ಕರ್ನಾಟಕ

karnataka

ಸುಳ್ಳು ವದಂತಿಗೆ 10 ರೂ ನಾಣ್ಯ ಪಡೆಯಲು ಜನ ಹಿಂಜರಿಕೆ: 5 ಕೋಟಿಗೂ ಹೆಚ್ಚು ನಾಣ್ಯ...!

By

Published : May 26, 2023, 8:32 PM IST

10 ರೂ ನಾಣ್ಯ ಚಲಾವಣೆಗೆ ಯಾವುದೇ ಹಿಂಜರಿಕೆ ಬೇಡವೆಂದು ಈಗಾಗಲೇ ಆರ್​ಬಿಐ, ಬ್ಯಾಂಕ್​ಗಳು ಸ್ಪಷ್ಟವಾಗಿ ತಿಳಿಸುತ್ತಿವೆ. ಆದರೂ ಜನ ಮಾತ್ರ 10 ರೂ ನಾಣ್ಯ ತೆಗೆದುಕೊಳ್ಳಲು ಸಿದ್ದರಿಲ್ಲ. ಉತ್ತರಕನ್ನಡ ಜಿಲ್ಲೆಯ ಪ್ರತಿ ಬ್ಯಾಂಕ್‌ವೂ ಇತ್ತೀಚೆಗೆ ಜನರಲ್ಲಿ ಜಾಗೃತಿ ಮೂಡಿಸಲು ನಾಣ್ಯ ಮೇಳ ಆಯೋಜಿಸಲು ನಿರ್ಧರಿಸಿವೆ.

10 rupees coin
10 ರೂ ನಾಣ್ಯ

10 ರೂ ನಾಣ್ಯ ಪಡೆಯಲು ಜನ ಹಿಂಜರಿಕೆ

ಕಾರವಾರ: ಆರ್‌ಬಿಐ ಸದ್ಯ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿದ್ದು ಬ್ಯಾಂಕ್​ಗಳಿಗೆ ನೀಡಿ ಸಾರ್ವಜನಿಕರು ನೋಟು ಬದಲಾಯಿಸಿಕೊಳ್ಳುವಂತೆ ಸೂಚಿಸಿದೆ. ಇದರಿಂದ ಜನಸಾಮಾನ್ಯರ ವ್ಯವಹಾರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿದಂತೆ ಕಂಡು ಬಂದಿಲ್ಲ.

ಆದರೆ, ಕಳೆದ ಕೆಲ ವರ್ಷಗಳ ಹಿಂದೆ ಚಲಾವಣೆಗೊಂಡ 10 ರೂಪಾಯಿ ನಾಣ್ಯ ಬ್ಯಾನ್ ಮಾಡಲಾಗಿದೆ ಎಂಬ ಸುಳ್ಳು ಸುದ್ದಿಯಿಂದ ಯಾರು ಇದನ್ನೂ ತೆಗೆದುಕೊಳ್ಳುತ್ತಿಲ್ಲ. ಇದರಿಂದ 10 ರೂ ನಾಣ್ಯಗಳ ಸಂಗ್ರಹ ಬ್ಯಾಂಕ್​ಗಳಲ್ಲಿ ಮಾತ್ರ ರಾಶಿಯಾಗಿ ಬಿದ್ದು ಹೊರೆಯಾಗುತ್ತಿವೆ. ಹೌದು.. ಕಳೆದ ಕೆಲ ವರ್ಷಗಳ ಹಿಂದೆ ಬಿಡುಗಡೆಗೊಂಡು ಮಾರುಕಟ್ಟೆಗೆ ಬಂದಿದ್ದ ವೇಳೆ ಜನರನ್ನು ಆಕರ್ಷಿಸಿದ್ದ 10 ರೂಪಾಯಿ ನಾಣ್ಯಗಳು, ಇದೀಗ ಕೊಟ್ಟರೂ ಜನ ಪಡೆಯಲು ಹಿಂದೇಟು ಹಾಕುವವರ ಸಂಖ್ಯೆ ಹೆಚ್ಚಾಗಿದೆ.

ಅದರಲ್ಲೂ 10ರ ನಾಣ್ಯಗಳನ್ನು ಬ್ಯಾನ್ ಮಾಡಲಾಗಿದೆ ಎಂಬ ಸುಳ್ಳು ವದಂತಿಯಿಂದ ಉತ್ತರಕನ್ನಡ ಜಿಲ್ಲೆಯಲ್ಲಿ 10 ರೂಪಾಯಿ ನಾಣ್ಯಗಳನ್ನು ಯಾವುದೇ ಅಂಗಡಿಕಾರರೂ ತೆಗೆದುಕೊಳ್ಳಲು ತಯಾರಿಲ್ಲ. 10ರ ನಾಣ್ಯಗಳು ಬ್ಯಾನ್ ಆಗಿವೆ ಎನ್ನುವ ಸುಳ್ಳು ವದಂತಿಯಿಂದ ನಾಣ್ಯಗಳನ್ನು ತೆಗೆದುಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದು, ಹತ್ತರ ನಾಣ್ಯಗಳಿಗೆ ಬೆಲೆಯಿಲ್ಲದಂತಾಗಿದೆ. ಅದರಲ್ಲಿ ಅಂಗಡಿಕಾರರು, ವ್ಯಾಪಾರಸ್ಥರು, ಬಸ್ ನಿರ್ವಾಹಕರಿಂದ 10 ರೂಪಾಯಿ ನಾಣ್ಯ ಜನ ಪಡೆಯದ ಕಾರಣ ಕಾಲಕ್ರಮೇಣ ಅವರು ಕೂಡ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ.

ಅಲ್ಲದೇ ಅದೆಷ್ಟೊ ಜನರು 10 ರೂಪಾಯಿ ನಾಣ್ಯ ಮರೆತು ಬಿಟ್ಟಿದ್ದಾರೆ. ಆದರೆ, ಹಲವರ ಮನೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ 10 ರೂಪಾಯಿ ನಾಣ್ಯಗಳ ಸಂಗ್ರಹ ಇದೆ. ಸರ್ಕಾರ ಬ್ಯಾನ್ ಮಾಡದಿದ್ದರೂ ಚಲಾವಣೆಯಾಗದಿದ್ದರಿಂದ ಉಪಯೋಗಕ್ಕೆ ಬಾರದಂತಾಗಿ ಮನೆಯಲ್ಲಿ ಇಟ್ಟುಕೊಳ್ಳಬೇಕಾಗಿದೆ ಎನ್ನುತ್ತಾರೆ ಸ್ಥಳೀಯರಾದ ಸಂಜೀವ್.

ಜಾಗೃತಿ ಮೇಳ ಆಯೋಜನೆ:ಇನ್ನು ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿ ಸದ್ಯ 5 ಕೋಟಿಗೂ ಅಧಿಕ 10 ರೂಪಾಯಿ ನಾಣ್ಯಗಳ ಸಂಗ್ರಹವಿದ್ದು, ಚಲಾವಣೆಯಿಲ್ಲದೇ ಬ್ಯಾಂಕ್‌ಗಳಲ್ಲೇ ಕೊಳೆಯುತ್ತಿವೆ. ಹೀಗಾಗಿ ಕೆಲವೊಂದು ಬ್ಯಾಂಕ್‌ಗಳೂ ಸಹ 10ರ ನಾಣ್ಯಗಳನ್ನು ಪಡೆದು ನೋಟುಗಳನ್ನ ನೀಡಲು ನಿರಾಕರಿಸುತ್ತಿವೆ. ಹೀಗಾಗಿ ಬ್ಯಾಂಕ್‌ನ ವ್ಯವಸ್ಥಾಪಕರಿಗೆ ಜಿಲ್ಲಾ ಲೀಡ್ ಬ್ಯಾಂಕ್, ನಾಣ್ಯಗಳನ್ನು ಪಡೆದುಕೊಳ್ಳಲೇಬೇಕು ಎನ್ನುವ ಸೂಚನೆ ನೀಡಿದೆ.

ಜಿಲ್ಲೆಯ ಪ್ರತಿ ಬ್ಯಾಂಕ್‌ನಲ್ಲಿಯೂ ಜನರಲ್ಲಿ ಜಾಗೃತಿ ಮೂಡಿಸಲು ನಾಣ್ಯ ಮೇಳ ಆಯೋಜನೆ ಮಾಡಲಾಗುತ್ತಿದ್ದು, ಜನರ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರೇವತಿ ಸುಧಾಕರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.

ಒಟ್ಟಾರೆ 2000 ರೂಪಾಯಿ ನೋಟ್‌ ಬ್ಯಾನ್ ಮಾಡಿದ ಬೆನ್ನಲ್ಲೇ 10 ರೂಪಾಯಿ ನಾಣ್ಯಗಳ ಕತೆಯೇನು ಎಂದು ಜನರು ಪ್ರಶ್ನಿಸುತ್ತಿದ್ದು, ಈ ಕುರಿತು ಸಂಬಂಧಪಟ್ಟ ವ್ಯಾಪಾರಸ್ಥರು, ಅಂಗಡಿಕಾರರಲ್ಲಿ ಜಾಗೃತಿ ಮೂಡಿಸಿ ನಾಣ್ಯಗಳ ಚಲಾವಣೆಗೆ ಬರುವಂತೆ ಕ್ರಮ ಕೈಗೊಳ್ಳುವುದು ಅಗತ್ಯವಿದೆ.

10 ರೂ ನಾಣ್ಯ ಚಲಾವಣೆಗೆ ಯಾವುದೇ ಹಿಂಜರಿಕೆ ಬೇಡ ಎಂದು ಈಗಾಗಲೇ ಆರ್​ಬಿಐ, ಬ್ಯಾಂಕ್​ಗಳು ಸ್ಪಷ್ಟವಾಗಿ ತಿಳಿಸುತ್ತಿವೆ. ಆದರೂ ಜನ ಮಾತ್ರ 10 ರೂ ನಾಣ್ಯ ತೆಗೆದುಕೊಳ್ಳಲು ಸಿದ್ದರಿಲ್ಲ. ಇದರಿಂದ ಬ್ಯಾಂಕ್​​ಗಳಿಗೆ ನಾಣ್ಯಗಳು ವಾಪಸ್ ಬಂದು ಹೊರೆಯಾಗಿ ಪರಿಣಮಿಸುತ್ತಿದೆ. ನೋಟಿನ ಬದಲು ನಾಣ್ಯಗಳ ಚಲಾವಣೆಗೆ ಹೆಚ್ಚು ಆದ್ಯತೆ ನೀಡಬೇಕು ಎಂಬ ಕೇಂದ್ರ ಸರ್ಕಾರದ ಆಶಯ ಈಡೇರಿಕೆಗೆ ತೊಡಕಾಗಿದೆ.

ಇದನ್ನೂಓದಿ:ರಾಷ್ಟ್ರಪತಿ ಚುನಾವಣೆ ಬಹಿಷ್ಕರಿಸಿದ್ದು ಜೆಡಿಎಸ್​ ಮರೆಯಬಾರದು ಎಂದ ಡಿಕೆಶಿ.. ನಾವು ಕಾಂಗ್ರೆಸ್‌ನ ಗುಲಾಮರಲ್ಲ ಎಂದ ಹೆಚ್​ಡಿಕೆ!

For All Latest Updates

ABOUT THE AUTHOR

...view details