ವಿಜಯಪುರ: ಕೋವಿಡ್ ವ್ಯಾಕ್ಸಿನ್ನಲ್ಲಿ ಭಾರತ ವಿಶ್ವ ದಾಖಲೆ ಮಾಡಿದೆ. ಕಡಿಮೆ ಅವಧಿಯಲ್ಲಿ ಜಗತ್ತಿನ ಯಾವ ರಾಷ್ಟ್ರ ಮಾಡದ ಸಾಧನೆ ಮಾಡಿದೆ. ಈ ಕೆಲಸವನ್ನು ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಮಕ್ಕಳಾಗಲ್ಲ ಎಂದು ಅಪಪ್ರಚಾರ ಮಾಡಿದವರಿಗೂ ಮೋದಿ ಉತ್ತರ ಕೊಟ್ಟಿದ್ದಾರೆ. ಕೊರೊನಾ ನಂತರ ಅನೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಈ ಸಂಕಷ್ಟದ ಬಿಸಿ ಭಾರತಕ್ಕೂ ತಟ್ಟಿದೆ. ಕಚ್ಚಾ ತೈಲದ ಬೆಲೆ ಒಂದು ಬ್ಯಾರಲ್ಗೆ 55 ಡಾಲರ್ ಇದ್ದದ್ದು, ಈಗ 110 ರೂ. ಆಗಿದೆ. ಬೆಲೆ ಏರಿಕೆಗೆ ಮೋದಿ ಅವರು ಹೊಣೆಯಲ್ಲ ಎಂದರು.
ಮೋದಿ ಸಾಧನೆಯೇ ಉತ್ತರ
ಇಂದು ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಪ್ರಾರಂಭವಾಗಿವೆ. ಬೆಲೆ ಏರಿಕೆ ಕೇವಲ ಒಂದು ತಾತ್ಕಾಲಿಕ. ಈ ಸಂಕಷ್ಟದ ನಡುವೆ 20 ತಿಂಗಳುಗಳ ಕಾಲ ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ ಯೋಜನೆಯಡಿ ರೇಷನ್ ಕೊಡುವ ಕೆಲಸ ಮಾಡಿದ್ದಾರೆ. 27 ಲಕ್ಷ ಕೋಟಿ ರೂಪಾಯಿಗಳ ಆತ್ಮನಿರ್ಭರ ಪ್ಯಾಕೇಜ್ ಘೋಷಣೆ ಮಾಡಿದರು. ಮೋದಿ ಏನು ಮಾಡಿದ್ದಾರೆ? ಎನ್ನುವವರಿಗೆ ಉತ್ತರ ಅವರು ಮಾಡಿದ ಸಾಧನೆಯೇ ತೋರಿಸುತ್ತದೆ ಎಂದು ತಿಳಿಸಿದರು.
1986ರಲ್ಲಿ ದಿವಂಗತ ರಾಜೀವ್ ಗಾಂಧಿ ಅವರು 100 ರೂಪಾಯಿ ಕಳುಹಿಸಿದರೆ ಕಟ್ಟ ಕಡೆಯ ಮನುಷ್ಯನಿಗೆ 10 ರೂಪಾಯಿ ತಲುಪುತಿತ್ತು. ಈಗ ಮದ್ಯವರ್ತಿಗಳ ಹಾವಳಿ ಇಲ್ಲ. ಕಾಂಗ್ರೆಸ್ ಒಂದು ಮುಳುಗುತ್ತಿರುವ ಹಡುಗು ಎಂದು ಲೇವಡಿ ಮಾಡಿದರು.