ಕರ್ನಾಟಕ

karnataka

ETV Bharat / state

ನಿರ್ಲಕ್ಷ್ಯಕ್ಕೆ ಬಲಿಯಾದ ರಾಜ್ಯದ ಮೊದಲ ಸಾಹಸ ಕ್ರೀಡಾ ತರಬೇತಿ ಕೇಂದ್ರ - undefined

ಯುವಕ ಯುವತಿಯರಿಗೆ ಸಾಹಸ ಚಟುವಟಿಕೆಗಳಿಗೆ, ಜಲ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಕೇಂದ್ರವನ್ನು 1991ರಲ್ಲಿ ಪ್ರಾರಂಭಿಸಲಾಗಿತ್ತು.

ನಿರ್ಲಕ್ಷ್ಯಕ್ಕೆ ಒಳಗಾದ ಸಾಹಸ ಕ್ರೀಡಾ ತರಬೇತಿ ಕೇಂದ್ರ

By

Published : Jul 20, 2019, 12:46 PM IST

ಕಾರವಾರ:ರಾಜ್ಯದಲ್ಲಿಯೇ ಮೊದಲು ಆರಂಭಿಸಿದ್ದ ಸಾಹಸ ಕ್ರೀಡಾ ತರಬೇತಿ ಕೇಂದ್ರ ಈಗ ನಿರ್ಲಕ್ಷ್ಯಕ್ಕೆ ಬಲಿಯಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕ್ರೀಡಾ ಇಲಾಖೆ ತಳೆದ ನಿರ್ಲಕ್ಷ್ಯದಿಂದಾಗಿ ಸಾಹಸಿ ಕೇಂದ್ರದ ಕಟ್ಟಡ ಅನ್ಯ ಕಾರ್ಯಕ್ಕೆ ನೀಡಿದ್ದು, ಉತ್ಸಾಹಿ ಯುವ ಸಾಹಸ ಪ್ರಿಯರಿಗೆ ನಿರಾಸೆ ಮೂಡಿದೆ.

ನಿರ್ಲಕ್ಷ್ಯಕ್ಕೆ ಒಳಗಾದ ಸಾಹಸ ಕ್ರೀಡಾ ತರಬೇತಿ ಕೇಂದ್ರ

ಯುವಕ ಯುವತಿಯರಿಗೆ ಸಾಹಸ ಚಟುವಟಿಕೆಗಳಿಗೆ, ಜಲ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಕೇಂದ್ರವನ್ನು 1991ರಲ್ಲಿ ಪ್ರಾರಂಭಿಸಲಾಗಿತ್ತು. ಆಸಕ್ತ ಯುವಕ ಯುವತಿಯರಿಗೆ ಉತ್ತಮ ತರಬೇತಿ ನೀಡಲಾಗುತ್ತಿತ್ತು.

ಆರಂಭದಲ್ಲಿ ಉತ್ತಮವಾಗಿ ನಡೆಯುತ್ತಿದ್ದ ಕೇಂದ್ರದಿಂದ ಸಾವಿರಾರು ವಿದ್ಯಾರ್ಥಿಗಳು ತರಬೇತಿ ಕೂಡ ಪಡೆದಿದ್ದಾರೆ. ಅಲ್ಲದೆ ಕಳೆದ ಮೂರು ವರ್ಷದ ಹಿಂದೆ ಇಲ್ಲಿನ ಕಾಳಿ ಸೇತುವೆ ಬಳಿಯ ದಂಡೆಯ ಮೇಲೆ ಕ್ರೀಡಾ ಇಲಾಖೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವನ್ನು ಈ ಸಾಹಸ ಅಕಾಡೆಮಿಗಾಗಿ ನಿರ್ಮಿಸಲಾಗಿದೆ.

ಆದರೆ ಕಟ್ಟಡ ನಿರ್ಮಾಣ ವೇಳೆಗೆ ತರಬೇತಿ ನೀಡುವುದನ್ನೇ ಬಂದ್ ಮಾಡಲಾಗಿದ್ದು, ಇದೀಗ ಆ ಕಟ್ಟಡವನ್ನು ಜಿಲ್ಲಾಡಳಿತವು ಜಂಗಲ್ ಲಾಡ್ಜ್​ನವರಿಗೆ ಹಸ್ತಾಂತರಿಸಿದೆ. ಇದರಿಂದ ಸಾಹಸಿ ಚಟುವಟಿಕೆಗಳಲ್ಲಿ ಉತ್ಸಾಹವಿದ್ದವರಿಗೆ ತರಬೇತಿಯೆ ಸಿಗದಂತಾಗಿದ್ದು, ಈ ಬಗ್ಗೆ ಯಾರು ಗಮನಹರಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯರಾದ ಮಾಧವ ನಾಯ್ಕ.

ಈ ತರಬೇತಿ ಕೇಂದ್ರದಲ್ಲಿ ಕೇವಲ ತರಬೇತಿ ನೀಡುವುದು ಮಾತ್ರವಲ್ಲದೆ ಬೇಸಿಗೆ ಶಿಬಿರಗಳನ್ನು ಸಹ ಆಯೋಜನೆ ಮಾಡಲಾಗುತ್ತಿ ತ್ತು. ಈ ವೇಳೆ ಕಾಳಿ ನದಿಯಲ್ಲಿ ರ‍್ಯಾಪ್ಟಿಂಗ್, ಸ್ವಿಮ್ಮಿಂಗ್, ಚಾರಣ, ಮರಳಿನ ಕಲಾಕೃತಿ ತಯಾರಿಕೆ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಆದರೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅಕಾಡೆಮಿಯೇ ಬಂದ್​ ಆಗಿದೆ.

ಅಕಾಡೆಮಿಯಲ್ಲಿ ಜಲಸಾಹಸಿ ಚಟುವಟಿಕೆ ನಿಯಮಾನುಸಾರ ನಡೆಯದ ಕಾರಣ ಜಂಗಲ್ ರೆಸಾರ್ಟ್ ನವರಿಗೆ ಸ್ಕೂಬಾ ಡೈವಿಂಗ್ ತರಬೇತಿ ನೀಡಲಾಗಿದೆ. ಸದ್ಯ ಲೀಸ್​ಗೆ ಕಟ್ಟಡ ನೀಡಲಾಗಿದ್ದು, ಸಾಹಸಿ ಚಟುವಟಿಕೆ ಆರಂಭಿಸಲು ಇಲಾಖೆ ಮುಂದಾದಲ್ಲಿ ಅವಧಿ ಮುಗಿದ ಬಳಿಕ ಕಟ್ಟಡವನ್ನು ಕ್ರೀಡಾ ಇಲಾಖೆಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಹೇಳಿದ್ದಾರೆ.

ಇತ್ತೀಚೆಗೆ ಕಾರವಾರಕ್ಕೆ ಭೇಟಿ ನೀಡಿದ್ದ ಯುವಜನ ಮತ್ತು ಕ್ರೀಡಾ ಇಲಾಖೆಯ ಕಮಿಷನರ್ ಅವರಿಗೆ ಸ್ಥಳೀಯರು ಮನವಿ ನೀಡಿ ಈ ಕೇಂದ್ರವನ್ನು ಆರಂಭವಾಗುವಂತೆ ಮಾಡಲು ಒತ್ತಾಯಿಸಿದ್ದು, ಅದರಂತೆ ಪರಿಶೀಲನೆ ಸಹ ನಡೆಸಿದ್ದಾರೆ.

ಕರಾವಳಿ ಭಾಗದಲ್ಲಿ ಸಾಹಸಿ ಹಾಗೂ ಜಲಸಾಹಸಿ ಚಟುವಟಿಕೆಗಳಿಗೆ ತರಬೇತಿ ನೀಡುವುದರಿಂದ ಉದ್ಯೋಗ ಸೃಷ್ಟಿಯಾಗುವುದಲ್ಲದೆ ಪ್ರಕೃತಿ ವೈಪರಿತ್ಯಗಳ ಸಮಯದಲ್ಲಿ ನೆರವಾಗಲು ಸಹಕಾರಿಯಾಗುತ್ತದೆ. ಆದ್ದರಿಂದ ಇಂತಹ ತರಬೇತಿ ಕೇಂದ್ರಗಳನ್ನು ಇಲ್ಲಿ ಆರಂಭಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ಒಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಕ್ರೀಡಾ ಇಲಾಖೆ ನಿರ್ಲಕ್ಷ್ಯದಿಂದಾಗಿ ರಾಜ್ಯದಲ್ಲಿಯೇ ಮೊದಲ ಭಾರಿ ಆರಂಭಿಸಿದ್ದ ಸಾಹಸ ಕ್ರೀಡಾ ತರಬೇತಿ ಕೇಂದ್ರ ಬಂದ್ ಆಗಿರುವುದು ದುರದೃಷ್ಟಕರ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಇಲಾಖೆ ಮುತುವರ್ಜಿ ವಹಿಸಿ ಮತ್ತೆ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕಿದೆ.

For All Latest Updates

TAGGED:

ABOUT THE AUTHOR

...view details