ವಿಜಯಪುರ: ಉತ್ತರ ಕರ್ನಾಟಕದ ಜೀವನದಿ ಲಾಲ್ ಬಹಾದ್ದೂರ ಶಾಸ್ತ್ರಿ (ಆಲಮಟ್ಟಿ) ಜಲಾಶಯದ ಕೃಷ್ಣಾ ಜಲ ಭಾಗ್ಯ ನಿಗಮದ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆ ನಾಳೆ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆಯುತ್ತಿದೆ. ಇದಕ್ಕೆ ವಿಜಯಪುರ ಜಿಲ್ಲೆಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸಭೆ ಸ್ಥಳಾಂತರ: ಆಲಮಟ್ಟಿಜಲಾಶಯದಿಂದ ಜಿಲ್ಲೆಯ ಕಾಲುವೆಗಳಿಗೆ ಎಷ್ಟು ನೀರು ಬಿಡಬೇಕು ಎಂಬುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಚಿವ ಸಿ.ಸಿ. ಪಾಟೀಲ ಅಧ್ಯಕ್ಷತೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ಆಗಬೇಕಾಗಿದೆ. ಮೊದಲೇ ರೈತರನ್ನು ಹೊರಗಿಟ್ಟು ಈ ಸಭೆ ನಡೆಯುತ್ತಿರುವುದೇ ತಪ್ಪಾಗಿರುವಾಗ, ಗಾಯದ ಮೇಲೆ ಬರೆ ಎನ್ನುವಂತೆ ಆಲಮಟ್ಟಿಯ ಕೆಬಿಜೆಎನ್ಎಲ್ ಕಚೇರಿಯಲ್ಲಿ ನಡೆಯಬೇಕಾಗಿದ್ದ ಸಭೆಯನ್ನು ದಿಢೀರ್ ಸ್ಥಳಾಂತರಗೊಳಿಸಲಾಗಿದೆ.
ಸಭೆಯನ್ನು ಬೆಂಗಳೂರಿನ ಶಕ್ತಿ ಕೇಂದ್ರ ವಿಕಾಸಸೌಧದ ಮೂರನೇ ಮಹಡಿಗೆ ಬದಲಾಯಿಸಿರುವುದು ಸರಿಯಲ್ಲ. ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದರೆ, ರೈತರ ಪ್ರತಿಭಟನೆಯ ಬಿಸಿ ತಟ್ಟಬಹುದು ಎನ್ನುವ ಕಾರಣಕ್ಕೆ ಸ್ಥಳಾಂತರ ಮಾಡಿರುವುದು ರೈತ ಹೋರಾಟಗಾರರ ಕೋಪಕ್ಕೆ ಕಾರಣವಾಗಿದೆ.
ಮೊದಲು ನವೆಂಬರ್ 18ರಂದು ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆಯನ್ನು ಐಸಿಸಿ ಅಧ್ಯಕ್ಷ ಸಿ ಸಿ ಪಾಟೀಲ ನೇತೃತ್ವದಲ್ಲಿ ನಡೆಸಬೇಕಾಗಿತ್ತು. ಈಗ ಸಭೆಯನ್ನು ಮುಂದೂಡಿ ನ.23ರಂದು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ. ಇದರ ಉದ್ದೇಶ ಏನು ಎಂಬುದನ್ನು ಸರ್ಕಾರ ರೈತರಿಗೆ ಉತ್ತರಿಸಬೇಕು. ಸಭೆ ನಡೆಯುವಾಗ ರೈತರು ಪ್ರತಿಭಟನೆ ನಡೆಸುತ್ತಾರೆ ಎನ್ನುವ ಭಯಕ್ಕೆ ಸಭೆ ಸ್ಥಳಾಂತರ ಮಾಡಲಾಗಿದೆಯೇ? ಈ ಹಿಂದೆಯೂ 4-5 ಬಾರಿ ಐಸಿಸಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ.