ಕರ್ನಾಟಕ

karnataka

ETV Bharat / state

ವಿಜಯಪುರ: ಕಾಂಗ್ರೆಸ್ ಪಾಲಾದ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನ

ವಿಜಯಪುರ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಾಂಗ್ರೆಸ್​ನ ಮಹೇಜಬಿನ ಗಂ.ಅಬ್ದುಲ್​ ರಜಾಕ್​ ಹೊರ್ತಿ ಮತ್ತು ಉಪಮೇಯರ್ ಆಗಿ ಎಸ್.ದಿನೇಶ ತಂ.ಸೋಮನಿಂಗಯ್ಯ ಆಯ್ಕೆಯಾಗಿದ್ದಾರೆ.

By ETV Bharat Karnataka Team

Published : Jan 9, 2024, 9:02 PM IST

Etv Bharat
Etv Bharat

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ

ವಿಜಯಪುರ : ವಿಜಯಪುರ ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪ ಮಹಾಪೌರ ಆಯ್ಕೆಗಾಗಿ ಮಂಗಳವಾರ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಕಡಿಮೆ ಸದಸ್ಯರ ಬಲವಿದ್ದರೂ ಕೂಡ ಕಾಂಗ್ರೆಸ್​ ಪಕ್ಷ ನಗರ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನವನ್ನು ಪಡೆದುಕೊಂಡಿದೆ. ಮಹಾಪೌರರಾಗಿ ಮಹೇಜಬಿನ ಗಂ.ಅಬ್ದುಲ್​ ರಜಾಕ್​ ಹೊರ್ತಿ ಹಾಗೂ ಉಪ ಮಹಾಪೌರರಾಗಿ ಎಸ್.ದಿನೇಶ ತಂ.ಸೋಮನಿಂಗಯ್ಯ ಅವರು ಆಯ್ಕೆಯಾಗಿದ್ದಾರೆ.

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಅಧ್ಯಕ್ಷಾಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಸಂಜಯ ಬಿ.ಶೆಟ್ಟೆಣ್ಣವರ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಚುನಾವಣಾ ಜರುಗಿತ್ತು. ಈ ಪ್ರಕ್ರಿಯೆಯಲ್ಲಿ ಮಹಾಪೌರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮಹೇಜಬಿನ ಗಂ.ಅಬ್ದುಲ್​ ರಜಾಕ್​ ಹೊರ್ತಿ ಅವರ ಪರವಾಗಿ 22 ಸದಸ್ಯರ ಮತ ಬಂದಿದ್ದರಿಂದ ಮಹಾಪೌರರಾಗಿ ಆಯ್ಕೆ ಆದರು. ಇನ್ನು ಉಪಮಹಾಪೌರ ಸ್ಥಾನಕ್ಕೆ ಎಸ್.ದಿನೇಶ ತಂ.ಸೋಮನಿಂಗಯ್ಯ ಅವರು ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ನಿಗದಿಯಂತೆ ಮಂಗಳವಾರ ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ಮಹಾಪೌರ ಸ್ಥಾನಕ್ಕೆ 2 ಅಭ್ಯರ್ಥಿಗಳಿಂದ 5 ನಾಮಪತ್ರಗಳು ಸ್ವೀಕೃತವಾಗಿದ್ದವು. ಮಹಾಪೌರ ಸ್ಥಾನಕ್ಕೆ ಸಲ್ಲಿಕೆಯಾದ 5 ನಾಮಪತ್ರ ಹಾಗೂ ಉಪಮಹಾಪೌರ ಸ್ಥಾನಕ್ಕೆ ಸಲ್ಲಿಕೆಯಾದ 2 ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಮಧ್ಯಾಹ್ನ 1 ಗಂಟೆಗೆ ಮತದಾನ ಪ್ರಕ್ರಿಯೆಯಲ್ಲಿ ಮಹೇಜಬೀನ ಗಂ.ಅಬ್ದುಲ್​ ರಜಾಕ್​ ಹೊರ್ತಿ ಅವರ ಪರವಾಗಿ 22 ಜನ ಸದಸ್ಯರು ಮತ ಚಲಾಯಿಸಿದ್ದರಿಂದ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಮಹಾಪೌರ ಸ್ಥಾನಕ್ಕೆ ಆಯ್ಕೆಯಾದರು. ಮಹಾಪೌರ ಸ್ಥಾನಕ್ಕೆ ರಶ್ಮಿ ಗಂ.ಬಸವರಾಜ ಕೋರಿ ಅವರು 2 ನಾಮಪತ್ರಗಳು ಸಲ್ಲಿಸಿದ್ದರು.

ಒಟ್ಟು 35 ಸದಸ್ಯ ಬಲದ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 17, ಕಾಂಗ್ರೆಸ್​​ನ 10 ಹಾಗೂ ಇತರರು 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಎಐಎಂಐಎಂ 2 ಸ್ಥಾನದಲ್ಲಿ ಗೆದ್ದಿದ್ದರೆ 1 ಸ್ಥಾನದಲ್ಲಿ ಜೆಡಿಎಸ್ ಅಭ್ಯರ್ಥಿ ಸದಸ್ಯರಾಗಿ ಆಯ್ಕೆ ಆಗಿ ಬಂದಿದ್ದರು. ಅತಿ ಹೆಚ್ಚು ಸ್ಥಾನ ಪಡೆದ ಬಿಜೆಪಿ - ಕಾಂಗ್ರೆಸ್ ಮಧ್ಯೆ ಪಾಲಿಕೆ ಆಧಿಕಾರಕ್ಕಾಗಿ ಭಾರೀ ಕಸರತ್ತು ನಡೆದಿತ್ತು. ಕೊನೆಗೆ 5 ಜನ ಪಕ್ಷೇತರರು 2 ಎಐಎಂಐಎಂ ಹಾಗೂ 1 ಜೆಡಿಎಸ್ ಸದಸ್ಯರ ಬೆಂಬಲ ಪಡೆದು ಕಾಂಗ್ರೆಸ್ ಪಕ್ಷದ ಮಾಹೇಜಬೀನ ಹೊರ್ತಿ ಮೇಯರ್ ಆಗಿ ಆಯ್ಕೆಯಾದರೆ, ದಿನೇಶ ಹಳ್ಳಿ ಉಪಮೇಯರ ‌ಆಗಿ ಆಯ್ಕೆಯಾದರು.

ಇದಕ್ಕೂ ಮೊದಲು ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ರಶ್ಮೀ ಕೋರಿ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಬಿಜೆಪಿ ಸದ್ಯಸರು ಮತದಾನ ಬಹಿಷ್ಕಾರ ಮಾಡಿ ಹೊರ ನಡೆದರು. ಚುನಾವಣಾ ಅಧಿಕಾರಿ ಅಕ್ರಮ ಎಸಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ ಆಕ್ರೋಶ ಹೊರಹಾಕಿದರು.

ಬಿಜೆಪಿಯ ಓರ್ವ ಸದಸ್ಯರು ಇತ್ತೀಚೆಗೆ ನಿಧನರಾಗಿದ್ದಾರೆ. ಬಿಜೆಪಿಯ 16 ಸದಸ್ಯರ ಮತಗಳು ಹಾಗೂ ಬಸನಗೌಡ ಯತ್ನಾಳ್​ ಹಾಗೂ ಸಂಸದ ಜಿಗಜಿಣಗಿ ಅವರ ಮತ ಸೇರಿ ಒಟ್ಟು 18 ಮತಗಳಿದ್ದವು. ಕಾಂಗ್ರೆಸ್​ನ ಹತ್ತು ಜನ‌ ಸದಸ್ಯರು, ಐವರು ಪ್ರಕ್ಷೇತರರು ಇಬ್ಬರು ಎಐಎಂಐಎಂ ಹಾಗೂ ಓರ್ವ ಜೆಡಿಎಸ್ ಸದಸ್ಯನ ಬೆಂಬಲ ಕೂಡಾ ಕಾಂಗ್ರೆಸ್ ಪಕ್ಷಕ್ಕೆ ದೊರೆಯಿತು.

ಸಚಿವ ಎಂ.ಬಿ ಪಾಟೀಲ್, ಶಾಸಕ ವಿಠಲ ಕಟಕದೊಂಡ, ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಹಾಗೂ ಪ್ರಕಾಶ ರಾಠೋಡ್​​ರ ಮತಗಳ ಬೆಂಬಲದಿಂದ ಒಟ್ಟು 22 ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಿದ್ದಿದ್ದರಿಂದ ಕಾಂಗ್ರೆಸ್​ ಅಭ್ಯರ್ಥಿಯೇ ಮಹಾನಗರ ಪಾಲಿಕೆ ಮಹಾಪೌರರಾಗಿ ಆಯ್ಕೆ ಆದರು. ಈ ಫಲಿತಾಂಶ ನಮಗೆ ಮೊದಲೇ ಗೊತ್ತಿತ್ತು. ಸೋಲುವ ಭಯದಿಂದ ಬಿಜೆಪಿಯವರು ಪಲಾಯನ ಮಾಡಿದ್ದಾರೆ ಎಂದು ಸಚಿವ ಎಂ.ಬಿ ಪಾಟೀಲ ಗೆಲುವಿನ ಬಳಿಕ ವ್ಯಂಗ್ಯವಾಡಿದರು.

ಇದನ್ನೂ ಓದಿ :ಕಾಂಗ್ರೆಸ್​​​​ನವರು ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ: ಪ್ರಹ್ಲಾದ್​ ಜೋಶಿ

ABOUT THE AUTHOR

...view details