ವಿಜಯಪುರ: ಮಹಾನಗರ ಪಾಲಿಕೆ ಅವಧಿ ಮುಗಿದು 2 ವರ್ಷವಾದರೂ ಇಲ್ಲಿಯವರೆಗೆ ಚುನಾವಣೆ ನಡೆದಿಲ್ಲ. ಕೆಲ ಸದಸ್ಯರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ ಕಾರಣ ಅದು ಇತ್ಯರ್ಥವಾಗದೆ ನಗರದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸ್ಥಳೀಯ ಶಾಸಕರಾಗಿದ್ದಾರೆ. ಅವರು ಕೈಗೆ ಸಿಗುವುದಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಬೆಳೆದಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದರು.
ಬಡಾವಣೆಯ ಸಮಸ್ಯೆ ಹೇಳಬೇಕು ಎಂದರೂ ವಾರ್ಡ್ಗಳಲ್ಲಿ ಸದಸ್ಯರುಗಳಿಲ್ಲ. ಪಾಲಿಕೆ ಚುನಾವಣೆ ನಡೆಯದೆ ಇರುವುದು ಶಾಸಕರಿಗೆ ವರದಾನವಾಗಿದೆ. ಇಷ್ಟೊಂದು ವಿಳಂಬ ಹಿಂದೆಂದೂ ಆಗಿಲ್ಲ. ಮಾಜಿ ಮೆಂಬರ್ಗಳು ಅವರಾಗಿಯೇ ಮಾತಾಡಿಕೊಂಡು ಕೋರ್ಟ್ ವಿಷಯ ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನಗರ ಶಾಸಕ ಯತ್ನಾಳ ಕೈಗೆ ಸಿಗುತ್ತಿಲ್ಲ. ಇನ್ನು ಹಿಂದಿನವರು ಯಾರೂ ರಸ್ತೆಗಳನ್ನು ಮಾಡಿಲ್ಲ ಎಂದು ಶಾಸಕ ಯತ್ನಾಳ ಹೇಳುವುದು ತಪ್ಪು. ನನ್ನ ಕಾಲದಲ್ಲಿ ಸಾಕಷ್ಟು ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಬೇರೆಯವರು ಮಾಡಿದ ಕೆಲಸಕ್ಕೆ ಇಂದು ಪ್ರಚಾರ ಪಡೆಯುತ್ತಿದ್ದು, ವೈಯಕ್ತಿಕ ದ್ವೇಷ ಇದ್ದರೂ ಸಹಿತ ಸಿಎಂ ಅವರ ಫೋಟೋ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಕಿಕೊಳ್ಳಬೇಕು ಎಂದು ಯತ್ನಾಳ್ಗೆ ಟಾಂಗ್ ನೀಡಿದರು.
ರಾತ್ರಿ ಒಂದು ಮಾತನಾಡುತ್ತಾರೆ, ಬೆಳಗ್ಗೆ ಒಂದು ಮಾತನಾಡುತ್ತಾರೆ. ನಿತ್ಯ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಆರೋಪ ಮಾಡುವುದೇ ಅವರ ಕೆಲಸವಾಗಿದೆ ಎಂದು ಯತ್ನಾಳ್ ವಿರುದ್ಧ ಕಿಡಿಕಾರಿದರು.