ಭಟ್ಕಳ(ಉತ್ತರ ಕನ್ನಡ): ಆರೋಗ್ಯದಲ್ಲಿ ಏರುಪೇರು ಹೆಚ್ಚಾದಾಗ ಆಸ್ಪತ್ರೆಗೆ ಬರುವದಕ್ಕಿಂತ ಅನಾರೋಗ್ಯದ ಲಕ್ಷಣಗಳು ಚಿಕ್ಕದಾಗಿರುವ ಸಮಯದಲ್ಲೇ ತಾಲೂಕು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಅವರಿಂದ ಔಷಧೋಪಚಾರ ಮಾಡಿಸಿಕೊಳ್ಳಬೇಕು. ಇದರಿಂದ ತಾಲುಕು ತಾಲೂಕಾಡಳಿತಕ್ಕೆ ಸಹಕಾರವಾಗಲಿದೆ ಎಂದು ಸಹಾಯಕ ಆಯುಕ್ತ ಭರತ್ ಎಸ್. ಮನವಿ ಮಾಡಿದ್ದಾರೆ.
ನಗರದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾಲೂಕಾಡಳಿತದಿಂದ ತೆಗೆದುಕೊಂಡ ತೀರ್ಮಾನಗಳ ಬಗ್ಗೆ ವಿವರಣೆ ನೀಡಿದ್ದು, ಜನರೇ ಮುಂದೆ ಬಂದು ತಮಗಿರುವ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಬೇಕು. ಪರಿಸ್ಥಿತಿ ಕೈ ಮೀರುವುದರೊಳಗೆ ವೈದ್ಯರನ್ನು ಸಂಪರ್ಕಿಸಬೇಕು. ಮನೆಯಲ್ಲಿ ತಾವೇ ಯಾವುದೋ ಔಷಧಿ ಪಡೆದು ಕಡಿಮೆಯಾಯಿತು ಎಂದುಕೊಳ್ಳುವ ಬದಲು ತಾಲೂಕು ಆಸ್ಪತ್ರೆಯ ಫೀವರ್ ಕ್ಲಿನಿಕ್ಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.