ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದಲ್ಲಿ ಕ್ಯಾಸಿನೋ ಪ್ರಾರಂಭಕ್ಕೆ ಪ್ರಸ್ತಾವನೆ: ಪ್ರವಾಸೋದ್ಯಮಕ್ಕೆ ಸಿಗುತ್ತಾ ಹೊಸ ಸ್ಪರ್ಶ? - karwar

ಪ್ರವಾಸೋದ್ಯಮದ ವಿಚಾರಕ್ಕೆ ಬಂದ್ರೆ ಗೋವಾ ರಾಜ್ಯ, ದೇಶ ಮಾತ್ರವಲ್ಲದೇ ಇಡೀ ವಿಶ್ವದ ಗಮನವನ್ನೇ ಸೆಳೆದಿದೆ. ಪ್ರತಿವರ್ಷ ದೇಶ, ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಗೋವಾಕ್ಕೆ ಆಗಮಿಸಿ ಮೋಜು, ಮಸ್ತಿಯಲ್ಲಿ ತೊಡಗುತ್ತಾರೆ. ಆದ್ರೆ ಪಕ್ಕದಲ್ಲೇ ಇರುವ ಉತ್ತರಕನ್ನಡ ಜಿಲ್ಲೆ ಹತ್ತಾರು ಪ್ರವಾಸಿ ತಾಣಗಳನ್ನ ಹೊಂದಿದ್ದರೂ ಸಹ ಅಷ್ಟು ಪ್ರಮಾಣದ ಪ್ರವಾಸಿಗರು ಭೇಟಿ ನೀಡುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಗೋವಾ ಮಾದರಿಯಲ್ಲಿ ಆಧುನಿಕ ಸ್ಪರ್ಶ ನೀಡಲು ಸಚಿವ ಶಿವರಾಮ ಹೆಬ್ಬಾರ್ ಮುಂದಾಗಿದ್ದಾರೆ.

Uttara Kannada
ಉತ್ತರ ಕನ್ನಡ

By

Published : Nov 6, 2021, 11:17 AM IST

ಕಾರವಾರ:ಗೋವಾ ಎಂದಾಕ್ಷಣ ಅಲ್ಲಿನ ಕಡಲ ತೀರಗಳು, ರಾತ್ರಿ ವೇಳೆ ಝಗಮಗಿಸುವ ವಿದ್ಯುತ್​ ಅಲಂಕಾರದೊಂದಿಗೆ ಹೊಳೆಯುವ ಕ್ಯಾಸಿನೋ ಕ್ರೂಝ್ ಶಿಫ್‌ಗಳು ಹಾಗು ತಂಡೋಪ ತಂಡವಾಗಿ ಎಂಜಾಯ್ ಮಾಡುವ ಪ್ರವಾಸಿಗರು ಕಣ್ಮುಂದೆ ಬರ್ತಾರೆ.

ಉತ್ತರ ಕನ್ನಡದಲ್ಲಿ ಕ್ಯಾಸಿನೋ ಪ್ರಾರಂಭಕ್ಕೆ ಪ್ರಸ್ತಾವನೆ..

ಗೋವಾಕ್ಕೆ ಹೋಲಿಸಿದರೆ ನೆರೆಯ ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ಸಮವಾದ ವಿಸ್ತೀರ್ಣವನ್ನೇ ಹೊಂದಿದ್ದು, ಗೋವಾ ರಾಜ್ಯಕ್ಕಿಂತಲೂ ಹೆಚ್ಚಿನ ಪ್ರವಾಸಿ ತಾಣಗಳು ಇಲ್ಲಿವೆ. ಆದ್ರೆ ಪ್ರವಾಸೋದ್ಯಮಕ್ಕೆ ಗೋವಾ ನೀಡುವಷ್ಟು ಉತ್ತೇಜನ ಇಲ್ಲಿ ಸಿಗುತ್ತಿಲ್ಲವಾಗಿರುವುದರಿಂದ ಪ್ರವಾಸಿಗರನ್ನ ಸೆಳೆಯುವಲ್ಲಿ ಇಲ್ಲಿನ ಪ್ರವಾಸಿ ತಾಣಗಳು ಎಡವುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಸ್ಪರ್ಶ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಚಿಂತನೆ ನಡೆಸಿದ್ದಾರೆ.

ನೆರೆಯ ಗೋವಾಕ್ಕೆ ಹೆಚ್ಚಿನ ಪ್ರವಾಸಿಗರು ಕಡಲ ತೀರಗಳಿಗೆ ಭೇಟಿ ನೀಡಿದ್ರೆ, ಇನ್ನೂ ಹಲವರು ಅಲ್ಲಿರುವ ಕ್ಯಾಸಿನೋಗಳಿಗಾಗಿಯೇ ಆಗಮಿಸುತ್ತಾರೆ. ಅಲ್ಲಿನ ಕ್ಯಾಸಿನೋಗಳಿಂದಾಗಿಯೇ ಗೋವಾ ರಾಜ್ಯಕ್ಕೆ ಪ್ರತಿವರ್ಷ ಸುಮಾರು 696 ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದ್ದು, 3 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗವನ್ನ ಒದಗಿಸಿವೆ. ಅಲ್ಲದೇ ಕ್ಯಾಸಿನೋಗಳಿಂದಾಗಿ ಅಲ್ಲಿನ ಟ್ಯಾಕ್ಸಿ, ಹೋಟೆಲ್, ಲಾಡ್ಜ್‌ಗಳಿಗೂ ಪ್ರವಾಸಿಗರ ಆಗಮನವಾಗುತ್ತಿರುವುದರಿಂದ ಸಾಕಷ್ಟು ಲಾಭದಾಯಕವಾಗಿ ಪರಿಣಮಿಸಿದೆ.

ಹೀಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಗೋವಾ ಮಾದರಿಯಂತೆ ಉತ್ತರ ಕನ್ನಡದಲ್ಲೂ ಇಲ್ಲಿನ ಪ್ರವಾಸಿ ತಾಣಗಳನ್ನ ಅಭಿವೃದ್ಧಿಪಡಿಸುವ ಚಿಂತನೆಯನ್ನ ನಡೆಸಲಾಗುತ್ತಿದೆ. ಇದರಿಂದ ಪ್ರವಾಸಿ ತಾಣಗಳು ಮತ್ತಷ್ಟು ಪ್ರವಾಸಿಗರನ್ನ ಸೆಳೆಯುವುದರೊಂದಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಹೆಚ್ಚುವುದಲ್ಲದೇ ಜಿಲ್ಲೆಯ ಆದಾಯಕ್ಕೂ ಲಾಭದಾಯಕವಾಗಲಿದೆ. ಈ ನಿಟ್ಟಿನಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆ ಭೌಗೋಳಿಕವಾಗಿ ವೈಶಿಷ್ಟ್ಯತೆಯನ್ನು ಹೊಂದಿರುವ ಜಿಲ್ಲೆಯಾಗಿದ್ದು, ಒಂದೆಡೆ ವಿಶಾಲವಾದ ಕಡಲತೀರಗಳಿದ್ದು ಇನ್ನೊಂದೆಡೆ ಪಶ್ಚಿಮ ಘಟ್ಟಗಳ ಸರಣಿಯನ್ನು ಹೊಂದಿದೆ. ಹೀಗಾಗಿ ಬೀಚ್‌ಗಳೊಂದಿಗೆ ಕಾಳಿ ನದಿ ತೀರದಲ್ಲಿ ಹೋಂ ಸ್ಟೇ, ರೆಸಾರ್ಟ್‌ಗಳು ಇರುವುದರಿಂದ ವಿಭಿನ್ನ ರೀತಿಯಲ್ಲಿ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ಸಾಕಷ್ಟು ಅವಕಾಶಗಳನ್ನ ಹೊಂದಿದೆ.

ಮಾಲ್ಡೀವ್ಸ್ ಚಿಕ್ಕ ರಾಷ್ಟ್ರವಾಗಿದ್ದರೂ ಸಹ ತನ್ನಲ್ಲಿನ ಕಡಲ ತೀರಗಳನ್ನೇ ಬಳಸಿಕೊಂಡು ಪ್ರವಾಸೋದ್ಯಮದ ಮೂಲಕವೇ ವಿಶ್ವದ ಗಮನವನ್ನ ತನ್ನತ್ತ ಸೆಳೆದಿದೆ. ಉತ್ತರಕನ್ನಡ ಜಿಲ್ಲೆಯಲ್ಲೂ ಅದರಷ್ಟೇ ಬೀಚ್‌ಗಳು ಇದ್ದು ಪ್ರವಾಸಿಗರನ್ನ ಸೆಳೆಯುವ ನಿಟ್ಟಿನಲ್ಲಿ ಪೂರಕ ವಾತಾವರಣವನ್ನ ನಿರ್ಮಿಸಬೇಕಾದ ಅವಶ್ಯಕತೆ ಇದೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಕಾರವಾರದಲ್ಲಿ ಕ್ಯಾಸಿನೋ ಪ್ರಾರಂಭಿಸುವ ಪ್ರಸ್ತಾವನೆ ಬಂದಿತ್ತಾದರೂ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಹೀಗಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಯ ಜನರ ಅಭಿಪ್ರಾಯ ಪಡೆದು ಯೋಜನೆಗಳನ್ನ ಜಾರಿಗೊಳಿಸುವಂತಾಗಲಿ ಅಂತಾರೇ ಸಾರ್ವಜನಿಕರು.

ABOUT THE AUTHOR

...view details