ಕರ್ನಾಟಕ

karnataka

ETV Bharat / state

ಮಣ್ಣೆತ್ತಿನ ಅಮಾವಾಸ್ಯೆ : ಬಸವ ಮೂರ್ತಿಗಳಿಗೆ ಪೂಜೆ.. ಮಳೆ-ಬೆಳೆ ಸಮೃದ್ಧಿಯಾಗಲೆಂದು ಪ್ರಾರ್ಥನೆ - ವಿಜಯಪುರದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಸಂಭ್ರಮ

ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ ಪ್ರಸಿದ್ಧವಾಗಿದೆ. ಈ ಹಬ್ಬದ ವಿಶೇಷತೆ ಎಂದರೆ ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಪೂಜಿಸುವುದು.

ಮಣ್ಣೆತ್ತಿನ ಅಮಾವಾಸ್ಯೆ
ಮಣ್ಣೆತ್ತಿನ ಅಮಾವಾಸ್ಯೆ

By

Published : Jun 28, 2022, 4:15 PM IST

ವಿಜಯಪುರ: ನಮ್ಮ ದೇಶದಲ್ಲಿ ಪ್ರಕೃತಿ ಆರಾಧನೆಗೆ ಹೆಚ್ಚು ಮಹತ್ವ. ನಮ್ಮ ಪೂರ್ವಜರು ಕಲ್ಲು-ಮಣ್ಣಿನಲ್ಲಿಯೇ ದೈವತ್ವವನ್ನು ಕಂಡವರು. ಅದೇ ರೀತಿ ಈಗಲೂ ಅಂತಹದ್ದೇ ವಿಶೇಷ ಆಚರಣೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದುಕೊಂಡು ಬಂದಿದೆ. ಈ ಹಬ್ಬದ ಹೆಸರು 'ಮಣ್ಣೆತ್ತಿನ ಅಮಾವಾಸ್ಯೆ'. ಇದರ ವಿಶೇಷತೆ ಅಂದ್ರೆ ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಪೂಜಿಸುವುದಾಗಿದೆ.

ಮಣ್ಣೆತ್ತಿನ ಅಮಾವಾಸ್ಯೆ ವಿಶೇಷತೆ ಬಗ್ಗೆ ಮಣ್ಣೆತ್ತುಗಳ ತಯಾರಕರು ಹಾಗೂ ಗೃಹಿಣಿ ಪ್ರತಿಭಾ ಮಾತನಾಡಿರುವುದು..

ಕೆರೆಯಿಂದ ತಂದ ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಪೂಜಿಸುವುದು ಈ ಹಬ್ಬದ ವಿಶೇಷ. ಮಣ್ಣಿಗೂ-ಎತ್ತಿಗೂ ಅವಿನಾಭಾವ ಸಂಬಂಧವಿದೆ. ಅಲ್ಲದೆ ಮಣ್ಣಿನ ಎತ್ತಿನ ಮೂರ್ತಿಗಳನ್ನು ಪೂಜಿಸಿದರೆ ಸಕಾಲದಲ್ಲಿ ಮಳೆ-ಬೆಳೆ ಆಗುತ್ತದೆ ಎನ್ನುವ ನಂಬಿಕೆ ರೈತರದ್ದು. ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ರೈತಾಪಿ ಜನರು ಪೂಜಿಸಿ ಸಂಭ್ರಮಪಡುವ ಈ ಹಬ್ಬ ಕಾರಹುಣ್ಣಿಮೆಯ ನಂತರ ಬರುತ್ತದೆ.

ಸಿಂಗರಿಸಿರುವ ಮಣ್ಣಿನ ಎತ್ತುಗಳು

ಜೋಡೆತ್ತುಗಳನ್ನು ನೋಡುವುದೇ ಸೊಗಸು: ಮಾರುಕಟ್ಟೆಯಿಂದ ತಂದ ಮಣ್ಣೆತ್ತುಗಳನ್ನು ಸಿಂಗರಿಸಿದ ಜೋಡೆತ್ತುಗಳನ್ನು ನೋಡುವುದೇ ಒಂದು ಸೊಗಸು. ನಂತರ ದೇವರ ಜಗುಲಿಯ ಮೇಲಿಟ್ಟು ಪೂಜೆಗೆ ಅಣಿಯಾಗುವ ಹೊತ್ತಿಗೆ ಮನೆಯ ಹೆಣ್ಣುಮಕ್ಕಳು ಹೋಳಿಗೆ, ಕಡಬು ಮುಂತಾದ ಸವಿಸವಿ ಅಡುಗೆಯನ್ನು ಸಿದ್ಧಪಡಿಸಿರುತ್ತಾರೆ. ಮನೆಯ ದನ-ಕರುಗಳ ಮೈತೊಳೆದು ಪೂಜೆಗೆ ಸಿಂಗರಿಸುತ್ತಾರೆ. ಮಣ್ಣೆತ್ತುಗಳಿಗೆ ಕಾಯಿ, ಕರ್ಪೂರ, ಊದಬತ್ತಿ ಬೆಳಗಿ ಎಡೆ ಹಿಡಿದು ಪೂಜಿಸುತ್ತಾರೆ.

ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮ: ಸಕಲ ಜೀವರಾಶಿಗಳಿಗೆ ಅನ್ನ ಹಾಕುವ ಭೂತಾಯಿಗೆ ಈ ಮೂಲಕ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸುತ್ತಾರೆ. ಹೊಸ ಬಟ್ಟೆಗಳನ್ನು ತೊಟ್ಟು ಊರಿನಲ್ಲಿ ದೇವಸ್ಥಾನಗಳಿಗೆ ಕಾಯಿ, ಕರ್ಪೂರದೊಂದಿಗೆ ಹೋಗಿ ಎಡೆ ಹಿಡಿದು ಬಂದು ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ. ಸಂಜೆ ಹೆಣ್ಣು ಮಕ್ಕಳು ಮನೆಮನೆಗೆ ತೆರಳಿ ಪೂಜಿಸಲ್ಪಟ್ಟ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ.

ಮಣ್ಣಿನಿಂದ ತಯಾರಿಸಿರುವ ಎತ್ತಿನ ಮೂರ್ತಿಗಳು

ಈ ಬಾರಿ ಅಷ್ಟು ಬೇಡಿಕೆ ಇಲ್ಲ: ಈ ಹಬ್ಬ ಮಣ್ಣಿನ ಮಕ್ಕಳಿಗೆ ಅತ್ಯಂತ ಪವಿತ್ರವಾದುದು. ಇಂತಹ ಪ್ರಸಿದ್ಧ ಹಬ್ಬದ ಸಡಗರದಲ್ಲಿದ್ದ ವಿಜಯಪುರ ನಗರದ ಜನರು ಮಣ್ಣೆತ್ತುಗಳನ್ನು ಖರೀದಿಸುವಲ್ಲಿ ಬ್ಯುಸಿಯಾಗಿದ್ದರು. 'ಮಣ್ಣೆತ್ತುಗಳು ಈ ಬಾರಿ ದುಬಾರಿಯಾಗಿದ್ದು, ಅತಿ ಚಿಕ್ಕವು 50 ರಿಂದ ಪ್ರಾರಂಭವಾಗಿ 1500 ರೂ.ಗೆ ಮಾರಾಟವಾಗುತ್ತಿವೆ. ಈ ಬಾರಿ ಅಷ್ಟು ಬೇಡಿಕೆ ಇಲ್ಲ' ಎನ್ನುತ್ತಾರೆ ಮಣ್ಣೆತ್ತುಗಳ ತಯಾರಕರಾದ ಕಾಸುಂಡೆ.

'ಇವತ್ತು ಮಣ್ಣೆತ್ತಿನ ಅಮಾವಾಸ್ಯೆ ಹಬ್ಬವಿದೆ. ಈ ಹಬ್ಬದಲ್ಲಿ ನಾವು ಮಣ್ಣಿನಿಂದ ತಯಾರಿಸಿದಂತಹ ಎತ್ತುಗಳನ್ನು ತರುತ್ತೇವೆ. ಅವುಗಳನ್ನು ಮನೆಯ ಜಗುಲಿ ಮೇಲಿಟ್ಟು ಬಣ್ಣ ಹಾಕಿ ಸಿಂಗರಿಸಿರುತ್ತೇವೆ. ಅದನ್ನು ನೋಡುವುದೇ ಚೆಂದ. ಅವುಗಳಿಗೆ ಅರಿಶಿಣ-ಕುಂಕುಮ ಹಚ್ಚಿ ಹೋಳಿಗೆ, ಕಡಬು ಇಟ್ಟು ಕಾಯಿ, ಕರ್ಪೂರ, ಊದಬತ್ತಿ, ಲೋಬಾನ ಹಾಕಿ ಪೂಜಿಸುತ್ತೇವೆ' ಎಂದು ಗೃಹಿಣಿ ಪ್ರತಿಭಾ ಹಬ್ಬದ ಕುರಿತು ಮಾಹಿತಿ ಹಂಚಿಕೊಂಡರು.

ಓದಿ:ಬಂಡೀಪುರ ಕಾಡಲ್ಲಿ ರಸ್ತೆ ಅಗಲೀಕರಣ, ವಿಭಜಕಕ್ಕೆ ಶಾಸಕರ ಪತ್ರ.. ಪರಿಸರ ಪ್ರೇಮಿಗಳಿಂದ ಆಕ್ಷೇಪ

For All Latest Updates

TAGGED:

ABOUT THE AUTHOR

...view details