ಕರ್ನಾಟಕ

karnataka

ಗೋವಾದಲ್ಲಿದ್ದ ಕಾರ್ಮಿಕರಿಗೆ ತವರು ಸೇರುವ ಭಾಗ್ಯ... ಆದರೆ ಕ್ವಾರಂಟೈನ್ ಮಾತ್ರ  ಕಡ್ಡಾಯ!

By

Published : May 6, 2020, 6:37 PM IST

ಲಾಕ್​ಡೌನ್​ ನಿಂದಾಗಿ ಪಕ್ಕದ ರಾಜ್ಯ ಗೋವಾದಲ್ಲಿ ಸಿಲುಕಿದ್ದ, ಉತ್ತರ ಕನ್ನಡ ಸೇರಿದಂತೆ ಇತರ ಜಿಲ್ಲೆಯ ಕಾರ್ಮಿಕರು ಇದೀಗ ಮರಳಿ ಗೂಡು ಸೇರಿದ್ದಾರೆ. ಇನ್ನೊಂದೆಡೆ, ಉತ್ತರ ಕನ್ನಡ ಜಿಲ್ಲಾಡಳಿತ ಗೋವಾದಿಂದ ಬಂದವರ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್​ ಮಾಡುತ್ತಿದೆ.

workers
ಕಾರ್ಮಿಕರು

ಕಾರವಾರ: ಕೊರೊನಾ ಲಾಕ್​​​ಡೌನ್​​​ ನಿಂದಾಗಿ ಪಕ್ಕದ ಗೋವಾದಲ್ಲಿ ಸಿಲುಕಿಕೊಂಡಿರುವ ಉತ್ತರ ಕನ್ನಡ ಸೇರಿದಂತೆ ಇತರ ಜಿಲ್ಲೆಯ ಕಾರ್ಮಿಕರಿಗೆ ಕೊನೆಗೂ ತವರು ಸೇರುವ ಭಾಗ್ಯ ದೊರೆತಿದೆ. ಸರ್ಕಾರದ ಆದೇಶದಂತೆ ಉತ್ತರಕನ್ನಡ ಜಿಲ್ಲಾಡಳಿತ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಂಡಿದ್ದು, ನಿತ್ಯ ಕೆಎಸ್ಆರ್ಟಿಸಿ ಬಸ್ ಮೂಲಕ ಕಳುಹಿಸಲಾಗುತ್ತಿದೆ.

ಹೌದು, ಕಳೆದ 43 ದಿನಗಳಿಂದ ಲಾಕ್​​​​​​​ಡೌನ್ ನಲ್ಲಿ ಕೆಲಸ ಕಾರ್ಯವಿಲ್ಲದೇ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಸರ್ಕಾರ ಅವರ ಜಿಲ್ಲೆಗಳಿಗೆ ಕಳುಹಿಸಿತ್ತು.‌ ಇದೀಗ ಪಕ್ಕದ ಗೋವಾ ರಾಜ್ಯದಲ್ಲಿದ್ದ ಕಾರ್ಮಿಕರನ್ನು ಆಯಾ ಜಿಲ್ಲೆಗಳಿಗೆ ಕರೆತರಲು ತಿರ್ಮಾನಿಸಿದ್ದು, ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಿದವರನ್ನು ಕಾರವಾರದ ಮಾಜಾಳಿ ಗಡಿಭಾಗದ ಮೂಲಕ ಆರೋಗ್ಯ ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ.

ಗೋವಾದಲ್ಲಿದ್ದ ಉತ್ತರ ಕನ್ನಡ ಮಂದಿ ರಾಜ್ಯಕ್ಕೆ ವಾಪಸ್​

ಗೋವಾದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯವರನ್ನು ತಪಾಸಣೆ ನಡೆಸಿ ಕೆಎಸ್​ಆರ್​ಟಿಸಿ ಬಸ್ ಮೂಲಕ ಮನೆ ಇಲ್ಲವೇ ಸರ್ಕಾರ ವ್ಯವಸ್ಥೆ ಮಾಡಿದ ಸ್ಥಳಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ, ಹೊರ ಜಿಲ್ಲೆಗಳಿಗೆ ತೆರಳುವವರು ಆ ಜಿಲ್ಲೆಯಿಂದ ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯುವ ಅವಶ್ಯಕತೆ ಇದ್ದು, ಇದು ಇದ್ದಲ್ಲಿ ಮಾತ್ರ ಗೋವಾದಿಂದ ಜಿಲ್ಲೆಯ ಗಡಿಭಾಗದೊಳಕ್ಕೆ ಕರೆದುಕೊಂಡು ತಪಾಸಣೆ ನಡೆಸಿ ಬಳಿಕ ಕೆಎಸ್​ಆರ್​ಟಿಸಿ ಮೂಲಕ ಕಳುಹಿಸಲಾಗುವುದು. ಹೊರ ರಾಜ್ಯಗಳಿಗೆ ತೆರಳುವವರು ಕೂಡ ರಿಸಿವಿಂಗ್ ಪರ್ಮಿಸನ್ ಇದ್ರೆ ಮಾತ್ರ ಜಿಲ್ಲೆ ಮೂಲಕ ಅವರ ರಾಜ್ಯಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ. ಅದು ಕೂಡ ಅವರೇ ಖಾಸಗಿ ವಾಹನದ ವ್ಯವಸ್ಥೆ ಮಾಡಿಕೊಳ್ಳಬೇಕು.

ಇನ್ನು ಯಾವುದೇ ರೋಗದ ಗುಣ ಲಕ್ಷಣ ಇಲ್ಲದವರನ್ನು ಹೋಂ ಕ್ವಾರಂಟೈನ್ ಸ್ಟಾಂಪ್ ಹಾಕಿ ನಗರ ಪ್ರದೇಶದಲ್ಲಿದ್ದವರಿಗೆ ಮನೆಗಳಲಿಯೇ ಇರಲು ಗ್ರಾಮೀಣ ಪ್ರದೇಶದಲ್ಲಿದ್ದವರಿಗೆ ಸರ್ಕಾರ ನಿಗದಿ ಪಡಿಸಿದ ಜಾಗದಲ್ಲಿಯೇ ಕ್ವಾರಂಟೈನ್ ಮಾಡುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ರೋಶನ್ ತಿಳಿಸಿದ್ದಾರೆ.

ಇನ್ನು ಲಾಕ್ ಡೌನ್ ಘೋಷಣೆ ಪೂರ್ವದಲ್ಲಿಯೇ ಗೋವಾ ರಾಜ್ಯಕ್ಕೆ ಕೆಲಸ ಸೇರಿದಂತೆ ಇನ್ನಿತರ ಕಾರಣಗಳಿಗೆ ತೆರಳಿದವರು ಇಂದು ಪುನಃ ಊರು ಸೇರಲು ಮುಂದಾಗಿದ್ದಾರೆ. ಕೆಲಸ ಕಾರ್ಯವಿಲ್ಲದೇ ಸಾಕಷ್ಟು ತೊಂದರೆಯಾಗುತ್ತಿತ್ತು. ಮನೆಯಲ್ಲಿದ್ದವರು ಹೇಗಿದ್ದಾರೋ ಎಂಬ ಆತಂಕ ಇತ್ತು. ಇದೀಗ ಸರ್ಕಾರ ಅವಕಾಶ ಕಲ್ಪಿಸಿರುವುದು ನೆಮ್ಮದಿ ತಂದಿದೆ ಎಂದು ಕಾರ್ಮಿಕ ಚೈತನ್ಯ ನಾಯ್ಕ್​ ಹೇಳಿದ್ದಾರೆ.

ಒಟ್ಟಾರೆ 42 ದಿನದ ಸುದೀರ್ಘ ದಿನಗಳ ಬಳಿಕ ಲಾಕ್ ಡೌನ್ ನಲ್ಲಿ ಸಿಲುಕಿದ ಕಾರ್ಮಿಕರು ಸೇರಿದಂತೆ ತೊಂದರೆಗೊಳಗಾದವರು ತಮ್ಮ ತಮ್ಮ ತವರು ಸೇರುತ್ತಿದ್ದಾರೆ. ಜವಾಬ್ದಾರಿಯುತವಾಗಿ ಅವರನ್ನೆಲ್ಲ ಕಳುಹಿಸುವ ಕಾರ್ಯ ಉತ್ತರಕನ್ನಡ ಜಿಲ್ಲಾಡಳಿತ ಮಾಡುತ್ತಿದ್ದು ಬಂದವರಿಗೆಲ್ಲ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.

ABOUT THE AUTHOR

...view details