ಕರ್ನಾಟಕ

karnataka

ETV Bharat / state

ಸಿದ್ದೇಶ್ವರ ಶ್ರೀಗಳ ಅಸ್ಥಿ ಸಂಗ್ರಹ ಕಾರ್ಯ ಪೂರ್ಣ: ಭಾನುವಾರ ವಿಸರ್ಜನೆ

ಸರಳತೆಯ ಸ್ವರೂಪವಾಗಿದ್ದ ಸಿದ್ದೇಶ್ವರ ಶ್ರೀಗಳ ಚಿತೆಯ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಚಿತಾಭಸ್ಮವನ್ನು ಅವರ ಇಚ್ಛೆಯಂತೆ ಸಂಗ್ರಹ ಮಾಡಲಾಗಿದ್ದು, ಭಾನುವಾರದಂದು ಅಸ್ಥಿ ವಿಸರ್ಜನೆ ಮಾಡಲಾಗುವುದು ಎಂದು ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀ ತಿಳಿಸಿದ್ದಾರೆ.

By

Published : Jan 5, 2023, 11:08 AM IST

Updated : Jan 5, 2023, 11:45 AM IST

siddeshwar shri
ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮ ಸಂಗ್ರಹ

ಸಿದ್ದೇಶ್ವರ ಶ್ರೀಗಳ ಅಸ್ಥಿ ಸಂಗ್ರಹ ಕಾರ್ಯ

ವಿಜಯಪುರ: ನಡೆದಾಡುವ ದೇವರು, ಪ್ರವಚನ ವಾಗ್ಮಿ ಹಾಗು ನಾಡಿನ ಶ್ರೇಷ್ಠ ಸಂತರಾಗಿದ್ದ ಸಿದ್ದೇಶ್ವರ ಸ್ವಾಮೀಜಿ ನಿಧನರಾಗಿ ಮೂರು ದಿನ ಕಳೆದಿದೆ. ಇಂದು ಚಿತಾಭಸ್ಮದಿಂದ ಅಸ್ಥಿ ಸಂಗ್ರಹಣೆ ಕಾರ್ಯ ಮಾಡಲಾಯಿತು. ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಐದು ದೊಡ್ಡ ಮಡಿಕೆಗಳಲ್ಲಿ ಅಸ್ಥಿ ಸಂಗ್ರಹಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಬಸವಲಿಂಗ ಶ್ರೀ, 'ಇಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಪೂಜ್ಯ ಗುರುದೇವರ ಚಿತಾಭಸ್ಮವನ್ನು ಅವರ ಇಚ್ಛೆಯಂತೆ ಸಂಗ್ರಹ ಮಾಡಿದ್ದೇವೆ. ಸ್ವಾಮೀಜಿಗಳ ಅಸ್ಥಿ ಸಂಗ್ರಹ ಮುಕ್ತಾಯವಾಗಿದೆ. ರವಿವಾರ 7ರಂದು ಒಂದೇ ತಂಡದಿಂದ ತ್ರಿವೇಣಿ ಸಂಗಮ ಸುಕ್ಷೇತ್ರ ಕೂಡಲಸಂಗಮ ಮತ್ತು ಗೋಕರ್ಣದಲ್ಲಿ ವಿಧಿವಿಧಾನದಂತೆ ವಿಸರ್ಜನೆ ಮಾಡಲಾಗುವುದು. ನಾಳೆ ಹುಣ್ಣಿಗೆ ಇರುವುದರಿಂದ ಚಿತಾಭಸ್ಮ ವಿಸರ್ಜನೆ ಮಾಡಲಾಗುತ್ತಿಲ್ಲ. ರವಿವಾರ ಬೆಳಗ್ಗೆ 5 ಗಂಟೆಗೆ ಆಶ್ರಮದಿಂದ ಅಸ್ತಿಯೊಂದಿಗೆ ಹೊರಡುತ್ತೇವೆ. ಸಿದ್ದೇಶ್ವರ ಅಪ್ಪನವರಿಗೆ ಕೃಷ್ಣೆಯ ಮೇಲೆ ಪ್ರೀತಿ ಇತ್ತು. ಅವರ ಆಶಯದಂತೆ ಅಸ್ಥಿ ವಿಸರ್ಜನೆ ಮಾಡಲಾಗುವುದು' ಎಂದರು.

ಶ್ರೀಗಳ ಚಿತಾಭಸ್ಮ ಭಕ್ತರಿಗೆ ನೀಡಲಾಗುವುದಿಲ್ಲ: 'ಸಿದ್ದೇಶ್ವರ ಸ್ವಾಮೀಜಿಗಳ ಆಣತಿಯಂತೆ ನಾವು ಯಾವುದೇ ಚಿತಾಭಸ್ಮವನ್ನು ಭಕ್ತರಿಗೆ ನೀಡಲ್ಲ. ಭಕ್ತರು ಬೇಕಾದರೆ ಹೊರಗಿನಿಂದ ವಿಭೂತಿ ತಂದು ಅಂತ್ಯಕ್ರಿಯೆ ನಡೆಸಿದ ಜಾಗದಲ್ಲಿಟ್ಟು ಅದನ್ನೇ ಭಸ್ಮವೆಂದು ಭಾವಿಸಿ ಒಯ್ಯಬೇಕು' ಎಂದು ನಿನ್ನೆ ಬಸವಲಿಂಗ ಸ್ವಾಮೀಜಿ ಸ್ಪಷ್ಟನೆ ನೀಡಿದ್ದರು.

ಸಿದ್ದೇಶ್ವರ ಸ್ವಾಮೀಜಿಯ ಮೃತದೇಹದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ರಾತ್ರಿ ನೆರವೇರಿಸಲಾಗಿದೆ. ರಾಜ್ಯ ಸರ್ಕಾರದಿಂದಲೇ ಎಲ್ಲಾ ವಿಧಿ-ವಿಧಾನಗಳನ್ನು ನೆರವೇರಿಸಲಾಗಿತ್ತು. ಅಂತಿಮವಾಗಿ ವಿಜಯಪುರದ ಜ್ಞಾನಯೋಗಾಶ್ರಮದ ಸಂತನಿಗೆ ಅಗ್ನಿಸ್ಪರ್ಶ ಮಾಡಲಾಗಿತ್ತು. ಶ್ರೀಗಳ ಅಗಲಿಕೆಯ ಗೌರವಾರ್ಥ ವಿಜಯಪುರ ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಸಹ ಘೋಷಿಸಲಾಗಿತ್ತು.

ಇದನ್ನೂ ಓದಿ:ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ಭಕ್ತರಿಗೆ ನೀಡುವುದಿಲ್ಲ: ಬಸವಲಿಂಗ ಸ್ವಾಮೀಜಿ

ಪ್ರವಚನದ ಮೂಲಕ ವಿಶ್ವಕ್ಕೆ ಜ್ಞಾನ ಪ್ರಸಾರ ಮಾಡಿ ಶತಮಾನದ ಸಂತರೆನಿಸಿಕೊಂಡ ಸಿದ್ದೇಶ್ವರ ಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆ ಎನ್ನುವುದನ್ನು ಭಕ್ತಗಣಕ್ಕೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಈಗಲೂ ಸಹ ಅವರ ಚಿತೆಯಿರುವ ಜಾಗಕ್ಕೆ ಸಮಸ್ಕರಿಸಿ ತೆರಳುತ್ತಿದ್ದಾರೆ. ಭಕ್ತರಿಗೆ ಚಿತೆಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ:ಮೈಸೂರಿಗೂ ಸಿದ್ದೇಶ್ವರ ಶ್ರೀಗಳಿಗೂ ಇತ್ತು ಅವಿನಾಭಾವ ಸಂಬಂಧ

Last Updated : Jan 5, 2023, 11:45 AM IST

ABOUT THE AUTHOR

...view details