ಕರ್ನಾಟಕ

karnataka

ETV Bharat / state

ಸಾ.ರಾ.ಮಹೇಶ್ ರಾಜೀನಾಮೆ ಪತ್ರವನ್ನು ವಾಪಸ್ ಪಡೆಯಲಿದ್ದಾರೆ; ದೇವೇಗೌಡ - ಜೆ.ಡಿ.ಎಸ್.ವರಿಷ್ಠ ಹೆಚ್.ಡಿ ದೇವೇಗೌಡ

ಸಾ ರಾ ಮಹೇಶ್ ಜೊತೆ ಮಾತುಕತೆ ನಡೆಸಿದ್ದು ನಾಳೆ ಅವರು ತಮ್ಮ ರಾಜೀನಾಮೆ ಪತ್ರವನ್ನು ವಾಪಸ್ ಪಡೆಯಲಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಜೆ.ಡಿ.ಎಸ್.ವರಿಷ್ಠ ಹೆಚ್.ಡಿ ದೇವೇಗೌಡ

By

Published : Oct 16, 2019, 8:08 PM IST

Updated : Oct 16, 2019, 8:42 PM IST

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಾ ರಾ ಮಹೇಶ್ ಜೊತೆ ಮಾತುಕತೆ ನಡೆಸಿದ್ದು, ನಾಳೆ ಅವರು ತಮ್ಮ ರಾಜೀನಾಮೆ ಪತ್ರವನ್ನು ವಾಪಸ್ ಪಡೆಯಲಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹೆಚ್‌ ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಜೆಪಿ‌ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾ ರಾ ಮಹೇಶ್ ರಾಜೀನಾಮೆ ವಿಷಯ ಗೊತ್ತಿದೆ. ವಿಶ್ವನಾಥ್ ಮತ್ತು ಸಾ ರಾ ಮಹೇಶ್ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದರು. ಕೆಟ್ಟ ರಾಜಕಾರಣಕ್ಕೆ ಭಾಗಿಯಾಗಲಾರೆ. ಹಾಗಾಗಿ ಈ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸ್ಪೀಕರ್‌ಗೆ ಪತ್ರ ನೀಡಿರುವುದು ಸತ್ಯ. ಆದರೆ, ಸ್ಪೀಕರ್‌ ಅಂಗೀಕಾರ ಮಾಡಿಲ್ಲ ಎಂದರು.

ಬದಲಾಗಿ ಅವರ ಮನವೊಲಿಸಿದ್ದಾರೆ. ಸ್ಪೀಕರ್ ಮಾತಿಗೆ‌ ಗೌರವ ನೀಡಿ ರಾಜೀನಾಮೆ ವಾಪಸ್ ಪಡೆಯುವುದಾಗಿ ಸಾ ರಾ ಮಹೇಶ್ ಹೇಳಿಕೆ ನೀಡಿದ್ದಾರೆ. ನಾನೂ ಕೂಡ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಆವೇಶದಿಂದ ಮಾತನಾಡಿದ್ದಾರೆ ಅಷ್ಟೇ.. ನಾಳೆ ಬಂದು ರಾಜೀನಾಮೆ ವಾಪಸ್ ತೆಗೆದುಕೊಳ್ಳಲಿದ್ದಾರೆ ಎಂದರು.

ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ

ಎಲೆಕ್ಷನ್, ಬೈ ಎಲೆಕ್ಷನ್‌ನಲ್ಲಿ ಇಲ್ಲ ಮೈತ್ರಿ:

ಪದವೀಧರ ನಾಲ್ಕು ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದ್ದು, ನಾಲ್ಕೂ ಕ್ಷೇತ್ರದಲ್ಲಿನ ಜೆಡಿಎಸ್ ತನ್ನ ಅಭ್ಯರ್ಥಿ ಕಣಕ್ಕಿಳಿಸಲಿದೆ. ಈ ಸಂಬಂಧ ಅಭ್ಯರ್ಥಿ ಆಯ್ಕೆ ಮಾಡಲು ಅಕ್ಟೋಬರ್ 18 ರಂದು ಪಕ್ಷದ ಕಚೇರಿಯಿಂದ ಸಭೆ ಕರೆಯಲಾಗಿದೆ. ವಿಧಾನಸಭೆ, ಪರಿಷತ್‌ನ ಗೆದ್ದ ಮತ್ತು ಸೋತ ಅಭ್ಯರ್ಥಿಗಳನ್ನು ಸಭೆಗೆ ಆಹ್ವಾನಿಸಿದ್ದೇನೆ. ಒಂದೇ ದಿನ ಸಮಯಾವಕಾಶ ಇರುವ ಕಾರಣ ಇಂದು ಸ್ಪೀಡ್ ಪೋಸ್ಟ್ ಮೂಲಕ ಪತ್ರ ಕಳಿಸಿದ್ದೇನೆ. ಅಂದಿನ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಎಲ್ಲರ ಅಭಿಪ್ರಾಯ ಪಡೆದು ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.

ಸುಪ್ರೀಂ ತೀರ್ಪು ನೋಡಿಕೊಂಡು ಅಭ್ಯರ್ಥಿಗಳ ಆಯ್ಕೆ:

ಅಕ್ಟೋಬರ್ 27ರಂದು ಸುಪ್ರೀಂಕೋರ್ಟ್‌ನಲ್ಲಿ‌ 17 ಜನ ಅನರ್ಹರ ಬಗ್ಗೆ ತೀರ್ಪು ಬರಲಿದೆ. ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ತೀರ್ಪು ಎತ್ತಿ ಹಿಡಿದರೆ ಚುನಾವಣೆ ಬರುತ್ತದೆ. ಇಲ್ಲದಿದ್ದರೆ ಚುನಾವಣೆ ಬರಲ್ಲ. ಆದ್ದರಿಂದ ತೀರ್ಪು ನೋಡಿ ನಾವು ಮುಂದಿನ ಹೆಜ್ಜೆ ಇಡಲಿದ್ದೇವೆ. ಈಗಾಗಲೇ ಎಲ್ಲಾ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಆದರೆ, ಸುಪ್ರೀಂ ತೀರ್ಪು ನೋಡಿಕೊಂಡು ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ ಎಂದರು.

ಅನರ್ಹರಿಗೆ ನೋ ಎಂಟ್ರಿ:

ಕಾಂಗ್ರೆಸ್ ಪಕ್ಷ ಅನರ್ಹರು ವಾಪಸ್ ಬಂದರೆ ಸೇರಿಸಿಕೊಳ್ಳುವ ನಿಲುವು ಪ್ರಕಟಿಸಿದೆ. ಆದರೆ, ಜೆಡಿಎಸ್ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಮೂವರು ಹೊರಹೋಗಿದ್ದಾರೆ ಅವರ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿದ್ದೇವೆ ಮತ್ತೆ ಅವರನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದು ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಮಾಜಿ ಪ್ರಧಾನಿ ಅನ್ನೋದನ್ನೂ ಜನ ಮರೆತಿದ್ದಾರೆ:

ಉಪ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲೇ ನಡೆಯಲಿದೆ. ಅವರಿಗೆ ಸರಿಸಮನಾದ ಲೀಡರ್ ಬೇಕು. ಆದರೆ, ನಾನು‌ ಮಾಜಿ ಪ್ರಧಾನಿ ಅನ್ನೋದು ಜನರಿಗೆ ಮರೆತೇ ಹೋಗಿದೆ. ನಾನು ಮೋದಿಗೆ ಸರಿಸಮನಾದ ನಾಯಕ ಅಲ್ಲ ಎಂದು ಪರೋಕ್ಷವಾಗಿ ಅಸಹಾಯಕತೆ ವ್ಯಕ್ತಪಡಿಸಿದರು.

Last Updated : Oct 16, 2019, 8:42 PM IST

ABOUT THE AUTHOR

...view details