ಕರ್ನಾಟಕ

karnataka

ETV Bharat / state

ನಮ್ಮ ಶಾಸಕರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಎಚ್ ಕೆ ಪಾಟೀಲ್

ಮುಖ್ಯಮಂತ್ರಿ ಯಾರಾಗಬೇಕು, ಸಚಿವ ಸ್ಥಾನ ಯಾರಿಗೆ ನೀಡಬೇಕು ಎಂಬುದನ್ನು ಹೈಕಮಾಂಡ್​ ನಿರ್ಧರಿಸುತ್ತದೆ ಎಂದು ಸಚಿವ ಹೆಚ್​ ಕೆ ಪಾಟೀಲ್ ತಿಳಿಸಿದ್ದಾರೆ.

By ETV Bharat Karnataka Team

Published : Oct 29, 2023, 3:36 PM IST

ಸಚಿವ ಎಚ್ ಕೆ ಪಾಟೀಲ್
ಸಚಿವ ಎಚ್ ಕೆ ಪಾಟೀಲ್

ಸಚಿವ ಎಚ್ ಕೆ ಪಾಟೀಲ್

ಕಾರವಾರ (ಉತ್ತರ ಕನ್ನಡ) : ಆಫರ್ ಬಂದಿದೆ ಎನ್ನುವುದನ್ನು ನಮ್ಮ ಶಾಸಕರು ಹೇಳಿಕೊಂಡು ದಿಟ್ಟತನ ತೋರಿದ್ದಾರೆ. ಆದರೆ ಯಾವುದೇ ಶಾಸಕರು ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಹೆಚ್ ಕೆ‌ ಪಾಟೀಲ್ ಅವರು ಹೇಳಿದ್ದಾರೆ.

ಅಂಕೋಲಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ಅಶಕ್ತಿಗೊಳಿಸುವ ಬಿಜೆಪಿ ಪ್ರಯತ್ನವನ್ನು ಬಹಿರಂಗಗೊಳಿಸಿದ್ದಾರೆ. ಇದು ಕಾಂಗ್ರೆಸ್ ಶಾಸಕರು ಎಷ್ಟು ಗಟ್ಟಿಯಾಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದರು.

ಇನ್ನು ಮುಖ್ಯಮಂತ್ರಿ ಯಾರಾಗಬೇಕು, ಸಚಿವ ಸ್ಥಾನ ಯಾರಿಗೆ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಇದನ್ನು ಮಾಧ್ಯಮದ ಎದುರು ಚರ್ಚೆ ಮಾಡುವುದು ಸೂಕ್ತ ಅಲ್ಲ. ಯಾರೇ ದೊಡ್ಡವರಿದ್ದರೂ ಇದನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ಗೃಹಸಚಿವ ಡಾ ಜಿ ಪರಮೇಶ್ವರ್​ ಮನೆಯಲ್ಲಿ ಭೋಜನಕೂಟ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಔತಣಕೂಟ ಆಯೋಜಿಸಿದ್ದಕ್ಕೆ ರಾಜಕೀಯ ಬಣ್ಣ ಬಳಿಯುವ ಅವಶ್ಯಕತೆ ಇಲ್ಲ. ಇದನ್ನೇ ದೊಡ್ಡದಾಗಿ ಮಾಡುತ್ತಿರುವ ಬಿಜೆಪಿಗೆ ಬೇರೆ ಕೆಲಸ ಏನಿದೆ?. ನಮ್ಮ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಗೆ ನೆಲವೇ ಕುಸಿದಂತಾಗಿದೆ. ಆ ಭಯ, ಅಂಜಿಕೆಯಿಂದ ಈ ರೀತಿ ಸುದ್ದಿ ಹಬ್ಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಹೆಚ್ ಕೆ ಪಾಟೀಲ್, ಈ ವರ್ಷ ಅಭಿವೃದ್ಧಿ ಕಡಿಮೆಯಾದರೂ ಬರುವ ಬಜೆಟ್‌ನಲ್ಲಿ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ. ಗುತ್ತಿಗೆದಾರರ ಬಿಲ್ ಬಹಳಷ್ಟು ಬಾಕಿ ಇಟ್ಟು ಹೋಗಿದ್ದಾರೆ. ಹಂತ ಹಂತವಾಗಿ ತೀರಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದರು.

ಪ್ರವಾಸೋದ್ಯಮದಲ್ಲಿ 300 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ: ರಾಜ್ಯ ಪ್ರವಾಸೋದ್ಯಮ ಇಲಾಖೆಯ ಉನ್ನತಾಧಿಕಾರ ಸಮಿತಿಯು ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 300 ಕೋಟಿ ರೂ. ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು (ಜುಲೈ 28-2023) ತಿಳಿಸಿದ್ದರು.

ಅವರು ಶುಕ್ರವಾರ ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಆರಂಭವಾದ ಮೂರು ದಿನಗಳ ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಮಾರ್ಟ್ ಪ್ರವಾಸೋದ್ಯಮ ಮೇಳ ಉದ್ಘಾಟಿಸಿ ಅವರು ಮಾತನಾಡಿದ್ದರು. ಖಾಸಗಿ ಹೂಡಿಕೆಯಿಂದ ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಇನ್ನಷ್ಟು ಅಭಿವೃದ್ಧಿ ಹೊಂದಲಿದ್ದು, ಕೆಳವರ್ಗದ ಜನರೂ ಇದರ ಪ್ರಯೋಜನ ಪಡೆಯಲಿದ್ದಾರೆ. ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದ್ದು, ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಕಲ್ಪಿಸಿರುವುದರಿಂದ ರಾಜ್ಯದಲ್ಲಿ ಪ್ರವಾಸೋದ್ಯಮವು ಅಭಿವೃದ್ಧಿಗೊಳ್ಳುತ್ತಿದೆ ಎಂದು ತಿಳಿಸಿದ್ದರು.

ಭಾರತದ ಪ್ರವಾಸಕ್ಕೆ ವಿದೇಶಿಗರ ಸಂಖ್ಯೆ ಹಚ್ಚಳ: ಸ್ಫಿಯರ್ ಟ್ರಾವೆಲ್ ಮೀಡಿಯಾ ನಿರ್ದೇಶಕ ರೋಹಿತ್ ಹಂಗಲ್ ಮಾತನಾಡಿ, ಪ್ರಸ್ತುತ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದ್ದು, ವಿದೇಶಗಳಿಂದ ಭಾರತಕ್ಕೆ ಭೇಟಿ ನೀಡುವವರ ಸಂಖ್ಯೆ ಕ್ರಮೇಣವಾಗಿ ಹೆಚ್ಚುತ್ತಿದೆ. 'ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಮಾರ್ಟ್' ದೇಶಿಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲತುಂಬುವ ಕಾರ್ಯಕ್ರಮವಾಗಿದೆ ಎಂದಿದ್ದರು.

ಇದನ್ನೂ ಓದಿ:ಪ್ರವಾಸೋದ್ಯಮದಲ್ಲಿ 300 ಕೋಟಿ ರೂ ಬಂಡವಾಳ ಹೂಡಿಕೆಗೆ ಅನುಮೋದನೆ: ಸಚಿವ ಎಚ್ ಕೆ ಪಾಟೀಲ್

ABOUT THE AUTHOR

...view details