ಮುದ್ದೇಬಿಹಾಳ: ಚಂದ್ರ ಗ್ರಹಣದ ಕುರಿತ ಮೂಢ ನಂಬಿಕೆಗಳನ್ನು ದೂರ ಮಾಡುವ ಸಲುವಾಗಿ ತಾಲೂಕಿನ ನಾಲತವಾಡದ ಕೆಲ ಯುವಕರು ಸ್ಮಶಾನದಲ್ಲಿ ಊಟ ಮಾಡುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ನಾಲತವಾಡ ಪಟ್ಟಣದ ಪೊಲೀಸ್ ಠಾಣೆಯ ಹಿಂಬದಿಯ ರುದ್ರಭೂಮಿಯಲ್ಲಿ ಒಂಭತ್ತು ಜನ ಯುವಕರ ತಂಡ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಸಿದರು. ಈ ಕುರಿತು ಮಾತನಾಡಿದ ಯುವಕ ಮಾರುತಿ ಸಿದ್ದಾಪೂರ, ಗ್ರಹಣದ ಸಂದರ್ಭದಲ್ಲಿ ಅದು ಮಾಡಬಾರದು, ಇದು ಮಾಡಬಾರದು ಎಂಬ ಕಟ್ಟಳೆಗಳನ್ನು ಹಾಕುತ್ತಿರುತ್ತಾರೆ. ಅಂತವರಿಗೆ ನಾವು ಸ್ಮಶಾನದಲ್ಲಿ ಊಟ ಮಾಡುವ ಮೂಲಕ ಉತ್ತರ ಕೊಟ್ಟಿದ್ದೇವೆ ಎಂದರು.
ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಇರುವಂತೆ ಮುದ್ದೇಬಿಹಾಳ ತಾಲೂಕಿನಲ್ಲಿಯೂ ಚಂದ್ರ ಗ್ರಹಣದ ಸಮಯದಲ್ಲಿ ಯಾರೂ ಮನೆಯಿಂದ ಹೊರಬರಬಾರದು, ಗರ್ಭಿಣಿಯರಿಗೆ ಗ್ರಹಣದಿಂದ ಅಪಾಯವಿದೆ, ಊಟ ಮಾಡಬಾರದು ಎಂಬ ನಂಬಿಕೆಗಳಿವೆ. ಇದನ್ನು ಹೋಗಲಾಡಿಸುವ ಪ್ರಯತ್ನವನ್ನು ಯುವಕರ ತಂಡ ಮಾಡಿದೆ.