ವಿಜಯಪುರ: ರೈತ ವಿರೊಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ವಿವಿಧ ರೈತ ಪರ ಸಂಘಟನೆಗಳು ನಗರದ ರೈಲ್ವೆ ನಿಲ್ದಾಣಕ್ಕೆ ನುಗ್ಗಿ ರೈಲು ತಡೆಯಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದುಕೊಂಡರು.
ವಿಜಯಪುರದಲ್ಲಿ ರೈಲು ತಡೆಗೆ ಯತ್ನ: ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸ್ - protesters Attempt to stop train at Vijayapura
ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ವಿವಿಧ ರೈತ ಪರ ಸಂಘಟನೆಗಳು ಇಂದು ರೈಲು ತಡೆ ಚಳವಳಿ ನಡೆಸುತ್ತಿದ್ದು, ವಿಜಯಪುರದಲ್ಲಿ ಮುಂಬೈ-ಗದಗ ಎಕ್ಸ್ಪ್ರೆಸ್ ರೈಲು ಆಗಮಿಸುತ್ತಿದ್ದಂತೆ ಹೋರಾಟಗಾರರು ರೈಲು ನಿಲ್ದಾಣ ಒಳಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದುಕೊಂಡು ರೈಲ್ವೆ ಪೊಲೀಸ್ ಠಾಣೆಗೆ ಕರೆದೊಯ್ದರು.
ಬೆಳಗ್ಗೆಯಿಂದಲೇ ರೈಲು ನಿಲ್ದಾಣದ ಬಳಿ ಜಮಾಯಿಸಿದ ಹೋರಾಟಗಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈಲು ನಿಲ್ದಾಣದ ಒಳಗೆ ಪ್ರವೇಶಿಸದಂತೆ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಂಬೈ-ಗದಗ ಎಕ್ಸ್ಪ್ರೆಸ್ ರೈಲು ಆಗಮಿಸುತ್ತಿದ್ದಂತೆ ಹೋರಾಟಗಾರರು ರೈಲು ನಿಲ್ದಾಣದೊಳಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಅವಕಾಶ ನೀಡದೆ ಅವರನ್ನು ತಡೆದು ತಕ್ಷಣ ಪೊಲೀಸ್ ವಾಹನದಲ್ಲಿ ರೈಲ್ವೆ ಪೊಲೀಸ್ ಠಾಣೆಗೆ ಕರೆದೊಯ್ದರು.
ಇದಕ್ಕೂ ಮುನ್ನ ಮತನಾಡಿದ ರೈತ ಹೋರಾಟಗಾರ ಭೀಮಶಿ ಕಲಾದಗಿ, ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕೂಡಲೇ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.