ಕರ್ನಾಟಕ

karnataka

By

Published : May 26, 2020, 3:14 PM IST

ETV Bharat / state

ಸೇವಾ ಸಿಂಧು ವೆಬ್​​ಸೈಟ್ ಸಮಸ್ಯೆ: ಕಾರವಾರದಲ್ಲಿ ಆಟೋ, ಟ್ಯಾಕ್ಸಿ ಚಾಲಕರ ಕೈ ಸೇರದ ಪರಿಹಾರ ಹಣ

ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಐದು ಸಾವಿರ ರೂ.ಗಳ ವಿಶೇಷ ಪ್ಯಾಕೇಜ್​ ಘೋಷಣೆ ಮಾಡಿದ್ದು, ಸೇವಾ ಸಿಂಧು ವೆಬ್​ಸೈಟ್​ ಸಮಸ್ಯೆಯಿಂದಾಗಿ ಈ ಹಣ ಕಾರವಾರದ ಚಾಲಕರಿಗೆ ದೊರೆಯದಂತಾಗಿದೆ.

Seva Sindhu website
ಕಾರವಾರ ಚಾಲಕರ ಸಮಸ್ಯೆ

ಕಾರವಾರ: ಲಾಕ್​ಡೌನ್​​ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ 5 ಸಾವಿರ ರೂ. ಪರಿಹಾರ ಹಣ ನೀಡುತ್ತಿದ್ದು, ಸೇವಾ ಸಿಂಧು ವೆಬ್​​ಸೈಟ್ ಸಮಸ್ಯೆಯಿಂದಾಗಿ ಕಾರವಾರದ ಆಟೋ, ಟ್ಯಾಕ್ಸಿ ಚಾಲಕರ ಕೈಗೆ ಈ ಹಣ ಸೇರದಂತಾಗಿದೆ.

ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ ಸೇವಾ ಸಿಂಧು ವೆಬ್​​ಸೈಟ್​​ನ ತಾಂತ್ರಿಕ ಸಮಸ್ಯೆಯಿಂದಾಗಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಣೆ ಮಾಡಿದ್ದ ಪರಿಹಾರದ ಹಣ ಕೈಗೆ ಸೇರದಂತಾಗಿದೆ. ಅಧಿಕೃತವಾಗಿ ನೋಂದಣಿ ಹೊಂದಿದ ವಾಹನಗಳ ಚಾಲಕರು ಅರ್ಜಿ ಸಲ್ಲಿಸಲು ಮುಂದಾದರೆ ವೆಬ್​ಸೈಟ್​​​ನಲ್ಲಿ ನೋಂದಣಿ ವ್ಯಾಲಿಡಿಟಿ ಮುಗಿದಿದೆ ಎಂದು ಬರುತ್ತಿದೆ.

ಕಾರವಾರ ಚಾಲಕರ ಸಮಸ್ಯೆ

ಈ ಬಗ್ಗೆ ಆರ್​​ಟಿಒ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಯಾವುದೇ ಸಮರ್ಪಕ ಉತ್ತರ ನೀಡುತ್ತಿಲ್ಲವಂತೆ. ದೆಹಲಿಯಲ್ಲಾದ ಸಮಸ್ಯೆ ಅಲ್ಲಿಯೇ ಬಗೆಹರಿಸಬೇಕು ಎಂಬಿತ್ಯಾದಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಚಾಲಕರು ಆರೋಪಿಸಿದ್ದಾರೆ.

ಇದು ಸರ್ಕಾರ ಘೋಷಣೆ ಮಾಡಿದ ಪರಿಹಾರ ಹಣಕ್ಕೆ ಮಾತ್ರ ಸಮಸ್ಯೆಯಾಗಿರದೆ ಆಕಸ್ಮಿಕವಾಗಿ ಸಂಭವಿಸುವ ಅಪಘಾತದಲ್ಲಿ ಇನ್ಸೂರೆನ್ಸ್ ಪಡೆಯುವಾಗಲೂ ಸಹ ಇಂತಹ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದೆ ಎಂದು ಆಟೋ, ಟ್ಯಾಕ್ಸಿ ಚಾಲಕರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಿ ಸಮಸ್ಯೆಯನ್ನು ಇತ್ಯರ್ಥ ಮಾಡುವಂತೆ ಆಟೋ ಮತ್ತು ಟ್ಯಾಕ್ಸಿ ಚಾಲಕರು ಒತ್ತಾಯಿಸಿದ್ದಾರೆ.

ABOUT THE AUTHOR

...view details