ವಿಜಯಪುರ :ಬರಡು ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಬಂಗಾರದ ಬೆಳೆ ಬೆಳೆಯಲು ಕಾರಣೀಭೂತರಾದ ಜನಪ್ರತಿನಿಧಿಗೆ ನೀರಾವರಿ ಸೌಲಭ್ಯ ಪಡೆದ ಗ್ರಾಮಸ್ಥರು ವಂತಿಗೆ ಸಂಗ್ರಹಿಸಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಕಂಚಿನ ಪ್ರತಿಮೆ ಸ್ಥಾಪಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಸಂಗಾಪುರ ಎಚ್ ಗ್ರಾಮದಲ್ಲಿ ಮಾಜಿ ಜಲಸಂಪನ್ಮೂಲ ಸಚಿವ ಡಾ. ಎಂ.ಬಿ.ಪಾಟೀಲ ಅವರ ಕಂಚಿನ ಪ್ರತಿಮೆಯನ್ನು ಗ್ರಾಮಸ್ಥರು ಸ್ಥಾಪಿಸಿದ್ದಾರೆ. ಈ ಪ್ರತಿಮೆಯನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ವೇಮನ ಸಂಸ್ಥಾನಮಠದ ವೇಮಾನಂದ ಶ್ರೀ, ಮುರುಘೇಂದ್ರ ಶ್ರೀ, ಸಿದ್ದಲಿಂಗ ಸ್ವಾಮೀಜಿ, ಕುಮಾರೇಶ್ವರ ಶ್ರೀ ಹಾಗೂ ಡಾ ಮಹಾದೇವ ಶಿವಾಚಾರ್ಯರು ಅನಾವರಣಗೊಳಿಸಿದರು.
ಬಬಲೇಶ್ವರ ಮತಕ್ಷೇತ್ರವನ್ನು ಪ್ರತಿನಿಧಿಸುವ ಮಾಜಿ ಸಚಿವ ಎಂ.ಬಿ.ಪಾಟೀಲ ತಮ್ಮ ಸ್ವಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ಒದಗಿಸಿದ್ದು, ಇದರಿಂದಾಗಿ ಜಮೀನುಗಳಿಗೆ ನೀರು ಹರಿಸಿದ ಪರಿಣಾಮ ಬರಡು ಭೂಮಿ ನೀರಾವರಿ ಭೂಮಿಯಾಗಿ ಅಭಿವೃದ್ಧಿ ಹೊಂದಿದೆ. ಈ ಹಿನ್ನೆಲೆ ಗ್ರಾಮಸ್ಥರೆಲ್ಲರೂ ಸೇರಿ ಎಂ. ಬಿ ಪಾಟೀಲರ ಕಂಚಿನ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ.
ಕಂಚಿನ ಪುತ್ಥಳಿ ವಿಶೇಷತೆ : ಇದು ಸುಮಾರು 6.5 ಅಡಿ ಎತ್ತರ ಇರುವ ಕಂಚಿನ ಪ್ರತಿಮೆಯಾಗಿದೆ. ನೀರಾವರಿ ಸೌಲಭ್ಯ ಕಲ್ಪಿಸಿದ ಎಂ.ಬಿ.ಪಾಟೀಲರಿಗೆ ಕೃತಜ್ಞತೆ ಸಲ್ಲಿಸುವ ದೃಷ್ಟಿಯಿಂದ ಏನಾದರೂ ಕೊಡುವ ಬಗ್ಗೆ ಗ್ರಾಮಸ್ಥರು ಚಿಂತಿಸಿದ್ದರು. ಮೊದಲು ಬೆಳ್ಳಿಗದೆ ಅಥವಾ ಬಂಗಾರದ ಕಿರೀಟವನ್ನು ತೋಡಿಸೋಣ ಎಂದು ನಿರ್ಧರಿಸಿದ್ದರಂತೆ. ಅನಂತರ ಶಾಶ್ವತವಾಗಿರುವ ಹಾಗೂ ಸದಾ ನೆನಪಿನಲ್ಲಿ ಉಳಿಯುವ ಕಾಣಿಕೆ ನೀಡಬೇಕು ಎಂಬ ಬಗ್ಗೆ ಚಿಂತನೆ ನಡೆಸಿದಾಗ ಈ ಕಂಚಿನ ಪ್ರತಿಮೆ ನಿರ್ಮಿಸುವ ಕುರಿತು ಚರ್ಚೆಯಾಗಿದೆ. ಬಳಿಕ ಊರಿನ ಮುಖಂಡರೆಲ್ಲ ಸೇರಿ ದೇಶದ ಬೇರೆ ಬೇರೆ ರಾಜ್ಯಗಳಿಗೆ ತೆರಳಿ, ಬದುಕಿದ್ದವರ ಪ್ರತಿಮೆ ನಿರ್ಮಿಸಿದ್ದಾರಾ ಎಂಬ ಬಗ್ಗೆ ತಿಳಿದುಕೊಂಡು ಕೊನೆಗೆ ಕಂಚಿನ ಪ್ರತಿಮೆ ನಿರ್ಮಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಇದನ್ನು ಶಾಸಕರ ಗಮನಕ್ಕೆ ತಂದರೆ ನಿರಾಕರಿಸುತ್ತಾರೆ ಎಂಬ ಕಾರಣಕ್ಕೆ ಪ್ರತಿಮೆ ತಯಾರಾಗುವವರೆಗೂ ಈ ವಿಷಯವನ್ನು ಗ್ರಾಮಸ್ಥರು ಬಹಿರಂಗಪಡಿಸಿರಲಿಲ್ಲ.