ಕಾರವಾರ: ಪುರಾಣ ಪ್ರಸಿದ್ಧ ಸ್ಥಳಗಳಲ್ಲಿ ಇಡಗುಂಜಿ ಕ್ಷೇತ್ರವೂ ಒಂದು. ಇಲ್ಲಿ ಗಣೇಶ ಚತುರ್ಥಿ ಬಂದರೆ ಸಾಕು ಸಾವಿರಾರು ಭಕ್ತರು ಆಗಮಿಸಿ ಮಹಾಗಣಪನಿಗೆ ವಿಶೇಷ ಸೇವೆ ಸಲ್ಲಿಸುತ್ತಿದ್ದರು. ಆದ್ರೆ ಈ ಬಾರಿ ಕೊರೊನಾ ಹೆಮ್ಮಾರಿ ಸಂಭ್ರಮಕ್ಕೆ ಕಡಿವಾಣ ಹಾಕಿದೆ.
ಸದ್ಯ ಗಣೇಶ ಹಬ್ಬದ ಸಂದರ್ಭವಾಗಿರುವುದರಿಂದ ವಿವಿಧ ಸೇವೆಗಳು ದೇವಸ್ಥಾನದಲ್ಲಿ ನಡೆಯುತ್ತಿದ್ದವು. ಆದ್ರೆ ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದೆ. ಹೀಗಾಗಿ, ದೇವಾಲಯದಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಒದಗಿಸಲಾಗಿದೆ. ಎಲ್ಲ ರೀತಿಯ ಹಣ್ಣುಕಾಯಿ, ಪ್ರಸಾದ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಂಪ್ರದಾಯದಂತೆ ಸರಳವಾಗಿ ಗಣೇಶೋತ್ಸವ ನಡೆಸಲಾಗುವುದು ಎಂದು ಅರ್ಚಕರು ತಿಳಿಸಿದ್ದಾರೆ.
ಶರಾವತಿ ತಟದಲ್ಲಿ ಈ ಬಾಲ ಗಣಪತಿ ಭಕ್ತರ ಆರಾಧ್ಯ ದೈವವಾಗಿ ಪ್ರಸಿದ್ದಿ ಪಡೆದಿದೆ. ಇಲ್ಲಿನ ದ್ವಿಭುಜ ಗಣಪತಿಗೆ ಎರಡು ದಂತಗಳಿವೆ. ಅಲ್ಲದೆ, ಸುಮಾರು 1,500 ವರ್ಷದ ಹಿಂದಿನ ಕಪ್ಪು ಶಿಲೆಯ ಗಣಪತಿ ಮೂರ್ತಿಯನ್ನು ಈಗಲೂ ಇಲ್ಲಿ ಪೂಜಿಸಲಾಗುತ್ತಿದೆ.