ಕರ್ನಾಟಕ

karnataka

ETV Bharat / state

ಕಬ್ಬಿನ ತೂಕದಲ್ಲಿ ಮೋಸ ಆರೋಪ: ಸರ್ಕಾರದ ವತಿಯಿಂದಲೇ ಎಲೆಕ್ಟ್ರಾನಿಕ್ ವೇಯಿಂಗ್ ಮಷಿನ್-ಸಚಿವ ಶಿವಾನಂದ ಪಾಟೀಲ

ಸಕ್ಕರೆ ಸಚಿವ ಶಿವಾನಂದ ಪಾಟೀಲ ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದು, ಕಬ್ಬಿನ ತೂಕದಲ್ಲಿ ಮೋಸ ತಡೆಯಲು ಇಲೆಕ್ಟ್ರಾನಿಕ್​ ವೇಯಿಂಗ್​ ಮಷಿನ್​ ಅಳವಡಿಸಲಾಗುವುದು ಎಂದಿದ್ದಾರೆ.

By ETV Bharat Karnataka Team

Published : Oct 29, 2023, 3:52 PM IST

Updated : Oct 29, 2023, 4:09 PM IST

ಸಚಿವ ಶಿವಾನಂದ ಪಾಟೀಲ
ಸಚಿವ ಶಿವಾನಂದ ಪಾಟೀಲ

ಸಂಗಮನಾಥ ಮತ್ತು ಬಸವಣ್ಣನ ಆಶೀರ್ವಾದ ಪಡೆದುಕೊಂಡ ಸಚಿವ ಶಿವಾನಂದ ಪಾಟೀಲ

ವಿಜಯಪುರ:ಕೆಲವು ಸಕ್ಕರೆ ಕಾರ್ಖಾನೆಯವರು ರೈತರು ಕಾರ್ಖಾನೆಗೆ ತರುವ ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ. ರೈತರು ಈ ಬಗ್ಗೆ ಸಾಕ್ಷಿ ಸಮೇತ ದೂರು ಸಲ್ಲಿಸಿದರೆ ಅಂಥ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಮುಂದಿನ ವರ್ಷದಿಂದ ಈ ಅಕ್ರಮ ತಡೆಯಲು ಸರ್ಕಾರದ ವತಿಯಿಂದಲೇ ಎಲೆಕ್ಟ್ರಾನಿಕ್ ವೇಯಿಂಗ್ ಮಷಿನ್ ಅಳವಡಿಸಲಾಗುತ್ತದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕುಂಟೋಜಿಯಲ್ಲಿ ಭಾನುವಾರ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಡಾ. ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಕ್ಕರೆ ಕಾರ್ಖಾನೆಯಲ್ಲಿ ಉತ್ಪತ್ತಿಯಾಗುವ ಇಥೆನಾಲ್ ಸೇರಿ ಎಲ್ಲ ಉಪ ಉತ್ಪನ್ನಗಳ ಲಾಭಾಂಶ ರೈತರಿಗೆ ಹಂಚಿಕೆ ಮಾಡಬೇಕು.

ಸರ್ಕಾರ ನಿಗದಿಪಡಿಸಿದ ಎಮ್​ ಆರ್ ಪಿ ದರದಂತೆ ಕಬ್ಬು ಖರೀದಿಸಬೇಕು. ರೈತರಿಗೆ ಉಪಯುಕ್ತವಾಗಿ ಕೆಲಸ ಮಾಡಬೇಕು. ಈ ಬಗ್ಗೆ ಸರ್ಕಾರ ಹೊರಡಿಸಿರುವ ಆದೇಶ ಕಡ್ಡಾಯವಾಗಿ ಪಾಲಿಸಬೇಕು ಎಂದರು. ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ, ಬಸವ ನಾಡು ಎನ್ನುವ ಹೆಸರು ಇಡಲು ಚರ್ಚೆ ನಡೆದಿರುವುದು ರಾಜಕೀಯ ಲಾಭದ ಹೊರತಾಗಿರಬೇಕು ಎಂದು ಪುನರುಚ್ಚರಿಸಿದರು. ನಾನೂ ಬಸವಾಭಿಮಾನಿ, ಬಸವ ನಾಡಿನ ಬಸವಭಕ್ತ. ರಾಜಕೀಯ ಕಾರಣಕ್ಕಾಗಿ ಹೆಸರು ಬದಲಾವಣೆ ವಿಷಯ ಮುನ್ನಲೆಗೆ ತರುವುದು ಶೋಭೆ ತರುವಂಥದ್ದಲ್ಲ ಎಂದರು.

ಡಿಸಿಸಿ ಬ್ಯಾಂಕ್​ಗೆ ಅವಿರೋಧ ಆಯ್ಕೆಗೆ ಸಂತಸ:ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ಗೆ ಮತ್ತೆ ನನ್ನನ್ನು ಅಧ್ಯಕ್ಷನನ್ನಾಗಿ ಅವಿರೋಧ ಆಯ್ಕೆ ಮಾಡಿರುವುದು ಸಂತಸ ತರುವಂಥದ್ದು. ಬ್ಯಾಂಕಿನ ಶತಮಾನೋತ್ಸವ ಸಂಭ್ರಮದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಆದರೆ ಬ್ಯಾಂಕ್​​ನ ನಿರ್ದೇಶಕರ ಅವಿರೋಧ ಆಯ್ಕೆಗೆ ಮುದ್ದೇಬಿಹಾಳ ಪಿಕೆಪಿಎಸ್ ಮತಕ್ಷೇತ್ರ ಸ್ಪರ್ಧೆ ನೀಡಿ ಅವಿರೋಧ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದು ವಿಷಾದನೀಯ ಎಂದು ಸಚಿವರು ತಿಳಿಸಿದರು. ಇನ್ನು, ಕುಂಟೋಜಿ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ದೇವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸಚಿವರು ಸಂಗಮನಾಥ ಮತ್ತು ಬಸವಣ್ಣನ ಆಶೀರ್ವಾದ ಪಡೆದುಕೊಂಡರು.

ನಿಮಗೆ ತಿಳಿದಿರುವಂತೆ ಇತ್ತೀಚಿನ ವರ್ಷಗಳಲ್ಲಿ ಬಿಜಾಪುರ ಜಿಲ್ಲೆಯನ್ನು ವಿಜಯಪುರ ಎಂದು ಬದಲಾಯಿಸಲಾಗಿತ್ತು. ಇದೀಗ ವಿಜಯಪುರ ಜಿಲ್ಲೆಗೆ ಬಸವೇಶ್ವರರ ಹೆಸರಿಡುವ ವಿಚಾರ ಮುನ್ನೆಲೆಗೆ ಬಂದಿದೆ. ಬಸವಣ್ಣನವರು ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿ, ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ. ಅವರ ಕೊಡುಗೆಗಳನ್ನು ಪರಿಗಣಿಸಿ ಜಿಲ್ಲೆಗೆ ಬಸವ ಜಿಲ್ಲೆ ಅಥವಾ ಬಸವೇಶ್ವರ ಜಿಲ್ಲೆ, ಬಸವನಾಡು ಎಂದು ಮರು ನಾಮಕರಣ ಮಾಡಬೇಕು ಎಂಬ ಚರ್ಚೆ ನಡೆದಿದೆ.

ಇದನ್ನೂ ಓದಿ:ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಸಲ್ಲಿಸುವ ಜಾತಿಗಣತಿ ವರದಿಯನ್ನು ನಾವು ಸ್ವೀಕರಿಸುತ್ತೇವೆ: ಸಿಎಂ ಸಿದ್ದರಾಮಯ್ಯ

Last Updated : Oct 29, 2023, 4:09 PM IST

ABOUT THE AUTHOR

...view details