ವಿಜಯಪುರ: ರಾಜಕಾರಣಿ ಹಾಗೂ ಪತ್ರಕರ್ತರ ನಡುವೆ ಅವಿನಾಭಾವ ಸಂಬಂಧವಿದೆ. ಒಂದು ರೀತಿಯಲ್ಲಿ ಗಂಡ-ಹೆಂಡತಿಯ ಸಂಬಂಧದಂತೆ. ಆದರೆ, ಈ ಸಂಬಂಧ ಪ್ರಾಮಾಣಿಕವಾದ ಕಾರ್ಯನಿರತರವಾದ ಸಂಬಂಧ ಇರಬೇಕು. ಈ ಗಡಿಯನ್ನು ಇಬ್ಬರು ದಾಟಬಾರದು. ಈ ಗಡಿದಾಟದ ಆರೋಗ್ಯಕರ ಸಂಬಂಧವಿದ್ದರೆ ಇಡೀ ರಾಜ್ಯಕ್ಕೆ ಶ್ರೇಯಸ್ಕರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜಕಾರಣಿಗಳು ಹಾಗೂ ಪತ್ರಕರ್ತರು ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ. ಪತ್ರಕರ್ತರು ಇರದಿದ್ದರೆ ರಾಜಕಾರಣಿಗಳನ್ನು ಮಾತನಾಡಿಸುವವರೂ ಯಾರೂ ಇರುತ್ತಿರಲಿಲ್ಲ. ಇನ್ನೊಂದೆಡೆ ರಾಜಕಾರಣಿಗಳು ಇರದೇ ಇದ್ದರೆ ಪತ್ರಿಕೆಗಳನ್ನು ಯಾರು ಓದಬೇಕು? ಪ್ರಥಮ ಪುಟ ರಾರಾಜಿಸುವುದೇ ರಾಜಕಾರಣ ಸುದ್ದಿಯಿಂದ. ಹೀಗಾಗಿ ನಮ್ಮದು ಅವಿನಾಭಾವ ಸಂಬಂಧ. ನಾವು ಜಗಳವಾಡಿದರೂ ಅದೊಂದು ರೀತಿ ಗಂಡ-ಹೆಂಡತಿಯ ಸಂಬಂಧದಂತೆ ಎಂದು ಅವರು ವ್ಯಾಖ್ಯಾನ ಮಾಡಿದರು.
ಪತ್ರಕರ್ತ ಪ್ರಾದೇಶಿಕವಾದಿರಲಿ: ಪತ್ರಿಕೆಗಳು ಪ್ರಾದೇಶಿಕವಾಗಿ ಹೊರಬರಬಹುದು. ಆದರೆ, ಪತ್ರಕರ್ತರು ಪ್ರಾದೇಶಿಕವಾಗಬಾರದು. ಪತ್ರಕರ್ತ ಅಖಂಡ ಕರ್ನಾಟಕದ ಪತ್ರಕರ್ತನಾಗಬೇಕು. ಉತ್ತರ, ದಕ್ಷಿಣ ಎಂಬ ಭೇದಭಾವ ಪತ್ರಕರ್ತರಲ್ಲಿ ಬೇಡ. ಈ ಭೇದಭಾವದಿಂದ ಯಾವ ಪ್ರಯೋಜನವೂ ಇಲ್ಲ. ಪತ್ರಕರ್ತರು ಅಖಂಡ ಕರ್ನಾಟಕದ ಬಗ್ಗೆ ಚಿಂತನೆ ನಡೆಸಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ. ಈ ಸಮ್ಮೇಳನಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶೀರ್ವಾದವಿದೆ. ಬಸವನಾಡಿನ ಆಶಯ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯಗಳನ್ನು ಮನದಾಳದಲ್ಲಿ ತುಂಬಿಕೊಂಡಾಗ ಮಾತ್ರ ಸಮ್ಮೇಳನ ಔಚಿತ್ಯ ಪೂರ್ಣವಾಗಲು ಸಾಧ್ಯ ಎಂದರು.
ಜೋಳದ ರೊಟ್ಟಿ ನೆನಪಿಸಿದ ಸಿಎಂ:ವಿಜಯಪುರ ಜನತೆ ಗಟ್ಟಿಜೋಳದಂತೆ. ಶ್ರೇಷ್ಠತಾಯಿ ಕೃಷ್ಣೆ ಹಾಗೂ ಮಣ್ಣಿನ ಭವ್ಯತೆ ಸೊಗಡಿನ ಫಲವಾಗಿ ಬೆಳೆಯುವ ವಿಜಯಪುರ ಜೋಳ ಅತ್ಯಂತ ಶ್ರೇಷ್ಠ. ಹೈಬ್ರೀಡ್ ಕಾಲದಲ್ಲಿಯೂ ಸಹ ವಿಜಯಪುರ ಜೋಳವನ್ನೇ ಅನೇಕರು ಬಳಸುವುದುಂಟು. ವಿಜಯಪುರ ಜೋಳದ ಶ್ರೇಷ್ಠತೆ, ಸತ್ವ ಹೈಬ್ರೀಡ್ ಜೋಳದಲ್ಲಿ ಇಲ್ಲ. ವಿಜಯಪುರ ಜೋಳದ ರೀತಿಯಲ್ಲಿಯೇ ಇಲ್ಲಿನ ಜನತೆ ಕೂಡ ಶ್ರೇಷ್ಠ. ಒಂದು ರೀತಿಯಲ್ಲಿ ಗಟ್ಟಿ ಹಾಗೂ ಶುದ್ಧ ಎಂದು ಮುಖ್ಯಮಂತ್ರಿ ಬಣ್ಣಿಸಿದರು.
ಕೃಷ್ಣೆಯ ಹನಿ ಹನಿ ನೀರು ಕೊನೆಯ ಭಾಗಕ್ಕೆ ತಲುಪಿದಾಗ ಈ ಭಾಗ ಭಾರತ ದೇಶಕ್ಕೆ ಅನ್ನ ಕೊಡುವ ನಂದನವನವಾಗಲಿದೆ. ಈ ಕನಸು ಸಾಕಾರಗೊಳಿಸಲು ಎಲ್ಲರೂ ಬದ್ಧತೆ ಪ್ರದರ್ಶಿಸಬೇಕಿದೆ. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ, ಕೃಷ್ಣಾ ಯೋಜನೆಯಲ್ಲಿ ಸ್ಕೀಮ್ ಎ, ಸ್ಕೀಮ್ ಬಿ ಎಂದು ಹೇಳಿ ಅನೇಕ ನೀರಾವರಿ ಯೋಜನೆಗಳಿಗೆ ಅಧಿಕಾರಿಗಳು ಅಡ್ಡಿಪಡಿಸಿದ್ದರು. ಕೃಷ್ಣಾ ಎಂದರೆ ಒಂದೇ ಸ್ಕೀಮ್. ಎ, ಬಿ ಎಂದು ಪರಿಗಣಿಸಬೇಡಿ ಎಂದು ಹೇಳಿ ‘ಸ್ಕೀಮ್ ಬಿ’ ಅಡಿ ಬರುವ ಒಂಬತ್ತು ಯೋಜನೆಗಳಲ್ಲಿ ನಾನು ಏಳು ಯೋಜನೆ ಪ್ರಾರಂಭಿಸಿದೆ ಎಂದು ತಾವು ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿನ ಕೆಲವು ಅನುಭವ ಹಂಚಿಕೊಂಡರು.
ಪತ್ರಕರ್ತರ ಬೇಡಿಕೆಗೆ ಅಸ್ತು: ಇದೇ ವೇಳೆ ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಸೌಲಭ್ಯ, ಮಾಶಾಸನ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆಗಳಿಗೆ ಅಸ್ತು ಎನ್ನುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರಕರ್ತರಿಗೆ ಬಂಪರ್ ಕೊಡುಗೆ ನೀಡಿದರು. ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಸೇವೆ ಒದಗಿಸಲು ಬದ್ಧನಾಗಿದ್ದು, ನೈಜ ಗ್ರಾಮೀಣ ಪತ್ರಕರ್ತರಿಗೆ ಈ ಸೌಲಭ್ಯ ದೊರಕಿಸುವ ಆಶಯದ ಹಿನ್ನೆಲೆಯಲ್ಲಿ ಸಂಘ ನೀಡುವ ಸಮರ್ಪಕ ಮಾಹಿತಿ ಆಧರಿಸಿ ಈ ಸೌಲಭ್ಯ ಜಾರಿಗೊಳಿಸಲಾಗುವುದು. ಅಲ್ಲದೇ ನಿವೃತ್ತ ಪತ್ರಕರ್ತರಿಗೆ ಮಾಶಾಸನ ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್ನಲ್ಲಿ ಅನುದಾನ ಮೀಸಲಿರಿಸಲಾಗುವುದು ಎಂದು ಭರವಸೆ ನೀಡಿದರು.