ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಪ್ರೇಮಿಗಳು ಆತ್ಮಹತ್ಯೆ.. ಹರಪನಹಳ್ಳಿಯಲ್ಲಿ ಮಕ್ಕಳೊಂದಿಗೆ ತಾಯಿ ಸೂಸೈಡ್​

ಮದುವೆಗೆ ನಿರಾಕರಿಸಿದ್ದರಿಂದ ನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮದ ಮಹಿಳೆಯು ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

By

Published : Jan 18, 2023, 10:28 PM IST

lovers-suicide-in-vijayapura
ವಿಜಯಪುರದಲ್ಲಿ ಪ್ರೇಮಿಗಳು ಆತ್ಮಹತ್ಯೆ

ವಿಜಯಪುರ :ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಜೈನಾಪೂರ ಗ್ರಾಮದ ಹೊರವಲಯದಲ್ಲಿ ಬುಧವಾರ ನಡೆದಿದೆ. ರಾಕೇಶ್ ಅಂಬಲಿ (23) ಹಾಗೂ ಸಾವಿತ್ರಿ ‌ಅಂಬಲಿ (19) ಮೃತಪಟ್ಟಿರುವ ಪ್ರೇಮಿಗಳು ಎಂದು ಗುರುತಿಸಲಾಗಿದೆ. ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮದುವೆ ಆಗಿದ್ದರು ಎಂದು ತಿಳಿದು ಬಂದಿದೆ.

ಬಸವನ ಬಾಗೇವಾಡಿಯ ಜೈನಾಪೂರ ಗ್ರಾಮದ ಹೊರ ವಲಯದ ತೊಟವೊಂದರಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪರಸ್ಪರ ಪ್ರೀತಿಸುತ್ತಿದ್ದ ರಾಕೇಶ್ ಮತ್ತು ಸಾವಿತ್ರಿ ಮಂಗಳವಾರವೇ ಮನೆಯಿಂದ ನಾಪತ್ತೆ ಆಗಿದ್ದರು. ಇಬ್ಬರೂ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಪ್ರೇಮ ಅರಳಿದ್ದು ಹೇಗೆ?:ರಾಕೇಶ್​ ಹಾಗೂ ಸಾವಿತ್ರಿ ಜೈನಾಪುರ ಗ್ರಾಮದವರಾಗಿದ್ದರು. ಇಬ್ಬರ ಮನೆಗಳೂ ಕೂಡ ಎದುರು ಬದುರು ಇವೆ. ಹೀಗಾಗಿ ನಿತ್ಯ ಒಬ್ಬರನ್ನೊಬ್ಬರು ನೋಡುತ್ತಲೇ ಪ್ರೀತಿಯ ಬಲೆಗೆ ಬಿದ್ದಿದ್ದರು. ಯುವಕ ರಾಕೇಶ್​​ ಟ್ರ್ಯಾಕ್ಟರ್ ಚಾಲಕನಾಗಿದ್ದ ಕೆಲಸ ಮಾಡುತ್ತಿದ್ದ. ಸಾವಿತ್ರಿ 9ನೇ ತರಿಗತಿವರೆಗೆ ಓದಿದ್ದು, ಬಳಿಕ ಮನೆಯಲ್ಲೇ ಇದ್ದಳು. ಕಳೆದ ಮೂರ್ನಾಲ್ಕು ವರ್ಷಗಳಿಂದ ಒಬ್ವರಿಗೊಬ್ಬರು ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಯುವಕ-ಯುವತಿಯ ಪ್ರೀತಿ ವಿಚಾರವು ಇಬ್ಬರ ಮನೆಯವರಿಗೂ ಗೊತ್ತಾಗಿತ್ತು. ಬಳಿಕ ತಮಗೆ ಮದುವೆ ಮಾಡುವಂತೆ ಮನೆಯವರ ಬಳಿ ಪ್ರೇಮಿಗಳು ಒತ್ತಾಯಿಸಿದ್ದರು. ಆದರೆ ಬೇರೆ ಜಾತಿಯವರು ಹಾಗೂ ಎದುರು ಮನೆಯವರು ಬೇಡ ಎಂದು ಪೋಷಕರು ಮದುವೆಗೆ ನಿರಾಕರಿಸಿದ್ದರು. ಇದರಿಂದ ಪ್ರೇಮಿಗಳು ಮನನೊಂದಿದ್ದರು. ತಮ್ಮ ಮನೆಗಳಿಂದ ಹೊರಬಂದಿದ್ದ ಇಬ್ಬರೂ, ಜೈನಾಪೂರ ಗ್ರಾಮದ ಹೊರವಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್​​ ಮೂಲಗಳಿಂದ ತಿಳಿದು ಬಂದಿದೆ.

ಸಾವಿಗೂ ಮುನ್ನ ಮದುವೆಯಾದ ಪ್ರೇಮಿಗಳು:ಎರಡೂ ಕುಟುಂಬದವರು ನಿರಾಕರಿಸಿದ್ದರಿಂದ ಮನ ನೊಂದಿದ್ದ ಪ್ರೇಮಿಗಳು ಮಂಗಳವಾರವೇ ಮನೆಯಿಂದ ಓಡಿ ಬಂದಿದ್ದರು. ಬಳಿಕ ತಮ್ಮ ಆಸೆಯಂತೆ ಮದುವೆಯಾಗಿ, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಹೊರ ವಲಯದ ತೊಟವೊಂದರಲ್ಲಿ ಮೃತದೇಹ ಕಂಡ ಬಳಿಕ ಯುವತಿ ಸಾವಿತ್ರಿ ಕೊರಳಲ್ಲಿ ತಾಳಿ ಇರುವುದು ಗೊತ್ತಾಗಿದೆ. ಹೀಗಾಗಿ, ತಮ್ಮ ಆಸೆಯಂತೆ ಮದುವೆಯಾದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ:ಮಾರಕಾಸ್ತ್ರಗಳಿಂದ ಯುವತಿ ಬರ್ಬರ ಹತ್ಯೆ: ನಾಪತ್ತೆಯಾಗಿದ್ದ ಆರೋಪಿ ಶವವಾಗಿ ಪತ್ತೆ

ವಿಜಯನಗರ ಜಿಲ್ಲೆಯಲ್ಲಿ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ:ಕೌಟುಂಬಿಕ ಕಲಹ ಶಂಕೆ ಹಿನ್ನೆಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಬುಧವಾರ ಬೆಳಕಿಗೆ ಬಂದಿದೆ. ಭವ್ಯ (36) ಎಂಬ ಮಹಿಳೆ ತನ್ನ ಮಕ್ಕಳಾದ ಕಾವ್ಯ (14) ಹಾಗೂ ಅಮೂಲ್ಯ ಎಂಬುವರೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ಮೂರು ದಿನಗಳಿಂದ ಪತಿ ವೀರೇಶ್ ಗ್ರಾಮದಲ್ಲಿ ಇರಲಿಲ್ಲ. ಆತ ಗ್ರಾಮದಲ್ಲಿ ಇಲ್ಲದ ಸಂದರ್ಭದಲ್ಲೇ ಮಹಿಳೆಯು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ.

ಹಲವಾಗಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಈ ಸಂಬಂಧ ಸ್ಥಳಕ್ಕೆ ಹಲವಾಗಲು ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ.

ಇದನ್ನೂ ಓದಿ:ಬೆಂಗಳೂರು: ಪ್ರೀತಿ ನಿರಾಕರಿಸಿದ ಯುವತಿಯ ಹತ್ಯೆ, ಆರೋಪಿ ಅರೆಸ್ಟ್​​

ABOUT THE AUTHOR

...view details