ಕಾರವಾರ:ಲಾಕ್ಡೌನ್ನಿಂದಾಗಿ ಬೇಸತ್ತಿದ್ದ ಪ್ರವಾಸಿಗರು ಇದೀಗ ಜಲಪಾತಗಳ ತವರು ಉತ್ತರ ಕನ್ನಡದತ್ತ ಮುಖ ಮಾಡುತ್ತಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಎಲ್ಲೆಂದರಲ್ಲಿ ಧುಮ್ಮಿಕ್ಕುವ ಜಲಪಾತಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.
ಅದರಲ್ಲಿಯೂ ಅಂತಾರಾಷ್ಟ್ರೀಯ ಬ್ಲೂಪ್ಯಾಗ್ ಮಾನ್ಯತೆ ಪಡೆದ ಇಕೋ ಬೀಚ್ ಅಣತಿ ದೂರದಲ್ಲಿರುವ ಹೊನ್ನಾವರದ ಅಪ್ಸರಕೊಂಡ ಜಲಪಾತಕ್ಕೆ ಕೆಲ ದಿನಗಳಿಂದ ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಧುಮ್ಮಿಕ್ಕಿ ಹರಿಯುತ್ತಿರುವ ಅಪ್ಸರಕೊಂಡ ಜಲಪಾತಕ್ಕೆ ಪ್ರವಾಸಿಗರ ದಂಡು ಹೌದು..ಅತಿಹೆಚ್ಚು ಅರಣ್ಯ ಪ್ರದೇಶದಿಂದಲೇ ಕೂಡಿರುವ ಜಿಲ್ಲೆಯಲ್ಲಿ ಕಾನನದೊಳಗಿಂದ ತೊರೆಯಾಗಿ ಹರಿದುಬಂದು ಜಲಪಾತವಾಗಿ ಮೈದಳೆದು ಧುಮ್ಮಿಕ್ಕುವ ಈ ಜಲಧಾರೆಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧಡೆಯಿಂದಲ್ಲದೇ ನೆರೆ ರಾಜ್ಯ ಗೋವಾ, ಮಹಾರಾಷ್ಟ್ರಗಳಿಂದಲೂ ಪ್ರವಾಸಿಗರು ಭೇಟಿ ನೀಡುತ್ತಾರೆ.
ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ
ಕೊರೊನಾದಿಂದಾಗಿ ರಾಜ್ಯದಲ್ಲಿ ಲಾಕ್ಡೌನ್ ಘೋಷಿಸಿದ್ದ ಕಾರಣ ಪ್ರವಾಸಿ ತಾಣಗಳಿಗೆ ನಿರ್ಬಂಧವಿತ್ತು. ಇದೀಗ ಲಾಕ್ಡೌನ್ ತೆರವಾಗುತ್ತಿದ್ದಂತೆ ಪ್ರವಾಸಿಗರ ಸಂಖ್ಯೆಯು ಹೆಚ್ಚಳವಾಗುತ್ತಿದೆ. ಅಪ್ಸರಕೊಂಡ ಜಲಪಾತ ಅಷ್ಟೊಂದು ಅಪಾಯಕಾರಿಯಾಗಿರದೇ, ನೀರು ಬೀಳುವ ಸನಿಹಕ್ಕೆ ಹೋಗಲು ಅವಕಾಶವಿರುವುದರಿಂದ ಪ್ರವಾಸಿಗರು ಅತಿ ಹೆಚ್ಚಿನ ಸಮಯ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ.
ಕೇವಲ ಜಲಪಾತವಷ್ಟಕ್ಕೆ ಈ ಸ್ಥಳ ಸೀಮಿತವಾಗದೇ ದೇವಾಲಯ, ಪ್ರಾಕೃತಿಕ ಮೆರಗು ಹೆಚ್ಚಿಸಲು ವಿವಿಧ ಭಂಗಿಯ ಕಲಾಕೃತಿಗಳು, ಬೆಟ್ಟದ ಮೇಲೆ ನಿಂತು ಸಮುದ್ರದ ವೈಭವ ಮತ್ತು ಸುಂದರ ಸೂರ್ಯಾಸ್ತವನ್ನು ನೋಡಬಹುದಾಗಿದೆ.
ಜಲಪಾತದ ಸನಿಹದಲ್ಲೆ ಇರುವ ಅಪ್ಸರಕೊಂಡ ಸಮುದ್ರ ಕೂಡ ರಮಣೀಯವಾಗಿದ್ದು, ಸ್ವಾಭಾವಿಕವಾಗಿ ನಿರ್ಮಾಣಗೊಂಡಿರುವ ಪಾಂಡವರ ಗುಹೆ, ಪಾರ್ಕ್ ಕೂಡ ಇಲ್ಲಿದೆ. ಹೀಗಾಗಿ, ಈ ಪ್ರದೇಶ ವಾಯುವಿಹಾರಕ್ಕೆ, ಪಿಕ್ನಿಕ್ಗೆ ಹೇಳಿ ಮಾಡಿಸಿದ ತಾಣವಾಗಿದೆ.