ವಿಜಯಪುರ: ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಿರಿಯ ಅಧಿಕಾರಿಗಳು ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ಸಭೆ ನಡೆಸಿ ಚರ್ಚಿಸಿದರು.
ಜಿಲ್ಲೆಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಹಾಗೂ ರೆಮ್ಡೆಸಿವಿರ್ ಲಸಿಕೆ ಕೊರತೆ ಪರಿಹಾರದ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಹೊಸ ಮರಳು ನೀತಿ ಕರಡು ಪ್ರತಿ ಸಿದ್ದ:ಹೊಸ ಮರಳು ನೀತಿ ಕರಡು ಪ್ರತಿ ಸಿದ್ಧಪಡಿಸಿದ್ದು, ಈ ಕುರಿತು ಅಭಿಪ್ರಾಯ ಸಂಗ್ರಹಿಸಲು ರಾಜ್ಯದ ಎಲ್ಲ ಜಿಲ್ಲಾ ಆಡಳಿತಗಳಿಗೆ ಕಳುಹಿಸಲಾಗಿದೆ. ಈ ನೂತನ ಮರಳು ನೀತಿಗೆ ಅಭಿಪ್ರಾಯ ಪಡೆದ ನಂತರ ಶೀಘ್ರದಲ್ಲಿಯೇ ಹೊಸ ಮರಳು ನೀತಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. ನೂತನ ಮರಳು ನೀತಿ ಹಾಗೂ ನೂತನ ಗಣಿ ಅದಾಲತ್ ಬಗ್ಗೆಯೂ ರಾಜ್ಯಮಟ್ಟದಲ್ಲಿ ಅವಶ್ಯಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಆಕ್ಸಿಜನ್ ಕೊರತೆ ನೀಗಿಸುವಲ್ಲಿ ಹಾಗೂ ರೆಮ್ಡೆಸಿವಿರ್ ಲಸಿಕೆ ನಿರ್ವಹಣೆಯಲ್ಲಿ ಹಿರಿಯ ಅಧಿಕಾರಿಗಳಾದ ಔದ್ರಾಮ್ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಚಿವರ ಗಮನಕ್ಕೆ ತಂದರು.
ಕೊವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ:ಕೋವಿಡ್- 19 ನಿಯಂತ್ರಣ ಕ್ರಮಗಳು ಪರಿಣಾಮಕಾರಿಯಾಗಿ ಜಿಲ್ಲಾಡಳಿತದಿಂದ ಕೈಗೊಳ್ಳಲಾಗುತ್ತಿದೆ. ರಾಜ್ಯದ ಬಳ್ಳಾರಿ, ಚಾಮರಾಜನಗರ, ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಗೆ ಹೋಲಿಸಿದಾಗ, ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಮುತುವರ್ಜಿಯಿಂದ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈವರೆಗೆ 19 ಸಾವಿರ ಕೋವಿಡ್ ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಿ ಈವರೆಗೆ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ನಿತ್ಯ 350 ರಿಂದ 400 ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆಕ್ಸಿಜನ್ ಹಾಗೂ ರೆಮ್ಡೆಸಿವಿರ್ ಲಸಿಕೆ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತಿದೆ. ಅದರಂತೆ ಅಧಿಕಾರಿಗಳನ್ನು ನೇಮಿಸಿ ಔಷಧಗಳ ಸಮಸ್ಯೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಈವರೆಗೆ ರೆಮ್ಡೆಸಿವಿರ್, ಲಸಿಕೆಯ ಕೊರತೆಯಾಗಿಲ್ಲ. ವೈದ್ಯರ ಸಲಹೆ ಮತ್ತು ಪ್ರಿಸ್ಕ್ರಿಪ್ಷನ್ ಆಧಾರದ ಮೇಲೆ ಮಾತ್ರ ಈ ಲಸಿಕೆ ಪಡೆಯುವಂತೆ ಕೋವಿಡ್ ಸೋಂಕಿತರಲ್ಲಿ ಮನವಿ ಮಾಡಿದರು.
ಆಕ್ಸಿಜನ್ ಅಧಿಕ ಪ್ರಮಾಣದಲ್ಲಿದ್ದರೆ ಖಾಲಿ ಸಿಲಿಂಡರ್ಗಳ ಕೊರತೆ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸ್ಥಳೀಯವಾಗಿ, ಧಾರವಾಡ ಹಾಗೂ ಬಳ್ಳಾರಿಗಳಿಂದ ಆಕ್ಸಿಜನ್ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಏಕಕಾಲಕ್ಕೆ ಎರಡು ಸಲಕರಣೆಗಳನ್ನು ಹೊಂದಿರುವ ಆಕ್ಸಿಜನ್ ಪೂರೈಕೆ ಯಂತ್ರವನ್ನು ಪ್ರತಿ ಜಿಲ್ಲೆಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.