ಕರ್ನಾಟಕ

karnataka

ರೇಷನ್ ಅಕ್ಕಿ ಕಡಿತಗೊಳಿಸಿ ಜೋಳ, ತೊಗರಿ ಬೇಳೆ ವಿತರಿಸಲು ಸಿಎಂಗೆ ಪ್ರಸ್ತಾವನೆ: ಶಾಸಕ ನಡಹಳ್ಳಿ

By

Published : Jan 26, 2021, 9:41 PM IST

ರೈತರ ಹಾಗೂ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಜೋಳ ಒಳ್ಳೆಯದು. ಹೆಚ್ಚಿನ ಪ್ರೋಟಿನ್ ಅಂಶವುಳ್ಳ ಜೋಳವನ್ನು ವಿತರಿಸಿ 30 ಕೆಜಿ ಅಕ್ಕಿ ನೀಡುವ ಬದಲು ಅದನ್ನು ಕಡಿತಗೊಳಿಸಿ ಒಂದು ಕೆಜಿ ತೊಗರಿ ಬೇಳೆ, ಹತ್ತು ಕೆಜಿ ಜೋಳ, ಹತ್ತು ಕೆಜಿ ಅಕ್ಕಿ ಕೊಟ್ಟರೆ ಬಡವರು, ಸಾಮಾನ್ಯರು ಬಳಕೆ ಮಾಡಿಕೊಳ್ಳುತ್ತಾರೆ.

Mla nadahalli
ನಡಹಳ್ಳಿ

ಮುದ್ದೇಬಿಹಾಳ(ವಿಜಯಪುರ): ಬಡವರು, ಜನಸಾಮಾನ್ಯರು ಉತ್ತರ ಕರ್ನಾಟಕ ಭಾಗದಲ್ಲಿ ಆಹಾರಕ್ಕಾಗಿ ಜೋಳ, ತೊಗರಿ ಬೇಳೆ ಬಳಸುತ್ತಾರೆ. ಈ ಹಿನ್ನೆಲೆಯಲ್ಲಿ ಪಡಿತರ ವ್ಯವಸ್ಥೆಯಡಿ ತೊಗರಿ ಬೇಳೆ, ಜೋಳ ನೀಡಲು ಬಜೆಟ್‌ ಪೂರ್ವ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅನುಷ್ಠಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ರೇಷನ್ ವಿತರಣೆ ಬಗ್ಗೆ ಮಾತನಾಡಿದ ಶಾಸಕ ನಡಹಳ್ಳಿ

ತಾಲೂಕಿನ ಮಡಿಕೇಶ್ವರ, ಪಡೇಕನೂರ ಗ್ರಾಮದಲ್ಲಿ ಪಿಡಬ್ಲ್ಯೂಡಿ ಇಲಾಖೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 12 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ಪ್ರತಿ ವರ್ಷ ಬೆಳೆಯಲಾಗುತ್ತಿದೆ. ರಾಜ್ಯದ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ ಸೇರಿದಂತೆ 15 ಜಿಲ್ಲೆಗಳಲ್ಲಿ ತೊಗರಿಯನ್ನು ಬೆಳೆಯಾಲಾಗುತ್ತಿದೆ. ಬಡವರಿಗೆ ತೊಗರಿ ಬೇಳೆಯನ್ನು ಕಡಿಮೆ ದರದಲ್ಲಿ ಪಿಡಿಎಸ್ ವ್ಯವಸ್ಥೆಯ ಮೂಲಕ ವಿತರಿಸಬೇಕು ಎಂಬ ಆಹಾರ ಖಾತೆ ಸಚಿವರಾದ ಉಮೇಶ್​ ಕತ್ತಿ ಅವರ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ ಎಂದು ಹೇಳಿದರು.

ಮುಂಬರುವ ಬಜೆಟ್ ಪೂರ್ವ ಸಭೆಯಲ್ಲಿ ಈ ಕುರಿತು ಮಂಡನೆ ಮಾಡುತ್ತೇವೆ. ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆ ಜೋಳವನ್ನು ಪಡಿತರ ವ್ಯವಸ್ಥೆಯಡಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲದೆ ಜೋಳಕ್ಕೆ ಬೆಂಬಲ ಬೆಲೆಯನ್ನು 2600ರಿಂದ 3500ರೂ.ಗಳಿಗೆ ಹೆಚ್ಚಿಸಬೇಕು ಎಂಬ ಪ್ರಸ್ತಾಪವನ್ನು ಸರ್ಕಾರದ ಮುಂದೆ ಇಡುತ್ತೇವೆ ಎಂದು ಹೇಳಿದರು.

ರೈತರ ಹಾಗೂ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಜೋಳ ಒಳ್ಳೆಯದು. ಹೆಚ್ಚಿನ ಪ್ರೋಟಿನ್ ಅಂಶವುಳ್ಳ ಜೋಳವನ್ನು ವಿತರಿಸಿ 30 ಕೆಜಿ ಅಕ್ಕಿ ನೀಡುವ ಬದಲು ಅದನ್ನು ಕಡಿತಗೊಳಿಸಿ ಒಂದು ಕೆಜಿ ತೊಗರಿ ಬೇಳೆ, ಹತ್ತು ಕೆಜಿ ಜೋಳ, ಹತ್ತು ಕೆಜಿ ಅಕ್ಕಿ ಕೊಟ್ಟರೆ ಬಡವರು, ಸಾಮಾನ್ಯರು ಬಳಕೆ ಮಾಡಿಕೊಳ್ಳುತ್ತಾರೆ. ಅದನ್ನು ಹೇಗೆ ವಿತರಿಸಬೇಕು ಎಂಬುದು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕೃಷಿ ಆಧಾರಿತ ಬೆಳೆಗಳಿಗೆ ಪೂರಕವಾಗಿರುವ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಮಂಗಳೂರು ಭಾಗದಲ್ಲಿ ಕುಚಲಕ್ಕಿ, ಬೆಂಗಳೂರು ಭಾಗದಲ್ಲಿ ರಾಗಿ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ABOUT THE AUTHOR

...view details