ವಿಜಯಪುರ:ಮಂಗಳೂರು ಗಲಭೆ ಹಿನ್ನೆಲೆ ಮಾಜಿ ಸಿಎಂ ಕುಮಾರಸ್ವಾಮಿ ಸಿಡಿ ಬಿಡುಗಡೆ ವಿಚಾರ, ಹೆಚ್ಡಿಕೆ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸಿನಿಮಾ ನಿರ್ಮಾಪಕರು, ಅವರಿಗೆ ವಿಡಿಯೋ ಎಡಿಟ್ ಮಾಡೋದು, ಕಟ್ ಆಂಡ್ ಪೇಸ್ಟ್ ಮಾಡೋದು ಚೆನ್ನಾಗಿ ಗೊತ್ತಿದೆ. ಯಾವುದೋ ಗಲಭೆಯದ್ದು ತಂದು ಇಲ್ಲಿ ಜೋಡಿಸೋದು, ಹಾಡಿನ ಮಧ್ಯೆ ಸೇರಿಸೋದು ಗೊತ್ತಿದ್ದವರು ಹೀಗೆ ಮಾಡ್ತಾರೆ, ಹೆಚ್ಡಿಕೆಯದ್ದು ನಾಟಕ ಕಂಪನಿ ಎಂದು ಕಿಡಿಕಾರಿದರು. ಕುಮಾರಸ್ವಾಮಿ ಏನು ಹರಿಶ್ಚಂದ್ರನ 16ನೇ ಸಂತತಿ ಅಲ್ಲ, ನಿಮ್ಮ ಮನೆಯಲ್ಲಿ ಏನಿದೆ ಅದನ್ನ ನೋಡಿಕೊಳ್ಳಿ.
ಹೆಚ್ಡಿಕೆ ಬ್ಲಾಕ್ ಮೇಲರ್
ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡ್ತೀನಿ ಎಂದು ಬೇಕಾಬಿಟ್ಟಿ ಬ್ಲಾಕ್ ಮೇಲ್ ತಂತ್ರ ಮಾಡ್ತಿದ್ದಾರೆ. ಅವರ ಸಿಡಿ ಬಿಡುಗಡೆ ಮಾಡ್ತೀನಿ, ಇವರ ಸಿಡಿ ಬಿಡುಗಡೆ ಮಾಡ್ತೀನಿ ಅಂತಾರೇ ಆದ್ರೆ ಅವರ ವಿಡಿಯೊಗಳೇ ಬಹಳ ಇವೆ, ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಬೇರೆಯವರ ತಟ್ಟೆಯಲ್ಲಿನ ನೋಣ ನೋಡ್ತಿದ್ದಾರೆ ಎಂದು ಲೇವಡಿ ಮಾಡಿದರು.