ಬೆಂಗಳೂರು: ಸ್ಥಳೀಯ ದ್ರಾಕ್ಷಿ ಬೆಳೆಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಜಯಪುರ ನಗರದಲ್ಲಿ 141 ಎಕರೆ ವಿಸ್ತೀರ್ಣದಲ್ಲಿ ವೈನ್ ಪಾರ್ಕ್ ನಿರ್ಮಿಸಲಾಗುವುದು ಎಂದು ತೋಟಗಾರಿಕಾ ಸಚಿವ ಮುನಿರತ್ನ ವಿಧಾನಸಭೆಯಲ್ಲಿಂದು ಹೇಳಿದರು. ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ದೇವಾನಂದ ಪೂಲಸಿಂಗ್ ಚವ್ಹಾಣ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ವೈನ್ ಪಾರ್ಕ್ ಯಾಕೆ?: ವಿಜಯಪುರ, ಬೆಳಗಾವಿ, ಬಾಗಲಕೋಟೆ, ಮತ್ತಿತರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಅಂದಾಜು 3 ರಿಂದ 4 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತದೆ. ಇವೆಲ್ಲವೂ ಮಹಾರಾಷ್ಟ್ರಕ್ಕೆ ಹೋಗುವುದರಿಂದ ಆದಾಯವೂ ಆ ರಾಜ್ಯದ ಪಾಲಾಗುತ್ತಿದೆ. ನಮ್ಮ ರಾಜ್ಯಕ್ಕೆ ವರಮಾನ ಹೆಚ್ಚಿಸುವುದು ಹಾಗೂ ಸ್ಥಳೀಯರಿಗೆ ಪ್ರೋತ್ಸಾಹ ನೀಡಲು ವೈನ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಮುನಿರತ್ನ ವಿವರಿಸಿದರು.
ವಿದೇಶಿ ಬ್ರಾಂಡ್ ಮಾದರಿ ವೈನ್ ಉತ್ಪಾದಿಸಬೇಕು ಎಂಬುದು ಬಹುತೇಕರ ಬೇಡಿಕೆ. ಸರ್ಕಾರ ಇದನ್ನು ಪರಿಗಣಿಸಲಿದೆ. ಅದಕ್ಕೂ ಮುನ್ನ ಈ ಭಾಗದಲ್ಲಿ ದ್ರಾಕ್ಷಿ ಹಣ್ಣು ಹಾಳಾಗದಂತೆ ಸಂಗ್ರಹಿಸಿಡಲು ಶೀಥಲೀಕರಣ ಕೇಂದ್ರ ಪ್ರಾರಂಭಿಸಲಾಗುವುದು. ಪ್ರಸಕ್ತ ಬಜೆಟ್ನಲ್ಲಿ ಮುಖ್ಯಮಂತ್ರಿಗಳು 100 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ನಬಾರ್ಡ್ನಿಂದ 41 ಕೋಟಿ ರೂ. ಆರ್ಥಿಕ ನೆರವಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿಯೂ ಸಿಕ್ಕಿದೆ. ವಿಸ್ತೃತ ಯೋಜನಾ ವರದಿ ತಯಾರಿಸಿ ಶೀಘ್ರದಲ್ಲೇ ಶೀಥಲೀಕರಣ ಕೇಂದ್ರ ಪ್ರಾರಂಭಿಸಲಾಗುವುದು. 10 ಸಾವಿರ ಮೆ.ವ್ಯಾಟ್ ಸಾಮರ್ಥ್ಯ ಇರುವುದರಿಂದ ಸ್ಥಳೀಯರು ದ್ರಾಕ್ಷಿ ಹಣ್ಣನ್ನು ಹೊರ ರಾಜ್ಯಗಳಿಗೆ ಕೊಂಡೊಯ್ಯುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.
ಚಿರತೆ ಸೆರೆಗೆ ಕ್ರಮ: ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಚಿರತೆಗಳನ್ನು ಸೆರೆಹಿಡಿದು ಅಭಯಾರಣ್ಯಗಳಿಗೆ ಸ್ಥಳಾಂತರ ಮಾಡಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆಗೆ ಮುಖ್ಯಮಂತ್ರಿ ಪರವಾಗಿ ಉತ್ತರಿಸಿದರು. ಚಿರತೆಗಳನ್ನು ಜೀವಂತವಾಗಿ ಸೆರೆಹಿಡಿದು ಅಭಯಾರಣ್ಯಗಳಿಗೆ ಸ್ಥಳಾಂತರಿಸಲಾಗುತ್ತಿದೆ. ದಾಳಿ ಮಾಡುತ್ತದೆ ಎಂಬ ಕಾರಣಕ್ಕೆ ಚಿರತೆ ಕೊಲ್ಲಲು ಅವಕಾಶವಿಲ್ಲ ಎಂದರು.