ಕಾರವಾರ:ರಾಜಸ್ಥಾನದಲ್ಲಿ ಪೊಲೀಸರ ಕಿರುಕುಳಕ್ಕೆ ಮನನೊಂದು ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಖಂಡಿಸಿ ಜನಶಕ್ತಿ ವೇದಿಕೆ ಸದಸ್ಯರು ನಗರದ ಮೆಡಿಕಲ್ ಕಾಲೇಜಿನಲ್ಲಿ ವೈದ್ಯರ ಜೊತೆಗೂಡಿ ಕೈಗೆ ಕಪ್ಪು ಪಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
ರಾಜಸ್ಥಾನದ ದೌಸಾದಲ್ಲಿ ಗರ್ಭಿಣಿಯೊಬ್ಬರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದರು. ಮೃತಳ ಕುಟುಂಬ ಮೃತದೇಹವನ್ನು ಕೊಂಡೊಯ್ದಿದ್ದರೂ, ಸ್ಥಳೀಯ ಕೆಲ ಮುಖಂಡರುಗಳು ಮೃತದೇಹದೊಂದಿಗೆ ಡಾ.ಅರ್ಚನಾ ಅವರ ಆಸ್ಪತ್ರೆಯ ಎದುರು ಪ್ರತಿಭಟಿಸಿ, ಪೊಲೀಸರನ್ನು ಕರೆಯಿಸಿದ್ದಾರೆ. ಪೊಲೀಸರು ಪ್ರಕರಣದ ಹಿನ್ನೆಲೆ ತಿಳಿಯದೇ ವೈದ್ಯೆಯ ವಿರುದ್ಧ ಐಪಿಸಿ ಕಲಂ 302 ಕೊಲೆ ಆರೋಪದ ಪ್ರಕರಣ ದಾಖಲಿಸಿ, ಅವರಿಗೆ ಕಿರುಕುಳ ನೀಡಿದ್ದಾರೆ. ಇದರಿಂದಾಗಿ ಮನನೊಂದ ಡಾ.ಅರ್ಚನಾ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಇಡೀ ದೇಶವೇ ತಲೆತಗ್ಗಿಸುವಂತಹ ಘಟನೆಯಾಗಿದೆ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದರು.
ಕಿರುಕುಳದಿಂದ ವೈದ್ಯೆ ಆತ್ಮಹತ್ಯೆ: ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಒಬ್ಬ ಅಪರಿಚಿತ ರೋಗಿಯ ಪ್ರಾಣ ಉಳಿಸಲು ಹೋರಾಡುತ್ತಾರೆ. ಆದರೆ, ಯಾವುದೋ ಸಂದರ್ಭದಲ್ಲಿ ಏನೋ ಘಟನೆ ನಡೆಯಿತು ಎಂದು ವೈದ್ಯರನ್ನೇ ಪ್ರಕರಣಗಳಲ್ಲಿ ಆರೋಪಿಗಳನ್ನಾಗಿ ಮಾಡುವುದು ಸರಿಯಾದುದಲ್ಲ. ಇದು ಉಳಿದ ವೈದ್ಯರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಹೊಸವರ್ಷವಾದ ಯುಗಾದಿಯಂದೇ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವ ಮೂಲಕ ಇಂತಹ ಘಟನೆಗಳನ್ನು ಖಂಡಿಸಿ, ಮೃತಳ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ ಎಂದರು.
ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಒಕ್ಕೂಟ (ಐಎಂಎ)ದ ಜಿಲ್ಲಾ ಶಾಖೆ ಕೂಡ ಬೆಂಬಲ ಸೂಚಿಸಿತ್ತು. ಅಲ್ಲದೇ ಜಿಲ್ಲೆಯ ಕೆಲ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಕೂಡ ಪ್ರತಿಭಟನೆಗೆ ಕೈಜೋಡಿಸಿವೆ. ಪ್ರತಿಭಟನೆಯಲ್ಲಿ ಸರ್ಜನ್ ಶಿವಾನಂದ ಕುಡ್ತಲ್ಕರ್, ಕಸಾಪ ತಾಲೂಕು ಅಧ್ಯಕ್ಷ ರಾಮಾ ನಾಯಕ್, ಖೈರೋನ್ನಿಸಾ ಶೆಖ್ ಇದ್ದರು.
ಇದನ್ನೂ ಓದಿ:ಲೋಕಕ್ಕೆಲ್ಲಾ ಇಂದು ಯುಗಾದಿ.. ಆದರೆ, ಗುಂಡ್ಲುಪೇಟೆಯ 9 ಊರುಗಳಲ್ಲಿ ಬೇರೆ ದಿನ.. ಕಾರಣ ವಿಚಿತ್ರ!