ವಿಜಯಪುರ: ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಾಜ್ಞೆ ನೀಡಬೇಕು ಎಂದು ಸಲ್ಲಿಕೆಯಾಗಿದ್ದ ರಿಟ್ ಪಿಟಿಷನ್ ಅರ್ಜಿ ವಜಾಗೊಳಿಸಿ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠ ಮಹತ್ವದ ತೀರ್ಪು ಪ್ರಕಟಿಸಿದೆ. ಈ ಮೂಲಕ ಮಹಾನಗರ ಪಾಲಿಕೆ ಚುನಾವಣೆಗೆ ಆವರಿಸಿದ್ದ ಕಾರ್ಮೋಡ ಸರಿದಿದ್ದು, ಚುನಾವಣೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದ ಆಕಾಂಕ್ಷಿ ಅಭ್ಯರ್ಥಿಗಳು ನಿರಾಳರಾಗಿದ್ದಾರೆ.
ಇದೇ ಅಕ್ಟೋಬರ್ 28 ಕ್ಕೆ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿತ್ತು. ಕಳೆದ ಸಪ್ಟೆಂಬರ್ 27 ಕ್ಕೆ ಸಲ್ಲಿಕೆಯಾಗಿದ್ದ ರಿಟ್ ಪಿಟೀಷನ್ ವಜಾಗೊಳಿಸಿ ಕಲಬುರಗಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ನಿಗದಿಯಂತೆ ನಡೆಯಲಿದೆ.
ಅರ್ಜಿ ವಜಾ : ಚುನಾವಣೆಗೆ ತಡೆಯಾಜ್ಞೆ ನೀಡಬೇಕೆಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ದೀಪಾ ಕುಂಬಾರ, ಮಾಜಿ ಪಾಲಿಕೆ ಸದಸ್ಯರಾದ ಮೈನುದ್ದೀನ್ ಬೀಳಗಿ, ಇದ್ರೂಸ್ ಭಕ್ಷಿ ಅವರಿಂದ ರಿಟ್ ಪಿಟೀಷನ್ ಸಲ್ಲಿಕೆಯಾಗಿತ್ತು. ಮೂರು ಬಾರಿ ಸುದೀರ್ಘ ವಿಚಾರಣೆ ನಡೆಸಿದ್ದ ಕಲಬುರಗಿ ಹೈಕೋರ್ಟ್ ನ್ಯಾಯ ಮೂರ್ತಿಗಳು ನಿನ್ನೆ ಅಂತಿಮ ಹಂತದ ವಿಚಾರಣೆ ನಡೆಸಿ ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು. ಇಂದು ರಿಟ್ ಪಿಟೀಷನ್ ವಜಾಗೊಳಿಸಿ ನ್ಯಾಯ ಮೂರ್ತಿ ದೇವದಾಸ ಅವರು ಆದೇಶ ಹೊರಡಿಸಿದ್ದಾರೆ.