ಮುದ್ದೇಬಿಹಾಳ :ತಾಲೂಕಿನ ಮಿಣಜಗಿ ಗ್ರಾಮದಲ್ಲಿ ದಲಿತ ಯುವಕನ ಮೇಲೆ ಸವರ್ಣೀಯರು ಹಲ್ಲೆಗೈದ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಯುವಕ ಕಾಶೀನಾಥ ತಳವಾರ ಮೊದಲ ಬಾರಿಗೆ ಮಾಧ್ಯಮದ ಎದುರಿಗೆ ಮಾತನಾಡಿದ್ದಾರೆ.
ರಸ್ತೆಯ ಬದಿ ನಿಂತ ವೇಳೆ ಸವರ್ಣೀಯರಿಗೊಬ್ಬರಿಗೆ ಸೇರಿದ ಕಾರು ನನ್ನ ಕೈಗೆ ಬಡಿದಿತ್ತು. ಇದನ್ನು ಪ್ರಶ್ನಿಸಿದ್ದಕ್ಕೆ ತನ್ನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು 9 ಜನರ ಹೆಸರನ್ನು ಹಲ್ಲೆಗೊಳಗಾದ ಯುವಕ ಕಾಶೀನಾಥ್ ಹೇಳಿಕೊಂಡಿದ್ದಾರೆ. ಘಟನೆ ಜುಲೈ 17ರಂದು ನಡೆದಿದೆ ಎಂದಿರುವ ಯುವಕ ತನ್ನ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
ದಲಿತ ಯುವಕನ ಮೇಲೆ ಹಲ್ಲೆ: ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಡಿಎಸ್ಎಸ್ ಪ್ರತಿಭಟನೆ ಡಿಎಸ್ಎಸ್ನಿಂದ ಎಚ್ಚರಿಕೆ :ಹಲ್ಲೆಗೈದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಕಾಶೀನಾಥ್ ತಳವಾರ ಅವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಸಂಘಟನೆಯ ಪದಾಧಿಕಾರಿಗಳು ಮಾತನಾಡಿದರು. ಒಬ್ಬ ದಲಿತನನ್ನು ನಡು ರಸ್ತೆಯಲ್ಲಿ ಥಳಿಸಿರುವ ಘಟನೆ ಮಾನವ ಕುಲಕ್ಕೆ ಅವಮಾನ. ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸುವ ಕೆಲಸ ಕಾಣದ ಕೈಗಳಿಂದ ಆಗುತ್ತಿದೆ. ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸಂಘಟನೆಯ ಮುಖಂಡರಾದ ಸಿ ಜಿ ವಿಜಯಕರ್, ಹರೀಶ ನಾಟೀಕಾರ್, ದೌರ್ಜನ್ಯ ತಡೆ ಸಮಿತಿ ಸದಸ್ಯ ಬಸವರಾಜ ಪೂಜಾರಿ ಹಾಗೂ ಮತ್ತಿತರರು ಒತ್ತಾಯಿಸಿದರು.
ನಿಷ್ಪಕ್ಷಪಾತ ತನಿಖೆ ನಡೆಸಿ: ತಾಳಿಕೋಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ರಾಜ್ಯಾಧ್ಯಕ್ಷ ಹಾಸೀಂಪೀರ್ ವಾಲೀಕಾರ್, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು. ತನಿಖೆಯನ್ನು ನಿಷ್ಪಕ್ಷಪಾತ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಲಭೀಮ್ ನಾಯ್ಕ, ಅಂಬೇಡ್ಕರ್ ಸೇನೆಯ ತಾಲೂಕು ಅಧ್ಯಕ್ಷ ಪ್ರಕಾಶ ಚಲವಾದಿ, ಮಂಜುನಾಥಸ್ವಾಮಿ ಕುಂದರಗಿ, ರುದ್ರೇಶ್ ಮುರಾಳ ಹಾಗೂ ಪ್ರಧಾನಿ ವಾಲೀಕಾರ್ ಮತ್ತಿತರರಿದ್ದರು.