ಶಿರಸಿ: ರಾಜ್ಯದ ಪೊಲೀಸರಲ್ಲಿಯೂ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಎಚ್ಚೆತ್ತುಕೊಂಡಿದ್ದು, ಠಾಣೆಗಳ ಹೊರಗಡೆ ಸಹಾಯ ಕೇಂದ್ರ (ರಿಸೆಪ್ಷನ್ ಕೌಂಟರ್) ತೆರೆದು ಸಾಮಾಜಿಕ ಅಂತರದ ಮೂಲಕ ಸೇವೆ ಒದಗಿಸಲಾಗುತ್ತಿದೆ. ಇದರ ಜೊತೆಗೆ ಕೆಲ ಸಿಬ್ಬಂದಿಗೆ ಪಿಪಿಇ ಕಿಟ್ ನೀಡುವ ಮೂಲಕ ಕೊರೊನಾ ತಡೆಗೆ ಒತ್ತು ನೀಡಲಾಗಿದೆ.
ಪಕ್ಕದ ಜಿಲ್ಲೆಗಳಾದ ಕಾರ್ಕಳ, ಉಡುಪಿಯಲ್ಲಿ ಕೊರೊನಾ ಪ್ರಕರಣದಿಂದ ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಅಂತಹ ಸಮಸ್ಯೆ ಜಿಲ್ಲೆಯಲ್ಲಿ ಉದ್ಭವಿಸಬಾರದು ಎಂದು ಮುಖ್ಯ ಠಾಣೆಗಳ ಹೊರಗಡೆ ಸಹಾಯ ಕೇಂದ್ರ ತೆರೆದು ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ.
ಪೊಲೀಸರ ಸುರಕ್ಷತೆಗೆ ರಿಸೆಪ್ಷನ್ ಕೌಂಟರ್ ಕೋವಿಡ್ ಶಂಕಿತರು ನೇರವಾಗಿ ಠಾಣೆಗಳಿಗೆ ಬಾರದಂತೆ ಹೊರಗಡೆ ಪೆಂಡಾಲ್ ಹಾಕಿ, ಮೂರು ಸಿಬ್ಬಂದಿಯನ್ನು ನೇಮಕ ಮಾಡಿ ಸಹಾಯ ಕೇಂದ್ರ ತೆರೆಯಲಾಗಿದೆ. ಅಲ್ಲದೇ ಪಿಪಿಇ ಕಿಟ್ಗಳನ್ನು ಸಹ ನೀಡಲಾಗಿದೆ. ಇದರಿಂದ ಪೊಲೀಸರ ಸುರಕ್ಷತೆ ಹೆಚ್ಚಾಗಲಿದೆ.
ಶಿರಸಿ ತಾಲೂಕಿನಲ್ಲಿ ನಾಲ್ಕು ಉಪ ಠಾಣೆ ಮತ್ತು ಉಪ ವಿಭಾಗದಲ್ಲಿ 7 ಠಾಣೆಗಳಿವೆ. ಜಿಲ್ಲೆಯಲ್ಲಿ 24ಕ್ಕೂ ಅಧಿಕ ಪೊಲೀಸ್ ಠಾಣೆಗಳಿದ್ದು, ಎಲ್ಲಾ ಕಡೆ ಸಹಾಯ ಕೆಂದ್ರ ತೆರೆಯುವ ಕ್ರಮ ಕೈಗೊಳ್ಳಲಾಗಿದೆ. ಇದೊಂದು ಮಾದರಿ ನಡೆಯಾಗಿದ್ದು, ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ.
ಒಟ್ಟಾರೆಯಾಗಿ ಪೊಲೀಸ್ ಸಿಬ್ಬಂದಿಯ ಸುರಕ್ಷತೆಗೆ ಇಲಾಖೆ ಉತ್ತಮ ಕ್ರಮ ಕೈಗೊಂಡಿದ್ದು, ಸಾರ್ವಜನಿಕರಿಂದಲೂ ಶ್ಲಾಘನೆ ವ್ಯಕ್ತವಾಗಿದೆ. ಸಮಾಜದ ಸುರಕ್ಷತೆಗೆ ತಮ್ಮ ಜೀವ ಮುಡಿಪಾಗಿಟ್ಟು ಕೆಲಸ ಮಾಡುವ ಕೊರೊನಾ ವಾರಿಯರ್ಸ್ ಸುರಕ್ಷತೆ ಮುಖ್ಯ ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ.