ಕರ್ನಾಟಕ

karnataka

ETV Bharat / state

ಬಜೆಟ್​ನಲ್ಲಿ ಕೈ ಬಿಟ್ಟ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ.. ಅಧಿಕಾರ ವಹಿಸಿಕೊಂಡ ಕಾಂಗ್ರೆಸ್ ಸರ್ಕಾರವೇಕೆ ಮೌನ?​

ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇನ್ನೂ ನಿರ್ಮಾಣವಾಗದೇ ಇರುವುದರಿಂದ ಜೊತೆಗೆ ಸರ್ಕಾರದ ಬಜೆಟ್​ನಲ್ಲಿ ಕೈ ಬಿಟ್ಟಿರುವುದುರಿಂದ ಸರ್ಕಾರ ಜನರ ಕೆಂಗಣ್ಣಿಗೆ ಗುರಿಯಾಗಿದೆ.

By

Published : Jul 15, 2023, 1:40 PM IST

Updated : Jul 15, 2023, 5:35 PM IST

ನಾಗರಾಜ ನಾಯಕ, ಬಿಜೆಪಿ ಜಿಲ್ಲಾ ವಕ್ತಾರ, ಉತ್ತರಕನ್ನಡ
ನಾಗರಾಜ ನಾಯಕ, ಬಿಜೆಪಿ ಜಿಲ್ಲಾ ವಕ್ತಾರ, ಉತ್ತರಕನ್ನಡ

ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕುರಿತು ನಾಗರಾಜ ನಾಯಕ ಹಾಗು ಸತೀಶ್ ಸೈಲ್ ಪ್ರತಿಕ್ರಿಯೆ

ಕಾರವಾರ:ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆಗಬೇಕು ಎನ್ನುವುದು ಉತ್ತರಕನ್ನಡ ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ವೀಕ್ಷಣೆ ಮಾಡಿದ್ದು ಬಿಟ್ಟರೆ ಕಾಮಗಾರಿ ಆರಂಭವಾಗಿರಲಿಲ್ಲ. ಅಂದು ವಿರೋಧ ಪಕ್ಷವಾಗಿದ್ದ ವೇಳೆ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಬಜೆಟ್‌ನಲ್ಲಿ ಉತ್ತರಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೈಬಿಟ್ಟಿದೆ. ಸದ್ಯ ಇದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಹೌದು, ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯೊಂದು ನಿರ್ಮಾಣವಾಗಬೇಕು ಎನ್ನುವುದು ಜನರ ಬಹುದಿನಗಳ ಕನಸು. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದ ಪರಿಣಾಮ ಪ್ರತಿನಿತ್ಯ ಚಿಕಿತ್ಸೆಗಾಗಿ ಹೊರಜಿಲ್ಲೆ, ಹೊರರಾಜ್ಯದ ಆಸ್ಪತ್ರೆಗಳಿಗೆ ಓಡಾಡುವ ಪರಿಸ್ಥಿತಿ ಇದೆ. ಹೀಗಾಗಿ ಜಿಲ್ಲೆಯಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಹೋರಾಟವೇ ನಡೆದಿತ್ತು. ಜನರ ಹೋರಾಟಕ್ಕೆ ಮಣಿದ ಅಂದಿನ ಬಿಜೆಪಿ ಸರ್ಕಾರದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಜಿಲ್ಲೆಗೆ ಬಂದು ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದರು.

ಆಸ್ಪತ್ರೆಗೆ ಜಾಗ ನಿಗದಿಯಾದರೂ ಆಸ್ಪತ್ರೆ ನಿರ್ಮಾಣ ಕಾರ್ಯ ಮಾತ್ರ ಆರಂಭವಾಗಲೇ ಇಲ್ಲ. ಅಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಈ ವಿಚಾರವನ್ನು ಚುನಾವಣೆಯಲ್ಲಿ ಬಳಸಿಕೊಂಡಿದ್ದು ತಮ್ಮ ಸರ್ಕಾರ ಆಡಳಿತಕ್ಕೆ ಬಂದ ಕೆಲವೇ ದಿನದಲ್ಲಿ ಶಂಕುಸ್ಥಾಪನೆ ಮಾಡುವುದಾಗಿ ಹೇಳಿತ್ತು. ಆದರೆ ನೂತನ ಸರ್ಕಾರ ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸದೇ ಅನ್ಯಾಯ ಮಾಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗದ ವಿಚಾರವನ್ನು ಕಾಂಗ್ರೆಸ್ ಮುಖಂಡರು ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿದ್ದರು. ಆದರೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಂಡಿಸಿದ ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕೊಕ್ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್​ ನಾಯಕ್​ ಕಿಡಿಕಾರಿದ್ದಾರೆ.

ಶಾಸಕ ಸತೀಶ್ ಸೈಲ್ ತಿರುಗೇಟು:ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರವಾರ ಶಾಸಕ ಸತೀಶ್ ಸೈಲ್, ಸರ್ಕಾರ ಸದ್ಯ ಕಾರವಾರದಲ್ಲಿ ನಿರ್ಮಾಣವಾಗುತ್ತಿರುವ 450 ಬೆಡ್‌ಗಳ ಜಿಲ್ಲಾ ಆಸ್ಪತ್ರೆಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಂಡಿದೆ. ಇದೇ ಆಸ್ಪತ್ರೆಗೆ ಟ್ರಾಮಾ ಸೆಂಟರ್ ನಂತಹ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನೂ ಒದಗಿಸಲಿದೆ. ಇದಕ್ಕೆ ಸರ್ಕಾರ ಸ್ಥಳೀಯ ಜನಪ್ರತಿನಿಧಿಗಳೂ ಸಹ ಬದ್ಧರಾಗಿದ್ದೇವೆ ಎಂದಿದ್ದಾರೆ.

ಒಟ್ಟಾರೆ ಬಜೆಟ್‌ನಲ್ಲಿ ಸರ್ಕಾರ ಉತ್ತರಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಒದಗಿಸದಿರೋದು ಜನರ ಕೆಂಗಣ್ಣಿಗೆ ಗುರಿಯಾಗಿದ್ದು ಮುಂದಿನ ದಿನಗಳಲ್ಲಿ ಜನರು ಮತ್ತೆ ಆಸ್ಪತ್ರೆಗಾಗಿ ಅಭಿಯಾನದ ಹಾದಿಹಿಡಿಯುವ ಲಕ್ಷಣಗಳು ಕಂಡುಬರುತ್ತಿರೋದಂತೂ ಸತ್ಯ.

ಇದನ್ನೂ ಓದಿ:ಅಂಕೋಲಾ ಹಟ್ಟಿಕೇರಿಯಲ್ಲಿ ಟೋಲ್ ಸಂಗ್ರಹ ಸ್ಥಗಿತ​: ವಾಹನ ಸವಾರರಿಗೆ ರಿಲೀಫ್..

Last Updated : Jul 15, 2023, 5:35 PM IST

ABOUT THE AUTHOR

...view details