ಕಾರವಾರ (ಉ.ಕ): ಕೆಲವು ದಿನಗಳ ಹಿಂದೆ ಅಬ್ಬರಿಸಿದ್ದ ಮಳೆ ಸದ್ಯ ತಣ್ಣಗಾಗಿದೆ. ಆದರೆ, ಮಳೆಯ ಆರ್ಭಟಕ್ಕೆ ರಾಜ್ಯ ಹೆದ್ದಾರಿಯಲ್ಲಿ ಉಂಟಾಗಿರುವ ಹಾನಿ ಜನಸಾಮಾನ್ಯರ ಬದುಕಿಗೆ ಕಂಟಕವಾಗಿದೆ.
ನಿತ್ಯ ಉದ್ಯೋಗ, ಕಚೇರಿ, ಪೇಟೆ.. ಹೀಗೆ ಹತ್ತಾರು ಕಾರಣದಿಂದಾಗಿ ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುತ್ತಿದ್ದವರಿಗೆ ಇದೀಗ ಓಡಾಟಕ್ಕೂ ಕಾಲುದಾರಿಯೂ ಇಲ್ಲ. ನಿತ್ಯ ನೂರಾರು ಕಿ.ಮೀ ಸುತ್ತಿ ಬಳಸಿ ಓಡಾಡಬೇಕಾದ ಸ್ಥಿತಿ ಇದೆ.
ಕಾರವಾರದಿಂದ ಬೆಳಗಾವಿ ಸಂಪರ್ಕಿಸುವ ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿಯ ಜೊಯಿಡಾ ತಾಲೂಕಿನ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿತವಾಗಿತ್ತು. ಈ ಪ್ರದೇಶದಲ್ಲಿ ಮಳೆ ನಿಂತರೂ ಗುಡ್ಡ ಕುಸಿತದ ಪರಿಣಾಮ ಸಂಪರ್ಕ ಕಡಿತಗೊಂಡಿದೆ. ಕಾರವಾರ ಸಂಪರ್ಕಿಸುತ್ತಿದ್ದ ಮೂರು ಹಳ್ಳಿಗಳ ಸಂಪರ್ಕ ಕಡಿತವಾಗಿದ್ದು, ನರಕಯಾತನೆ ಅನುಭವಿಸುವಂತಾಗಿದೆ. ಈ ಗುಡ್ಡ ಕುಸಿತ ಎಷ್ಟು ಭೀಕರವಾಗಿದೆ ಎಂದರೆ ಮಣ್ಣು ತೆರವು ಮಾಡುವುದಿರಲಿ, ಮತ್ತೆ ಈ ಮಾರ್ಗ ಬಳಸಲು ಯೋಗ್ಯವಾಗುವುದೇ ಅನುಮಾನ ಎನ್ನುವಂತಾಗಿದೆ.