ವಿಜಯಪುರ: ಸಿಂದಗಿ ಉಪಚುನಾವಣೆಗೆ ಈಗ ರಾಜಕೀಯ ದ್ವೇಷ ಅಂಟಿದೆ. ಮಾಜಿ ಸಚಿವ ದಿ. ಎಂ ಸಿ ಮನಗೂಳಿ ಅವರು 40 ವರ್ಷ ಜೆಡಿಎಸ್ನಲ್ಲಿದ್ದವರು. ಕೊನೆಯ ಕಾಲದಲ್ಲಿ ಜೆಡಿಎಸ್ ವರ್ತನೆಗೆ ಬೇಸತ್ತು ಕಾಂಗ್ರೆಸ್ ಸೇರುವ ತಯಾರಿ ನಡೆಸಿದ್ದರು ಎಂದು ಅವರ ಕುಟುಂಬ ವರ್ಗ ಈಗ ಹೇಳುತ್ತಿದೆ. ಈ ಮೂಲಕ ಮನಗೂಳಿ ಅವರ ಪುತ್ರನ ಪುರಸಭೆ ಅಧ್ಯಕ್ಷ ಗಾದಿಗೆ ಅವಿಶ್ವಾಸ ಗೊತ್ತುವಳಿ ಮಂಡನೆ ಅಸ್ತ್ರ ಬಿಟ್ಟಿದ್ದ ಜೆಡಿಎಸ್ಗೆ ತಿರುಗೇಟು ನೀಡಿದ್ದಾರೆ.
ಕುಟುಂಬ ರಾಜಕಾರಣದ ಆರೋಪ ಹೇರಿಕೊಂಡು ರಾಜ್ಯದಲ್ಲಿ ಅಸ್ವಿಸ್ತ ಉಳಿಸಿಕೊಂಡಿರುವ ಜೆಡಿಎಸ್ ಪಕ್ಷಕ್ಕೆ ಮನಗೂಳಿ ಕುಟುಂಬ ಸಹ ಶಾಕ್ ನೀಡಿದೆ. ದಿ.ಎಂ ಸಿ ಮನಗೂಳಿ ಹಿರಿಯ ಪುತ್ರ ಅಶೋಕ ಮನಗೂಳಿ ತಂದೆಯ ನಿಧನದ ನಂತರ ಕಾಂಗ್ರೆಸ್ ಸೇರಿದ್ದರು. ಮನಗೂಳಿ ಕುಟುಂಬದ ಉಳಿದ ಯಾರೂ ಕೂಡ ಜೆಡಿಎಸ್ ಬಿಟ್ಟಿರಲಿಲ್ಲ.
ಉಪ ಚುನಾವಣೆಯಲ್ಲಿ ಜೆಡಿಎಸ್ ಮನಗೂಳಿ ಕುಟುಂಬಕ್ಕೆ ಟಿಕೆಟ್ ನೀಡಬಹುದು ಎನ್ನುವ ಆಶಾ ಭಾವನೆಯನ್ನ ಅವರ ಕುಟುಂಬ, ಕಾರ್ಯಕರ್ತರು ಹೊಂದಿದ್ದರು. ಆದರೆ, ಚುನಾವಣೆ ಘೋಷಣೆ ಆದ ಮೇಲೆ ಜೆಡಿಎಸ್ ಏಕಾಏಕಿ ಅಲ್ಪಸಂಖ್ಯಾತರ ಅಭ್ಯರ್ಥಿಗೆ ಟಿಕೆಟ್ ನೀಡಿರುವುದಲ್ಲದೇ, ಶಾಂತವೀರ ಮನಗೂಳಿಯ ಪುರಸಭೆ ಅಧ್ಯಕ್ಷಗಿರಿಗೂ ಅಡ್ಡಗಾಲು ಹಾಕಿದೆ. ಇದು ಸಹಜವಾಗಿ ಮನಗೂಳಿ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.
ಜೆಡಿಎಸ್ಗಾಗಿ ನಮ್ಮ ತಂದೆ 40 ವರ್ಷ ದುಡಿದಿದ್ದಾರೆ. ನಾನು ಕಳೆದ 20ವರ್ಷದಿಂದ ಸಾಮಾನ್ಯ ಕಾರ್ಯಕರ್ತನಾಗಿ ಯಾವುದೇ ಹುದ್ದೆಗೆ ಆಸೆಪಡದೆ ದುಡಿದರೂ ನಮ್ಮನ್ನು ಜೆಡಿಎಸ್ ಸರಿಯಾಗಿ ನೋಡಿಕೊಂಡಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅಶೋಕ ಮನಗೂಳಿ ಅಸಮಾಧಾನ ಹೊರ ಹಾಕಿದರು.
ದಿ. ಎಂ ಸಿ ಮನಗೂಳಿ ಸಹ ಜೆಡಿಎಸ್ ವರ್ತನೆಯಿಂದ ಬೇಸತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಕಾಂಗ್ರೆಸ್ ಸೇರಲು ಮಾತುಕತೆ ನಡೆಸಿದ್ದರು. ಜನವರಿಯಲ್ಲಿ ಕಾಂಗ್ರೆಸ್ ಸೇರುವ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಹಠಾತ್ ಆಗಿ ವಿಧಿವಶರಾದರು. ಅವರ ಇಚ್ಛೆಯಂತೆ ನನ್ನ ಸಹೋದರ ಕಾಂಗ್ರೆಸ್ ಸೇರಿದ್ದಾನೆ. ನಾನು ಸಹ ಮುಖಂಡರ ಸಮ್ಮುಖದಲ್ಲಿ ನಾಳೆ ಕಾಂಗ್ರೆಸ್ ಸೇರುವುದಾಗಿ ಮನಗೂಳಿಯ ದ್ವಿಯೀಯ ಪುತ್ರ ಶಾಂತವೀರ ಮನಗೂಳಿ ಘೋಷಿಸಿದರು.