ಕರ್ನಾಟಕ

karnataka

ಮುದ್ದೇಬಿಹಾಳ ಪುರಸಭೆಯಲ್ಲಿ ಜೆಡಿಎಸ್‌ಗೆ ಪಟ್ಟ ಕಟ್ಟಲು ಕಾಂಗ್ರೆಸ್, ಪಕ್ಷೇತರರ ಸಾರಥ್ಯ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಭೇಟಿಯಾಗಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಪುರಸಭೆಯಲ್ಲಿ ಅಧಿಕಾರ ಸ್ಥಾಪನೆ ಕುರಿತು ಮಾಹಿತಿ ನೀಡಿದ್ದಾರೆ. ಏತನ್ಮಧ್ಯೆ, ಜೆಡಿಎಸ್ ಸದಸ್ಯೆ ಪ್ರತಿಭಾ ಅಂಗಡಗೇರಿ ಕಾಂಗ್ರೆಸ್​‌ಗೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿದ್ದರೂ ಅದನ್ನು ಅವರ ಪತಿ ರುದ್ರಗೌಡ ಅಂಗಡಗೇರಿ ತಳ್ಳಿ ಹಾಕಿದ್ದಾರೆ..

By

Published : Oct 27, 2020, 6:39 PM IST

Published : Oct 27, 2020, 6:39 PM IST

Muddebihala
ಡಿಕೆಶಿಯನ್ನು ಭೇಟಿಯಾದ ಸದಸ್ಯರು

ಮುದ್ದೇಬಿಹಾಳ:ತೀವ್ರ ಕುತೂಹಲ ಕೆರಳಿಸಿರುವ ಪಟ್ಟಣದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಅ.28 ರಂದು ನೂತನ ಸದಸ್ಯರುಗಳ ಎರಡೂವರೆ ವರ್ಷಗಳ ವನವಾಸ ಅಂತ್ಯವಾಗಲಿದೆ. ಏತನ್ಮಧ್ಯೆ ಮೀಸಲಾತಿ ಆಟದಲ್ಲಿ ಕೊನೆಗೂ ಕಾಂಗ್ರೆಸ್-ಜೆಡಿಎಸ್ ಸದಸ್ಯರ ಹೊಂದಾಣಿಕೆಗೆ ಜಯ ಲಭಿಸುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗಿದೆ. ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಸದಸ್ಯೆ ಪ್ರತಿಭಾ ರುದ್ರಗೌಡ ಅಂಗಡಗೇರಿ ಅಧ್ಯಕ್ಷ ಸ್ಥಾನಕ್ಕೇರುವುದು ಬಹುತೇಕ ಪಕ್ಕಾ ಆಗಿದೆ.

ಜೆಡಿಎಸ್ ಸದಸ್ಯೆ ಪ್ರತಿಭಾ ರುದ್ರಗೌಡ ಅಂಗಡಗೇರಿ

ಮುದ್ದೇಬಿಹಾಳ ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಬಲವಿದ್ದು, 8 ಕಾಂಗ್ರೆಸ್, 8 ಬಿಜೆಪಿ, 2 ಜೆಡಿಎಸ್ ಹಾಗೂ ಐವರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾಮಾನ್ಯ ವರ್ಗದ ಮಹಿಳೆಗೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಹಾಗೂ ಹಿಂದುಳಿದ ಅ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಪಡಿಸಲಾಗಿದೆ.

ಅ.28 ರಂದು ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆ :

ಮುದ್ದೇಬಿಹಾಳದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಅ.28ರಂದು ಸಭೆ ನಡೆಸುವುದಾಗಿ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಜಿ.ಎಸ್.ಮಳಗಿ ತಿಳಿಸಿದ್ದಾರೆ. ಅಂದು ಬೆಳಗ್ಗೆ 9 ಗಂಟೆಯಿಂದ 11 ರವರೆಗೆ ನಾಮಪತ್ರಗಳನ್ನು ಸಲ್ಲಿಸುವುದು, 1 ಗಂಟೆಯಿಂದ ನಾಮಪತ್ರ ಪರಿಶೀಲನೆ, ಬಳಿಕ 10 ನಿಮಿಷ ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳುವುದು ನಂತರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಲಿದೆ. ಈ ಪ್ರಕ್ರಿಯೆ ನಂತರ ಉಪಾಧ್ಯಕ್ಷ ಸ್ಥಾನಕ್ಕೂ ಆಯ್ಕೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಡಿಕೆಶಿಯನ್ನು ಭೇಟಿಯಾದ ಸದಸ್ಯರು :

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಭೇಟಿಯಾಗಿರುವ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಪುರಸಭೆಯಲ್ಲಿ ಅಧಿಕಾರ ಸ್ಥಾಪನೆ ಕುರಿತು ಮಾಹಿತಿ ನೀಡಿದ್ದಾರೆ. ಏತನ್ಮಧ್ಯೆ, ಜೆಡಿಎಸ್ ಸದಸ್ಯೆ ಪ್ರತಿಭಾ ಅಂಗಡಗೇರಿ ಕಾಂಗ್ರೆಸ್​‌ಗೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡಿದ್ದರೂ ಅದನ್ನು ಅವರ ಪತಿ ರುದ್ರಗೌಡ ಅಂಗಡಗೇರಿ ತಳ್ಳಿ ಹಾಕಿದ್ದಾರೆ. ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ನಮಗೆ ಬೆಂಬಲ ನೀಡಲು ಕೋರಿದ್ದು ಅದಕ್ಕೆ ಕಾಂಗ್ರೆಸ್, ಪಕ್ಷೇತರ ಸದಸ್ಯರು ಒಪ್ಪಿದ್ದಾರೆ ಎಂದು ಹೇಳಿದ್ದಾರೆ.

ಎರಡೇ ಸ್ಥಾನ ಗಳಿಸಿದ್ದರೂ ಅಧ್ಯಕ್ಷ ಗದ್ದುಗೆಗೆ ಜೆಡಿಎಸ್ ಸದಸ್ಯೆ :

23 ಸ್ಥಾನಗಳಲ್ಲಿ ಎರಡೇ ಸ್ಥಾನಗಳಲ್ಲಿ ಜಯ ಗಳಿಸಿರುವ ಜೆಡಿಎಸ್ ಸದಸ್ಯರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನಕ್ಕೇರುವ ಅವಕಾಶಗಳು ಒದಗಿ ಬಂದಿರುವುದು ಕಾಕತಾಳಿಯವೇ ಸರಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೆಡಿಎಸ್ ಸದಸ್ಯೆ ಪ್ರತಿಭಾ ರುದ್ರಗೌಡ ಅಂಗಡಗೇರಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪಕ್ಷೇತರ ಐವರು ಸದಸ್ಯರು, ಕಾಂಗ್ರೆಸ್‌ನ ಎಂಟು ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗಳಿಸಿದ್ದರೂ ಅಧ್ಯಕ್ಷ ಸ್ಥಾನದಲ್ಲಿ ತಮ್ಮ ಪಕ್ಷದ ಸದಸ್ಯೆ ಕೂಡಿಸಲಾಗಲಿಲ್ಲವೆಂಬ ಕೊರಗು ಪಕ್ಷದ ಹಿರಿಯ ನಾಯಕರಲ್ಲಿ ಕಾಡುತ್ತಿದೆ.

ಉಪಾಧ್ಯಕ್ಷ ಸ್ಥಾನ ಯಾರಿಗೆ :

ಪಕ್ಷೇತರರು ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಪಕ್ಷೇತರರಲ್ಲಿ ಹಾಗೂ ಕಾಂಗ್ರೆಸ್‌ನಲ್ಲಿ ಉಪಾಧ್ಯಕ್ಷ ಸ್ಥಾನ ಯಾರಿಗೆ ಬಿಟ್ಟುಕೊಡಬಹುದು ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಜಾತಿ ಲೆಕ್ಕಾಚಾರವೂ ಇದೆ:

ರೆಡ್ಡಿ ಸಮುದಾಯದ ಜೆಡಿಎಸ್ ಸದಸ್ಯೆ ಪ್ರತಿಭಾ ಅಂಗಡಗೇರಿ ಅವರು ಅಧ್ಯಕ್ಷರಾದರೆ ತಮಗೆ ನಷ್ಟವೇನೂ ಇಲ್ಲ ಎಂಬುದು ಕಾಂಗ್ರೆಸ್, ಬಿಜೆಪಿ ನಾಯಕರ ಲೆಕ್ಕಾಚಾರ. ಕಾರಣ ಪ್ರಮುಖ ಹುದ್ದೆಗಳಲ್ಲಿ ಅಧಿಕಾರದ ಗದ್ದುಗೆಯಲ್ಲಿರುವ ಹಿರಿಯ ನಾಯಕರು, ಪುರಸಭೆಯಲ್ಲಿ ತಮ್ಮ ಜಾತಿಯವರೇ ಅಧ್ಯಕ್ಷರಾಗುತ್ತಿದ್ದು, ಯಾಕೆ ಅಡ್ಡಿಪಡಿಸಬೇಕು ಎಂಬ ಮನೋಭಾವ ಹೊಂದಿರುವುದು ಸುಳ್ಳಲ್ಲ.

ಪಕ್ಷೇತರ ಸದಸ್ಯರಲ್ಲಿ ಐವರು ಬಿಜೆಪಿಯೊಂದಿಗೆ ಗುರುತಿಸಿಕೊಳ್ಳಲು ಮನಸ್ಸು ಮಾಡದ ಕಾರಣ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಜೈ ಎಂದಿರುವುದು ಈಗಾಗಲೇ ಅಜ್ಞಾತ ಸ್ಥಳದಲ್ಲಿರುವ ಸದಸ್ಯರ ಸಂಖ್ಯಾ ಬಲದ ಮೇಲೆ ಫಲಿತಾಂಶ ನಿಚ್ಚಳವಾಗಿದೆ.

ABOUT THE AUTHOR

...view details