ಕರ್ನಾಟಕ

karnataka

By

Published : Jun 4, 2023, 8:19 AM IST

ETV Bharat / state

ಪತಿಯ ಆಯಸ್ಸು ವೃದ್ಧಿಗಾಗಿ ಕಾರವಾರದಲ್ಲಿ ವಟ ಸಾವಿತ್ರಿ ವ್ರತಾಚರಣೆ

ಪತಿಯ ಆಯಸ್ಸು ಮತ್ತು ಆರೋಗ್ಯ ವೃದ್ಧಿಗಾಗಿ ಕಾರವಾರದ ಮಹಿಳೆಯರು ವಟ ಸಾವಿತ್ರಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

karavara
ವಟ ಸಾವಿತ್ರಿ ವೃತ ಆಚರಣೆ

ಕಾರವಾರ (ಉತ್ತರ ಕನ್ನಡ):ಭರತಖಂಡದಲ್ಲಿ ಪ್ರಸಿದ್ಧ ಪತಿವ್ರತೆಯರಲ್ಲಿ ಸಾವಿತ್ರಿ ಆದರ್ಶಪ್ರಾಯಳು. ಸತ್ಯವಾನ್​ ಸಾವಿತ್ರಿಯನ್ನು ಸೌಭಾಗ್ಯದ ಪ್ರತೀಕವೆಂದೇ ಪರಿಗಣಿಸಲಾಗುತ್ತದೆ. ಇಂದಿಗೂ ಹೆಚ್ಚಿನ ಮಹಿಳೆಯರು ವಟ ಸಾವಿತ್ರಿ ವ್ರತವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಶನಿವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರು ವಟ ಸಾವಿತ್ರಿ ವ್ರತವನ್ನು ಆಚರಿಸಿದ್ದಾರೆ. ಪತಿಯ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ಅವರು ಪ್ರಾರ್ಥಿಸಿದರು.

ಜೇಷ್ಠ ಹುಣ್ಣಿಮೆಯ ದಿನ ಕಾರವಾರದಲ್ಲಿ ಸ್ತ್ರೀಯರು ವಟ ಸಾವಿತ್ರಿ ವ್ರತವನ್ನು ಆಚರಿಸಿದರು. ಬೆಳಗ್ಗೆಯಿಂದಲೇ ಕಾರವಾರದ ಸುತ್ತಮುತ್ತಲ ಆಲದ ಮರಗಳ ಸಮೀಪ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದರು. ಆಲದ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ತನ್ನ ಗಂಡ, ಮಕ್ಕಳು ಮತ್ತು ಕುಟುಂಬಸ್ಥರ ಆಯುಷ್ಯ ವೃದ್ಧಿಗೊಳಿಸುವಂತೆ ಬೇಡಿಕೊಂಡರು. ಪರಸ್ಪರ ಅರಿಶಿಣ- ಕುಂಕುಮ ಹೂಗಳನ್ನು ವಿನಿಮಯ ಮಾಡಿಕೊಂಡು ಸಂತಾನವೃದ್ಧಿಗಾಗಿ ಪ್ರಾರ್ಥಿಸಿದರು.

ಆಚರಣೆಯ ಹಿಂದಿನ ಪುರಾಣ ಪ್ರಸಿದ್ಧ ನಂಬಿಕೆ: ಪುರಾಣದಲ್ಲಿ ಯಮಧರ್ಮನು ಸತ್ಯವಾನನ ಪ್ರಾಣಹರಣ ಮಾಡಿದ ನಂತರ ಸಾವಿತ್ರಿ ಯಮಧರ್ಮನೊಂದಿಗೆ ಮೂರು ದಿನಗಳ ಕಾಲ ವಟವೃಕ್ಷದ ಕೆಳಗೆ ಕುಳಿತು ಶಾಸ್ತ್ರ ಚರ್ಚೆ ಮಾಡುತ್ತಾಳೆ. ಅದರಿಂದ ಪ್ರಸನ್ನನಾದ ಯಮಧರ್ಮ ಸತ್ಯವಾನನನ್ನು ಪುನಃ ಜೀವಂತಗೊಳಿಸುತ್ತಾನೆ. ಹೀಗಾಗಿ ವಟವೃಕ್ಷಕ್ಕೆ ಸಾವಿತ್ರಿ ಹೆಸರು ಸೇರಿಕೊಂಡಿತು. ಸಾವಿತ್ರಿಯು ತನ್ನ ಪತಿಯ ಆಯುಷ್ಯ ವೃದ್ದಿಸಬೇಕೆಂದು ಹಾರೈಸಿದ ಹಾಗೆಯೇ ಸ್ತ್ರೀಯರು ಈ ದಿನ ತಮ್ಮ ಪತಿಯ ಆಯುಷ್ಯ ವೃದ್ದಿಯಾಗುವ ನಂಬಿಕೆ ಹೊಂದಿದ್ದಾರೆ ಎನ್ನುತ್ತಾರೆ ಭಕ್ತರು.

ಇದನ್ನೂ ಓದಿ:ತುಂಡುಡುಗೆ ಧರಿಸಿ ಬಂದ್ರೆ ನೋ ಎಂಟ್ರಿ.. ದೇವಾಲಯಗಳಲ್ಲಿ ಮಹಿಳೆಯರಿಗೆ ಡ್ರೆಸ್​ ಕೋಡ್​ ಜಾರಿ

ಇನ್ನು ವಟ ಸಾವಿತ್ರಿ ಹುಣ್ಣೆಮೆಯಂದು ಸ್ತ್ರೀಯರು ಉಪವಾಸ ವ್ರತ ಕೈಗೊಳ್ಳುತ್ತಾರೆ. ಪೂಜಾ ಕೈಂಕರ್ಯದೊಂದಿಗೆ ಆಲದ ಮರಕ್ಕೆ ಹತ್ತಿ ನೂಲು ಸುತ್ತುತ್ತಾರೆ. ಆಲದ ಮರದಲ್ಲಿ ಶಿವನ ರೂಪವಿದ್ದು, ವಟವೃಕ್ಷಕ್ಕೆ ದಾರ ಸುತ್ತುವುದರಿಂದ ಜೀವದ ಭಾವಕ್ಕನುಸಾರ ಕಾಂಡದಲ್ಲಿನ ಶಿವತತ್ವಕ್ಕೆ ಸಂಬಂಧಪಟ್ಟ ಲಹರಿಗಳು ಕಾರ್ಯನಿರತವಾಗಿ ಆಕಾರವನ್ನು ಧರಿಸುತ್ತದೆ. ಹೀಗಾಗಿ ವೃಕ್ಷಕ್ಕೆ ಆರತಿ ಬೆಳಗುತ್ತಾರೆ. ಪಂಚಫಲಗಳನ್ನು ಇಟ್ಟು ಆರಾಧಿಸುತ್ತಾರೆ. ತನಗೆ ಹಾಗೂ ತನ್ನ ಪತಿಯ ಆರೋಗ್ಯ ಸಂಪದ್ಭರಿಸಲಿ ಎಂದು ಮಹಿಳೆಯರು ಹಾರೈಸುತ್ತಾರೆ. ಮಕ್ಕಳ ವಿದ್ಯಾಭ್ಯಾಸ ಮತ್ತು ಮುಂದಿನ ಭವಿಷ್ಯಕ್ಕಾಗಿಯೂ ಬೇಡಿಕೊಳ್ಳುತ್ತಾರೆ.

ವಟವೃಕ್ಷದಲ್ಲಿ ಶಿವತತ್ವ ಅಡಗಿರುತ್ತದೆ. ಹೀಗಾಗಿ ವಟವೃಕ್ಷಕ್ಕೆ ಇಂದಿನ ದಿನದಂದು ಹೆಚ್ಚು ಮಹತ್ವ ಇದೆ. ವೃಕ್ಷದ ಪೂಜೆಯಿಂದ ಚೈತನ್ಯ, ಗಂಡನ ಶ್ರೇಯೋಭಿವೃದ್ಧಿ ಹೆಚ್ಚಾಗುತ್ತದೆ. ಆದ್ದರಿಂದ ಸ್ತ್ರೀಯರು ಪ್ರತಿವರ್ಷವೂ ವಟ ಸಾವಿತ್ರಿ ವೃತ ಆಚರಿಸುವ ಮೂಲಕ ಗಂಡನ ಶ್ರೇಯಸ್ಸಿಗಾಗಿ ಪ್ರಾರ್ಥಿಸುತ್ತಾರೆ. ನೆರೆಯ ಮಹಾರಾಷ್ಟ್ರ ಮತ್ತು ಗುಜರಾತ್ ಭಾಗದಲ್ಲಿ ಹೆಚ್ಚಾಗಿ ಕಂಡು ಬರುವ ಆಚರಣೆ ಉತ್ತರಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಮಹಿಳೆಯರು ಆಚರಿಸುತ್ತಿದ್ದಾರೆ. ಅದರಂತೆ ಜೇಷ್ಠ ಹುಣ್ಣಿಮೆಯ ದಿನ ಕಾರವಾರದಲ್ಲಿ ಮಹಿಳೆಯರು ತಮ್ಮ ಗಂಡಂದಿರಿಗಾಗಿ ವಟ ಸಾವಿತ್ರಿ ವೃತವನ್ನು ಆಚರಿಸಿ ಗಮನ ಸೆಳೆದರು.

ಇದನ್ನೂ ಓದಿ:ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಣ್ಣ ಲೋಪವನ್ನೂ ಸಹಿಸಲಾಗದು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ABOUT THE AUTHOR

...view details