ಕರ್ನಾಟಕ

karnataka

By

Published : Aug 13, 2023, 2:32 PM IST

ETV Bharat / state

ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಟಾರ್ಪಲ್ ಹೊದಿಸಿದ ಪ್ರಾಚ್ಯವಸ್ತು ಇಲಾಖೆ: ಅಧಿಕಾರಿಗಳು ಹೇಳಿದ್ದು ಹೀಗೆ..

Madhukeshwara temple: ಸುಂದರ ಶಿಲ್ಪ ಕೆತ್ತನೆಗೆ ಹೆಸರಾಗಿದ್ದ ಬನವಾಸಿಯ ಮಧುಕೇಶ್ವರ ದೇವಾಲಯ ಮಳೆಗಾಲದಲ್ಲಿ ಸೋರುವ ಕಾರಣಕ್ಕೆ ಟಾರ್ಪಲ್ ಹೊದಿಸಲಾಗಿದೆ.

Madhukeshwara temple in Sirsi
ಬನವಾಸಿಯ ಮಧುಕೇಶ್ವರ ದೇವಾಲಯ

ಧುಕೇಶ್ವರ ದೇವಾಲಯಕ್ಕೆ ಟಾರ್ಪಲ್ ಹೊದಿಸಿದ ಪ್ರಾಚ್ಯವಸ್ತು ಇಲಾಖೆ

ಶಿರಸಿ (ಉತ್ತರ ಕನ್ನಡ): ಕನ್ನಡದ ಮೊದಲ ರಾಜಧಾನಿ, ಆದಿಕವಿ ಪಂಪನ ನೆಲ, ಕದಂಬರ ಆರಾಧ್ಯ ದೈವ ಮಧುಕೇಶ್ವರ ನೆಲೆನಿಂತ ಇತಿಹಾಸ ಪ್ರಸಿದ್ಧ ಕ್ಷೇತ್ರ ಬನವಾಸಿ. ನಿತ್ಯ ಸಾವಿರಾರು ಪ್ರವಾಸಿಗರ ಮನಸೂರೆಗೊಳ್ಳುವ ಬನವಾಸಿಯ ಜೇನು ಬಣ್ಣದ ಶಿವಲಿಂಗವಾಗಿ ನೆಲೆನಿಂತ ಮಧುಕೇಶ್ವರನಿಗೆ ಉಳಿದ ಕಾಲದಲ್ಲಿ ಅರ್ಚಕರಿಂದ ಜಲಾಭಿಷೇಕ ನಡೆಯುತ್ತದೆ. ಆದರೆ ಪುರಾತತ್ವ ಇಲಾಖೆಯಿಂದ ಮಳೆಗಾಲದಲ್ಲಿ ವರುಣ ದೇವನಿಂದಲೇ ಜಲಾಭಿಷೇಕ ನಡೆಯುವ ಸ್ಥಿತಿ ಬಂದಿತ್ತು. ಈಗ ಅದನ್ನು ಸರಿಪಡಿಸಲು ಹೋಗಿ ಮಧುಕೇಶ್ವರನಿಗೆ ಟಾರ್ಪಲ್ ಹೊದಿಸುವ ಮೂಲಕ ಕನ್ನಡಿಗರ ಅಸ್ಮಿತೆಗೆ ಪ್ರಾಚ್ಯವಸ್ತು ಇಲಾಖೆ ಧಕ್ಕೆ ತಂದಿದೆ.

ಸಾಮಾನ್ಯವಾಗಿ ದೇವಾಲಯಗಳೆಂದರೆ ಭಕ್ತರಿಗೆ ಶಾಂತಿ, ಮನಸ್ಸಿಗೆ ಮುದ ನೀಡುವ ತಾಣ. ದೇವಾಲಯಗಳು ಹಿಂದೂ ಧಾರ್ಮಿಕತೆಯಲ್ಲಿ ವಿಶೇಷ ಸ್ಥಾನ ಪಡೆದಿವೆ. ದೇವಾಲಯಗಳಲ್ಲಿ ಸೋರಿಕೆ ಕಂಡು ಬಂದರೆ ಕೂಡಲೇ ಸಂಬಂಧಪಟ್ಟ ಆಡಳಿತ ಮಂಡಳಿ ಅಥವಾ ಮುಜರಾಯಿ ಇಲಾಖೆ ಅದರತ್ತ ಗಮನಹರಿಸಿ ಸೋರಿಕೆ ತಡೆಯುವಿಕೆಗೆ ಶಾಶ್ವತ ಪರಿಹಾರ ರೂಪಿಸುತ್ತವೆ. ಭಕ್ತರಿಗೆ ಮಳೆಗಾಲದಲ್ಲಿ ಜಲಾಭಿಷೇಕ ಆಗದಂತೆ ತಡೆಯುವ ಕೆಲಸ ಮಾಡುತ್ತವೆ. ಆದರೆ ಸುಂದರ ಶಿಲ್ಪ ಕೆತ್ತನೆಗೆ ಹೆಸರಾಗಿದ್ದ ಬನವಾಸಿಯ ಮಧುಕೇಶ್ವರ ದೇವಾಲಯ ಮಳೆಗಾಲದಲ್ಲಿ ಸೋರುವ ಕಾರಣಕ್ಕೆ ಟಾರ್ಪಲ್​ ಹೊದ್ದು ತನ್ನ ಸೌಂದರ್ಯ ಮರೆಮಾಚಿದೆ. ಇದು ಪ್ರಾಚ್ಯವಸ್ತು ಇಲಾಖೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಕದಂಬರ ರಾಜಧಾನಿ ಬನವಾಸಿಯಲ್ಲಿನ ಮಧುಕೇಶ್ವರ ದೇವಾಲಯ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸೋರುತ್ತಿದೆ. ಗರ್ಭಗುಡಿ, ನಂದಿ ಮಂಟಪ ಇತರೆಡೆಗಳಲ್ಲಿ ದೇವಾಲಯದ ಮೇಲ್ಛಾವಣಿಯ ಗಾರೆ ಕಳಚಿ ನೀರು ಒಳ ಬರುತ್ತಿದೆ. ದಶಕಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ದುರಸ್ತಿ ಕಾರ್ಯವಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ದೇವಾಲಯದ ಸೌಂದರ್ಯ ಕಳೆಗುಂದುತ್ತಿದೆ ಎಂಬುದು ಆಡಳಿತ ಸಮಿತಿಯ ದೂರಾಗಿತ್ತು. ಈ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವರಿಕೆ ಮಾಡಲಾಗಿತ್ತು.

ಪ್ರಸಕ್ತ ಸಾಲಿನ ಮಳೆಗಾಲದಲ್ಲಿಯೂ ಮತ್ತೆ ಸೋರಿಕೆ ಜೋರಾಗಿದೆ. ಇದನ್ನು ವಿರೋಧಿಸಿ ಸ್ಥಳೀಯರು ಧ್ವನಿಯೆತ್ತಿದ ಪರಿಣಾಮ ಇಲಾಖೆಯ ಹಾವೇರಿ ವಿಭಾಗದ ಸಿಬ್ಬಂದಿ ಟಾರ್ಪಲಿನ್ ಹೊದಿಸಿ ತಾತ್ಕಾಲಿಕ ಪರಿಹಾರ ಕಾರ್ಯ ಮಾಡಿದ್ದಾರೆ. ಆದರೆ ಇದರಿಂದ ದೇವಾಲಯದ ಸೌಂದರ್ಯ ಮರೆಯಾಗುವಂತಾಗಿದೆ. ದೂರದ ಊರುಗಳಿಂದ ಬರುವ ಭಕ್ತರಿಗೆ ಮಧುಕೇಶ್ವರನ ಸ್ಥಿತಿ ನೋಡಿ ಮರುಕ ಬರುತ್ತಿದೆ.

'ಇಡೀ ದೇವಾಲಯ ಕಪ್ಪು ಟಾರ್ಪಲಿನ್​ನಿಂದ ಆವರಿಸಿದೆ. ದೇವಾಲಯ ಕಟ್ಟಡ ನಿರ್ವಹಿಸುವ ಪದ್ಧತಿ ಇದಲ್ಲ. ಈ ದೇವಾಲಯದ್ದೊಂದೇ ಇಂತಹ ಸ್ಥಿತಿಯಲ್ಲ. ಇಲ್ಲಿನ ಪಾರ್ವತಿ ದೇವಾಲಯ, ಲಕ್ಷ್ಮೀ ನರಸಿಂಹ ದೇವಾಲಯಗಳೂ ಸೋರುತ್ತಿವೆ. ಮಳೆಗಾಲದಲ್ಲಿ ಸೋರುವಿಕೆ ತಡೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ನಂತರ ಶಾಶ್ವತ ಪರಿಹಾರ ಕೆಲಸ ಮಾಡಲಾಗುವುದು' ಎಂಬುದು ಇಲಾಖೆ ಅಧಿಕಾರಿಗಳ ಮಾಹಿತಿ.

ಕ್ರಮ ಕೈಗೊಳ್ಳುತ್ತೇವೆ-ಜಿಲ್ಲಾ ಉಸ್ತುವಾರಿ ಸಚಿವ: ಆದರೆ ಕಳೆದ ಕೆಲ ವರ್ಷಗಳಿಂದಲೂ ಇದೇ ರೀತಿಯ ಪರಿಸ್ಥಿತಿ ಇದೆ. ಆದರೂ ಕೂಡ ಶಾಶ್ವತ ಪರಿಹಾರ ನೀಡದ ಇಲಾಖೆ ಈಗ ಹಾರಿಕೆಯ ಉತ್ತರ ನೀಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಗಮನದಲ್ಲೂ ಈ ವಿಷಯ ಇಲ್ಲ ಎಂಬುದು ಖೇದಕರ ಎನ್ನುತ್ತಾರೆ ಸ್ಥಳೀಯರು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಈ ವಿಚಾರ ನಮ್ಮ ಗಮನಕ್ಕೆ ಈಗ ಬಂದಿದೆ. ಇದರ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಕನ್ನಡದ ಪ್ರಥಮ ರಾಜಧಾನಿಯ ಪ್ರಸಿದ್ಧ ಮಧುಕೇಶ್ವರ ದೇವಾಲಯದ ಪರಿಸ್ಥಿತಿ ಬಗ್ಗೆ ಇಲಾಖೆಯ ಕಾರ್ಯ ಜಿಲ್ಲೆಯ ಇತಿಹಾಸಕ್ಕೆ ಅವಮಾನ ಮಾಡಿದಂತಿದೆ. ಪ್ರಾಚ್ಯ ವಸ್ತು ಇಲಾಖೆಗೆ ಬಡತನ ಕಾಡುತ್ತಿರಬಹುದು ಎಂದು ಪ್ರವಾಸಿಗರು ಆಡಿಕೊಳ್ಳುತ್ತಿದ್ದಾರೆ. ಇಲಾಖೆಯ ಕಾರ್ಯ ನಗೆಪಾಟಲಿಗೀಡಾಗಿದೆ. ಈ ಮಳೆಗಾಲ ಮುಗಿದ ಮೇಲಾದರೂ ಇಲಾಖೆ ಶಾಶ್ವತ ಪರಿಹಾರ ಕಂಡುಹಿಡಿದು ಮಧುಕೇಶ್ವರ ದೇವಾಲಯವನ್ನ ರಕ್ಷಿಸುವ ಕಾರ್ಯ ಮಾಡಬೇಕಿದೆ.

ಇದನ್ನೂ ಓದಿ:ಐತಿಹಾಸಿಕ ಬನವಾಸಿಯ ಮಧುಕೇಶ್ವರ ದೇವರ ನವರಥಕ್ಕೆ ಮುನ್ನುಡಿ

ABOUT THE AUTHOR

...view details