ಕರ್ನಾಟಕ

karnataka

ETV Bharat / state

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಡುವ ಠೇವಣಿ ಹಣ ಸಹಕಾರಿ ಬ್ಯಾಂಕುಗಳಲ್ಲಿಯೇ ತೊಡಗಿಸುವ ಬಗ್ಗೆ ಪರಿಶೀಲನೆ: ಸಿದ್ದರಾಮಯ್ಯ - cm siddramaiah speech

ರೈತರಿಗೆ ಸಕಾಲದಲ್ಲಿ ಸಾಲ ಸಿಕ್ಕರೆ ವ್ಯವಸಾಯ ಮಾಡಲು ಅನುಕೂಲವಾಗುತ್ತದೆ ಜತೆಗೆ ಉತ್ಪಾದನೆಯೂ ಹೆಚ್ಚಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ
ಸಿದ್ದರಾಮಯ್ಯ

By ETV Bharat Karnataka Team

Published : Nov 20, 2023, 8:27 PM IST

ವಿಜಯಪುರ:ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇಡುವ ಠೇವಣಿ ಹಣವನ್ನು ಸಹಕಾರಿ ಬ್ಯಾಂಕುಗಳಲ್ಲಿಯೇ ತೊಡಗಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ನಡೆದ ಅಖಿಲ ಭಾರತ ಸಹಕಾರಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಹಕಾರಿ ಬ್ಯಾಂಕುಗಳು ಸುಸ್ಥಿರವಾಗಿರಬೇಕು ಆಗ ಮಾತ್ರ ರೈತರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. ರೈತರಿಗೆ ಸಕಾಲದಲ್ಲಿ ಸಾಲ ಸಿಕ್ಕರೆ ವ್ಯವಸಾಯ ಮಾಡಲು ಅನುಕೂಲವಾಗುತ್ತದೆ ಜತೆಗೆ ಉತ್ಪಾದನೆಯೂ ಹೆಚ್ಚಾಗಲಿದೆ. ಈ ಹಿಂದೆಯೂ ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಸಹಕಾರ ಸಂಘಗಳಲ್ಲಿ ರೈತರು ಪಡೆದ ಸಾಲವನ್ನು 50 ಸಾವಿರದವರಗೆ ಮನ್ನಾ ಮಾಡಲಾಗಿತ್ತು. ಇದರಿಂದ ಸಹಕಾರಿ ಸಂಘಗಳು ಹಾಗೂ ಸಹಕಾರ ಬ್ಯಾಂಕುಗಳಿಗೆ ಹೆಚ್ಚಿನ ಬಲ ಸಿಕ್ಕಿತು ಎಂದ ಹೇಳಿದರು.

ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರೋಪ ಸಮಾರಂಭ

ನಬಾರ್ಡ್ ಹಾಗೂ ಪ್ರಧಾನಿಗೆ ಪತ್ರ:ಈ ಬಾರಿ ಬಜೆಟ್ ಮಂಡಿಸಿದ ವೇಳೆ 0% ಸಾಲವನ್ನು 3 ಲಕ್ಷದಿಂದ 5 ಲಕ್ಷದವರೆಗೆ ಏರಿಸುವ ಕೆಲಸ ಮಾಡಿದ್ದೇವೆ. ಈ ಬಗ್ಗೆ ಪ್ರಧಾನಿ ಅವರಿಗೆ ಹಾಗೂ ನಬಾರ್ಡನವರಿಗೂ ಸಾಲ ಕೊಡುವಂತೆ ಪತ್ರ ಬರೆಯುತ್ತೇನೆ. ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ 3 ಲಕ್ಷದವರೆಗೆ ಶೇ.3 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು. ಈಗ ಅದನ್ನು ಬಡ್ಡಿ ರಹಿತವಾಗಿ 3-5 ಲಕ್ಷದವರೆಗೆ ಸಾಲ ನೀಡುವ ಕೆಲಸ ಮಾಡಲಾಗಿದೆ. ಶೇ 3 ರಷ್ಟು ಬಡ್ಡಿಯನ್ನು 15 ಲಕ್ಷ ಆಗುವವರೆಗೆ ಮಾತ್ರ ನೀಡಬೇಕು ಎಂದರು.

ಬಡತನ, ಅಸಮಾನತೆ ಹೊಗಲಾಡಿಸಲು ಅನೇಕ ಕಾರ್ಯಕ್ರಮ: ಸಮಾಜದಲ್ಲಿನ ಬಡತನ, ಅಸಮಾನತೆ ಹೋಗಲಾಡಿಸಲು ನಮ್ಮ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಶಕ್ತಿ ಯೋಜನೆಯಡಿ 1 ಕೋಟಿ ಮಹಿಳೆಯರು ಉಚಿತವಾಗಿ ಬಸ್​​​​ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಸಣ್ಣಪುಟ್ಟ ದೋಷಗಳ ಹೊರತಾಗಿಯೂ ನೂರಕ್ಕೆ 90 ಭಾಗ ಬಡ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರಿಗೆ ಈ ಕಾರ್ಯಕ್ರಮ ರೂಪಿಸಿ ಆರ್ಥಿಕ ಶಕ್ತಿಯನ್ನು ತುಂಬಲಾಗಿದೆ. ಸಹಕಾರ ಕ್ಷೇತ್ರ ಹೇಗೆ ಜಾತಿ ಧರ್ಮಗಳಿಂದ ಹೊರತಾಗಿದೆಯೋ ಅದೇ ರೀತಿ ನಮ್ಮ ಕಾರ್ಯಕ್ರಮಗಳು ಎಲ್ಲ ಧರ್ಮಗಳ ಜನರಿಗೆ ಕೊಟ್ಟಿದ್ದೇವೆ ಎಂದು ಹೇಳಿದರು.

ಅಖಿಲ ಭಾರತ ಸಹಕಾರಿ ಸಪ್ತಾಹ ಸಮಾರೋಪ ಸಮಾರಂಭ

ಬರಗಾಲವನ್ನು ಸಮರ್ಥವಾಗಿ ನಿಭಾಯಿಸುತ್ತೇವೆ:12 ರಾಜ್ಯಗಳಲ್ಲಿ ಬರಗಾಲವಿದ್ದು, ಕರ್ನಾಟಕದಲ್ಲಿ 223 ತಾಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದೆ. ಬರ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸುವ ಕೆಲಸವನ್ನು ನಮ್ಮ ಸಂಸದರು ಮಾಡಬೇಕು. ಕುಡಿಯುವ ನೀರಿಗೆ ಸಮಸ್ಯೆಯಾಗಬಾರದೆಂದು ಡಿಸಿ, ಸಿಇಒಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳ ಬಳಿ 800 ಕೋಟಿ ರೂ.ಗಳು ಲಭ್ಯವಿದೆ. ಉಳಿದಂತೆ ಹಸುಗಳಿಗೆ ಮೇವು, ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರ ಈಗಾಗಲೇ 800 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಬರಗಾಲವನ್ನು ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತದೆ ಎಂದು ಭರವಸೆ ನೀಡಿದರು.

ಜಾತಿ ಧರ್ಮರಹಿತ ಕ್ಷೇತ್ರ:ಸ್ವಾತಂತ್ರ್ಯ ಪೂರ್ವದಿಂದಲೂ ಸಹಕಾರಿ ಕ್ಷೇತ್ರ ಬೆಳೆಯುತ್ತಾ ಬಂದಿದೆ. ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರು ಸಹಕಾರ ಸಂಘ ಪ್ರಾರಂಭಿಸಿದರು. ಇಂದು ರಾಜ್ಯದಲ್ಲಿ 45,600 ಸಹಕಾರ ಸಂಘಗಳಿದ್ದು, ಭಾರತದಲ್ಲಿ 8.5 ಲಕ್ಷ ಸಹಕಾರಿ ಸೊಸೈಟಿಗಳು ಇವೆ. ಅಷ್ಟರ ಮಟ್ಟಿಗೆ ಸಹಕಾರ ಕ್ಷೇತ್ರ ವ್ಯಾಪಕವಾಗಿ ಬೆಳೆದಿದೆ. ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಸಹಕಾರಿ ಕ್ಷೇತ್ರ ವ್ಯಾಪಿಸಿಕೊಂಡಿದೆ. ಯಾವ ರಾಜ್ಯ, ದೇಶದಲ್ಲಿ ಸಹಕಾರಿ ಕ್ಷೇತ್ರ ಉನ್ನತ ಮಟ್ಟದಲ್ಲಿ ಬೆಳೆದಿದೆ ಆ ರಾಜ್ಯ ಹಾಗೂ ದೇಶ ಆರ್ಥಿಕವಾಗಿಗೆ ಬೆಳೆದಿದೆ, ಜೊತೆಗೆ ಜಿಡಿಪಿ ಹೆಚ್ಚಾಗಿದೆ ಎಂದರು.

ಒಂದು‌ ಕಾಲದಲ್ಲಿ ಹಾಲಿನ ಸಹಕಾರಿ ಸಂಘಗಳಿಗೆ ದಲಿತರು ಹಾಲು ಹಾಕುವುದು ಕಡಿಮೆಯಾಗಿತ್ತು. ಈಗ ಅವರು ಸಹಿತ ಸರ್ಕಾರದ ಯೋಜನೆ ಸದುಪಯೋಗ ‌ಪಡೆಸಿಕೊಂಡು ಹೈನುಗಾರಿಕೆ ಮಾಡಿ ಹಾಲನ್ನು ಹಾಕುತ್ತಿದ್ದಾರೆ. ಇಂದು ಪ್ರತಿ ಲೀಟರ್​ ಹಾಲಿಗೆ 5 ರೂಪಾಯಿ ಪ್ರೋತ್ಸಾಹ ಧನ ಕೊಡುವ ನಿರ್ಣಯವನ್ನು ತಾವು ಮಾಡಿರುವುದಾಗಿ ಹೇಳಿದರು. ಮತ್ತೊಂದೆಡೆ ಮಕ್ಕಳಿಗೆ ಉಚಿತವಾಗಿ ಹಾಲು ಕೊಡುವ ಕೆಲಸ ಮಾಡಿದ್ದೇವೆ. ಕ್ಷೀರಭಾಗ್ಯ ಯೋಜನೆ ಅಡಿ ಉಚಿತ ಹಾಲು ನೀಡಲಾಗುತ್ತದೆ. ಇದಕ್ಕಾಗಿ ಸರ್ಕಾರ ಒಂದು ಸಾವಿರದಾ ಇನ್ನೂರು ಕೋಟಿ ಖರ್ಚು ಮಾಡುತ್ತಿದೆ ಎಂದು ಹೇಳಿದರು.

ಮಹಿಳೆಯರು ಸಹಕಾರಿ ಸದಸ್ಯರಾಗಲು ಪ್ರೋತ್ಸಾಹ:ನಾನು ಈ ಹಿಂದೆ ಸಿಎಂ ಆಗಿದ್ದಾಗಲೂ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಮಹಿಳೆಯರಿಗೆ ಸಹಕಾರ ಸಂಘದ ಸದಸ್ಯರಾಗಲು ಸರ್ಕಾರವೇ ಜನರ ಪರವಾಗಿ ಶೇರು ಮೊತ್ತವನ್ನು ಭರಿಸಿತ್ತು. ಈ ಕಾರ್ಯಕ್ರಮ ಇಂದಿಗೂ ಮುಂದುವರೆಯುತ್ತಿದೆ. ಎಲ್ಲ ದಲಿತರು ಹಾಗೂ ಮಹಿಳೆಯರು ಸಹಕಾರ ಸಂಘದ ಸದಸ್ಯರಾಗಬೇಕು. ಸರ್ಕಾರದ ಸಹಾಯದಿಂದಾಗಿ ದಲಿತರು ಹಾಗೂ ಮಹಿಳೆಯರು ಹಾಲು ಸಹಕಾರ ಸಂಘದಲ್ಲಿ ಸದಸ್ಯರಾಗುತ್ತಿದ್ದಾರೆ. ನಮ್ಮ ಸರ್ಕಾರ ಪ್ರತಿ ಲೀ.ಗೆ ರೂ.5 ಗಳ ಪ್ರೋತ್ಸಾಹಧನ ನೀಡುತ್ತಿದೆ. ಈಗ ಪ್ರೋತ್ಸಾಹ ಧನವನ್ನು ಪ್ರತಿ ಲೀ.ಗೆ 5 ರೂ. ನಿಂದ ಹಿಡಿದು 8 ರೂ.ಗೆ ಹೆಚ್ಚಳ ಮಾಡಿ ನೀಡಲಾಗುತ್ತಿದ್ದು, ಈ ಮೊತ್ತ ರೈತರಿಗೆ ನೇರವಾಗಿ ತಲುಪುತ್ತಿದೆ ಎಂದರು. ಕಾರ್ಯಾಕ್ರಮದಲ್ಲಿ ಸಹಕಾರ ಸಚಿವ ಕೆ. ಎನ್. ರಾಜಣ್ಣ ಸೇರಿದಂತೆ ಇತರರು ಭಾಗಿಯಾಗಿದ್ದರು.

ಇದನ್ನೂ ಓದಿ:ಬರಗಾಲದ ನಡುವೆ ರಾಜ್ಯದಲ್ಲಿ ಬಿತ್ತನೆಯಾಗಿದ್ದೆಷ್ಟು, ಫಸಲು ನಷ್ಟವಾಗಿದ್ದೆಷ್ಟು?

ABOUT THE AUTHOR

...view details