಲಾ ಐದು ಸಾವಿರ ರೂ.ದಂಡ ವಿಧಿಸಿದ್ದು ದೂರುದಾರರಾದ ತಮಗೆ 15,000ರೂ.ಗಳನ್ನು ಕೊಡಬೇಕು ಎಂದು ಆದೇಶಿಸಿದ್ದಾರೆ. ಒಂದು ವೇಳೆ, ದಂಡವನ್ನು ತುಂಬದಿದ್ದಲ್ಲಿ 3 ತಿಂಗಳ ಕಾಲ ಜೈಲು ಶಿಕ್ಷೆಗೆ ಒಳಪಡಿಸಬೇಕು ಎಂದು ಅ.28ರಂದು ನ್ಯಾಯಾಲಯ ಆದೇಶಿಸಿ ಪ್ರಕರಣ ಇತ್ಯರ್ಥಗೊಳಿಸಿದೆ ಎಂದು ಹೇಳಿದರು.

ABOUT THE AUTHOR

...view details