ಕರ್ನಾಟಕ

karnataka

ETV Bharat / state

ನೀರಾವರಿ ಸಲಹಾ ಸಮಿತಿ ಸಭೆ ಬೆಂಗಳೂರಿಗೆ ಸ್ಥಳಾಂತರ: ರೈತರ ಆಕ್ರೋಶ - ಬೆಂಗಳೂರಿನ ಶಕ್ತಿ ಕೇಂದ್ರ ವಿಕಾಸಸೌಧದಲ್ಲಿ ಸಭೆ

ನೀರಾವರಿ ಸಲಹಾ ಸಮಿತಿ ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಇದಕ್ಕೆ ವಿಜಯಪುರದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಾವರಿ ಸಲಹಾ ಸಮಿತಿ ಸಭೆ
ನೀರಾವರಿ ಸಲಹಾ ಸಮಿತಿ ಸಭೆ

By

Published : Nov 22, 2022, 6:08 PM IST

Updated : Nov 22, 2022, 8:03 PM IST

ವಿಜಯಪುರ: ಉತ್ತರ ಕರ್ನಾಟಕದ ಜೀವನದಿ ಲಾಲ್ ಬಹಾದ್ದೂರ ಶಾಸ್ತ್ರಿ (ಆಲಮಟ್ಟಿ) ಜಲಾಶಯದ ಕೃಷ್ಣಾ ಜಲ ಭಾಗ್ಯ ನಿಗಮದ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆ ನಾಳೆ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆಯುತ್ತಿದೆ. ಇದಕ್ಕೆ ವಿಜಯಪುರ ಜಿಲ್ಲೆಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಭೆ ಸ್ಥಳಾಂತರ: ಆಲಮಟ್ಟಿ‌ಜಲಾಶಯದಿಂದ ಜಿಲ್ಲೆಯ ಕಾಲುವೆಗಳಿಗೆ ಎಷ್ಟು ನೀರು ಬಿಡಬೇಕು ಎಂಬುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಚಿವ ಸಿ.ಸಿ. ಪಾಟೀಲ ಅಧ್ಯಕ್ಷತೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಆಗಬೇಕಾಗಿದೆ. ಮೊದಲೇ ರೈತರನ್ನು ಹೊರಗಿಟ್ಟು ಈ ಸಭೆ ನಡೆಯುತ್ತಿರುವುದೇ ತಪ್ಪಾಗಿರುವಾಗ, ಗಾಯದ ಮೇಲೆ ಬರೆ ಎನ್ನುವಂತೆ ಆಲಮಟ್ಟಿಯ ಕೆಬಿಜೆಎನ್​ಎಲ್ ಕಚೇರಿಯಲ್ಲಿ ನಡೆಯಬೇಕಾಗಿದ್ದ ಸಭೆಯನ್ನು ದಿಢೀರ್ ಸ್ಥಳಾಂತರಗೊಳಿಸಲಾಗಿದೆ.

ನೀರಾವರಿ ಸಲಹಾ ಸಮಿತಿ ಸಭೆ ಸ್ಥಳಾಂತರಕ್ಕೆ ರೈತರಿಂದ ಆಕ್ರೋಶ

ಸಭೆಯನ್ನು ಬೆಂಗಳೂರಿನ ಶಕ್ತಿ ಕೇಂದ್ರ ವಿಕಾಸಸೌಧದ ಮೂರನೇ ಮಹಡಿಗೆ ಬದಲಾಯಿಸಿರುವುದು ಸರಿಯಲ್ಲ. ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದರೆ, ರೈತರ ಪ್ರತಿಭಟನೆಯ ಬಿಸಿ ತಟ್ಟಬಹುದು ಎನ್ನುವ ಕಾರಣಕ್ಕೆ ಸ್ಥಳಾಂತರ ಮಾಡಿರುವುದು ರೈತ‌ ಹೋರಾಟಗಾರರ ಕೋಪಕ್ಕೆ ಕಾರಣವಾಗಿದೆ.

ಮೊದಲು ನವೆಂಬರ್ 18ರಂದು ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆಯನ್ನು ಐಸಿಸಿ ಅಧ್ಯಕ್ಷ ಸಿ ಸಿ ಪಾಟೀಲ ನೇತೃತ್ವದಲ್ಲಿ ನಡೆಸಬೇಕಾಗಿತ್ತು. ಈಗ ಸಭೆಯನ್ನು ಮುಂದೂಡಿ ನ.23ರಂದು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಇದರ ಉದ್ದೇಶ ಏನು ಎಂಬುದನ್ನು ಸರ್ಕಾರ ರೈತರಿಗೆ ಉತ್ತರಿಸಬೇಕು.‌ ಸಭೆ ನಡೆಯುವಾಗ ರೈತರು ಪ್ರತಿಭಟನೆ ನಡೆಸುತ್ತಾರೆ ಎನ್ನುವ ಭಯಕ್ಕೆ ಸಭೆ ಸ್ಥಳಾಂತರ ಮಾಡಲಾಗಿದೆಯೇ? ಈ ಹಿಂದೆಯೂ 4-5 ಬಾರಿ ಐಸಿಸಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ.

ಇದನ್ನೂ ಓದಿ:ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ರೈತರ ಜಮೀನಿಗೆ ಹೆಚ್ಚಿನ ಪರಿಹಾರ ನೀಡಲು ನಿರ್ಧಾರ: ಸಚಿವ ಅಶೋಕ್

ಆಲಮಟ್ಟಿ ಜಲಾಶಯ ಇರುವುದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿ. ಕೆಬಿಜೆಎನ್​​ಎಲ್ ಗೆ ಸಂಬಂಧಿಸಿದ ಎಲ್ಲ ಕಚೇರಿ ಆಲಮಟ್ಟಿಯಲ್ಲಿದೆ. ಆದರೆ, ಐಸಿಸಿ ಸಭೆ ನಡೆಸುವುದು ಬೆಂಗಳೂರಿನಲ್ಲಿ ಏಕೆ? ಇದು ರೈತರ ದಾರಿತಪ್ಪಿಸುವ ಕೆಲಸವಾಗಿದೆ ಎಂದು ರೈತ ಹೋರಾಟಗಾರರು ಆಕ್ರೋಶ ಹೊರ ಹಾಕಿದ್ದಾರೆ.

ತಕ್ಷಣ ಸರ್ಕಾರ ಬೆಂಗಳೂರಿನಲ್ಲಿ ಆಯೋಜಿಸಿರುವ ಐಸಿಸಿ ಸಭೆಯನ್ನು, ಆಲಮಟ್ಟಿಗೆ ಸ್ಥಳಾಂತರ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘ ಎಚ್ಚರಿಕೆ ನೀಡಿದೆ.

ಸರ್ಕಾರಿ ಆದೇಶಕ್ಕೆ ಕವಡೆಕಾಸಿನ ಕಿಮತ್ತಿಲ್ಲ:ಕೃಷ್ಣಾ ಭಾಗ್ಯ ಜಲ ನಿಗಮ ಮಂಡಳಿ (ಕೆಬಿಜೆಎನ್ ಎಲ್ ) ಕಚೇರಿ ಆಲಮಟ್ಟಿಯಲ್ಲಿದೆ. ಹೀಗಾಗಿ ಕೆಬಿಜೆಎನ್ ಎಲ್ ಎಂಡಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಬೆಂಗಳೂರು ಬಿಟ್ಟು ಆಲಮಟ್ಟಿಯಲ್ಲಿ ಇರಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆದೇಶ ಹೊರಡಿಸಿದ್ದಾರೆ.

ಈ ಆದೇಶ ಹೊರಡಿಸಿದರೂ ಅಧಿಕಾರಿಗಳು ಬೆಂಗಳೂರು ಬಿಟ್ಟು ಕದಲುತ್ತಿಲ್ಲ. ಯಾವ ಅಧಿಕಾರಿ ಮನೆ ಬದಲಿಸಿಲ್ಲ. ಆಲಮಟ್ಟಿ ಜಲಾಶಯದ ಎಲ್ಲ ಕೆಲಸ ಬೆಂಗಳೂರಿನಲ್ಲಿ ಕುಳಿತು ಮಾಡುತ್ತಿದ್ದಾರೆ. ಇದು ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ ಎನ್ನುವುದನ್ನು ಸ್ಪಷ್ಟ ಉದಾಹರಣೆ ಎಂಬ ಮಾತುಗಳು ಕೇಳಿ ಬರುತ್ತಿವೆ.‌

Last Updated : Nov 22, 2022, 8:03 PM IST

ABOUT THE AUTHOR

...view details