ವಿಜಯಪುರ: ಭೂಗಳ್ಳರ ಹಾವಳಿ ರಾಜ್ಯದಲ್ಲಿ ಹೆಚ್ಚಾಗಿದೆ. ಪ್ರತಿ ಮನುಷ್ಯನಿಗೆ ಒಂದು ಮನೆ ಕಟ್ಟಬೇಕು, ಜಮೀನು, ತೋಟ ಮಾಡಬೇಕು ಎನ್ನುವ ಮಹಾದಾಸೆ ಇದ್ದೇ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ರಿಯಲ್ ಎಸ್ಟೇಟ್ ಉದ್ಯಮಿಗಳು ಭೂಮಿ ಖರೀದಿ-ಮಾರಾಟ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೋಸದಾಟದಲ್ಲಿ ಭೂಮಿ ಕಳೆದುಕೊಳ್ಳುವ ಮಾಲೀಕರು ಪೊಲೀಸರ ಬಳಿ ಹೋಗಬೇಕೋ ಅಥವಾ ನ್ಯಾಯಾಲಯದ ಮೊರೆ ಹೋಗಬೇಕೋ ಎನ್ನುವ ಗೊಂದಲದಲ್ಲಿದ್ದಾರೆ.
ಭೂಮಿ ಕಳೆದುಕೊಳ್ಳುವ ಮಾಲೀಕರು ಏನು ಮಾಡಬೇಕು? ಭೂಮಿಗೆ ಉತ್ತಮ ಬೆಲೆ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸುವ ಕಾಯಕ ಶುರು ಮಾಡಿಕೊಂಡಿದ್ದಾರೆ. ಭೂಮಿ ಕಳೆದುಕೊಂಡವರು ದಿಕ್ಕು ತೋಚದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದರೆ ಅದು ಕ್ರಿಮಿನಲ್ ಪ್ರಕರಣ ಅಲ್ಲ, ಸಿವಿಲ್ ಕೇಸ್ ಎನ್ನುವ ಕಾರಣಕ್ಕೆ ಪೊಲೀಸರು ದೂರು ದಾಖಲಿಸಿಕೊಳ್ಳುವುದಿಲ್ಲ.
ಭೂಗಳ್ಳತನ, ಮೋಸದಿಂದ ಜಮೀನು ಬರೆಸಿಕೊಳ್ಳುವುದು ಇವೆಲ್ಲವು ಐಪಿಸಿ ಸೆಕ್ಷನ್ ವ್ಯಾಪ್ತಿಗೆ ಬರುವುದಿಲ್ಲ. ಭೂಮಿ ಕಳ್ಳತನ, ಮೋಸ ಸೇರಿ ಇನ್ನಿತರೆ ಭೂ ಸಂಬಂಧಿತ ವ್ಯಾಜ್ಯಗಳು ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ. ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳಿದ್ದರೆ ನೇರವಾಗಿ ವಕೀಲರ ಮೂಲಕ ಭೂಮಿ ಲಪಟಾಯಿಸಿದ ವ್ಯಕ್ತಿ ವಿರುದ್ಧ ದಾವೆ ಹೂಡಬಹುದಾಗಿದೆ. ನ್ಯಾಯಾಲಯ ವಾದಿ-ಪ್ರತಿವಾದಿಗಳ ವಾದ ಆಲಿಸಿ ಸಮಸ್ಯೆಗೆ ಪರಿಹಾರ ಒದಗಿಸುವ ತೀರ್ಪು ನೀಡುತ್ತದೆ.
ಆದರೆ ಇತ್ತೀಚೆಗೆ ಸಿವಿಲ್ ಪ್ರಕರಣವನ್ನು ಪೊಲೀಸ್ ಠಾಣೆ ವ್ಯಾಪ್ತಿಯ ಹೊರಗಡೆ ರಾಜಿ ಪಂಚಾಯಿತಿ ನಡೆಸಿ ಪೊಲೀಸರು ಸಮಸ್ಯೆ ಬಗೆಹರಿಸುವ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಇದನ್ನು ನ್ಯಾಯಾಲಯ ಮಾನ್ಯತೆ ಮಾಡುವುದಿಲ್ಲ. ರಾಜಿ ಸಂದಾನವಾದ ವಾದಿ-ಪ್ರತಿವಾದಿಗಳು ಮುಂದೊಮ್ಮೆ ಯಾವಾಗಲಾದರೂ ನ್ಯಾಯಾಲಯದ ಮೆಟ್ಟಿಲೇರಬಹುದು. ಹೀಗಾಗಿ ಪೊಲೀಸ್ ಠಾಣೆ ಹೊರಗಡೆ ಭೂ ವಿವಾದ ಬಗೆಹರಿಸುವುದು ಕಾನೂನು ಬಾಹಿರ ಎನ್ನುತ್ತಾರೆ ನ್ಯಾಯವಾದಿಗಳು.
ಭೂ ವಿವಾದ ಪ್ರಕರಣಗಳು ನ್ಯಾಯಾಲಯದಲ್ಲಿ ಹೆಚ್ಚಾಗಿ ದಾಖಲಾಗುತ್ತಿವೆ. ವರ್ಷಗಟ್ಟಲೇ ಈ ಭೂ ವಿವಾದ ಪ್ರಕರಣಗಳು ಇತ್ಯರ್ಥವಾಗದೆ ಭೂ ಮಾಲೀಕರು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಈ ಪ್ರಕರಣಗಳನ್ನು ಎಲ್ಲಿ ದಾಖಲಿಸಬೇಕು ಎನ್ನುವ ಗೊಂದಲದಲ್ಲಿ ಹಲವರಿದ್ದಾರೆ.