ಕರ್ನಾಟಕ

karnataka

By ETV Bharat Karnataka Team

Published : Sep 19, 2023, 6:10 PM IST

ETV Bharat / state

ಸಾಲಮನ್ನಾ ಮಾಡಿ 6 ವರ್ಷ ಕಳೆದರೂ ಬಾರದ ಹಣ : 700ಕ್ಕೂ ಅಧಿಕ ರೈತರಿಗೆ ತೊಂದರೆ

ಉತ್ತರ ಕನ್ನಡ ಜಿಲ್ಲೆಯ 700ಕ್ಕೂ ಅಧಿಕ ರೈತರು ಬೆಳೆ ಸಾಲದ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಕೆಡಿಸಿಸಿ ಬ್ಯಾಂಕ್
ಕೆಡಿಸಿಸಿ ಬ್ಯಾಂಕ್

ಸೌಲಭ್ಯ ವಂಚಿತ ಕೃಷಿಕ ಗಣಪತಿ ಹೆಗಡೆ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ್ ಹೆಬ್ಬಾರ್ ಅವರು ಮಾತನಾಡಿದ್ದಾರೆ

ಶಿರಸಿ (ಉತ್ತರ ಕನ್ನಡ) : ಒಂದೆಡೆ ತೀವ್ರ ಬರಗಾಲ, ಇನ್ನೊಂದೆಡೆ ರೈತರ ಬೆಳೆಗಳಿಗೆ ರೋಗ ಬಾಧೆ, ಹೀಗೆ ಹಲವು ಸಮಸ್ಯೆಗಳಿಂದ ರೈತರು ಬಳಲುತ್ತಿರುವ ಸಂದರ್ಭದಲ್ಲಿಯೇ ಈ ಹಿಂದೆ ರಾಜ್ಯ ಸರ್ಕಾರದಿಂದ ಮನ್ನಾ ಮಾಡಲಾಗಿದ್ದ ಬೆಳೆ ಸಾಲದ ಸೌಲಭ್ಯದಿಂದ ಉತ್ತರ ಕನ್ನಡ ಜಿಲ್ಲೆಯ 700ಕ್ಕೂ ಅಧಿಕ ರೈತರು ವಂಚಿತರಾಗಿದ್ದಾರೆ. ಮನ್ನಾ ಮಾಡಿ 6 ವರ್ಷಗಳೇ ಕಳೆದರೂ ಅನ್ನ ಕೊಡುವ ರೈತ ಸಹಕಾರಿ ಸಂಘಗಳಿಗೆ ಅಲೆಯುವ ದುಸ್ಥಿತಿ ಮುಂದುವರೆದಿದೆ.

ಉತ್ತರ ಕನ್ನಡ ಜಿಲ್ಲೆಯ ರೈತರು ಕೆಡಿಸಿಸಿ ಬ್ಯಾಂಕ್ ಅಡಿಯಲ್ಲಿ ಬೆಳೆ ಸಾಲ ಹೊಂದಿದ್ದು, ಅಲ್ಲಿಂದ ಸಿಗಬೇಕಾಗಿದ್ದ ಸಾಲ ಮನ್ನಾ ಸೌಲಭ್ಯವು ವಿವಿಧ ಕಾರಣದಿಂದ ದೊರಕದೇ ಇರುವ ಕಾರಣ ರೈತರು ಸಂಕಷ್ಟ ಪಡುವಂತಾಗಿದೆ. ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಂತಹ ಸಂದರ್ಭದಲ್ಲಿ 2018 ರಲ್ಲಿ ಬೆಳೆ ಸಾಲಮನ್ನಾ ಘೋಷಣೆ ಮಾಡಲಾಗಿತ್ತು. 1 ಲಕ್ಷ ರೂ.ವರೆಗೆ ಸಾಲ ಮನ್ನಾ ಸೌಲಭ್ಯ ನೀಡಲಾಗಿತ್ತು. ಆದರೆ, ಇದಾಗಿ ಮೂರು ವರ್ಷಗಳೇ ಕಳೆದರೂ ಸಹ 774 ರೈತರಿಗೆ ಸಾಲಮನ್ನಾ ಸೌಲಭ್ಯ ದೊರಕಿಲ್ಲ.

774 ರೈತರಿಗೆ ಒಟ್ಟು 5 ಕೋಟಿ ರೂ‌. ಹಣ ಬಿಡುಗಡೆಯಾಗಬೇಕಿದೆ. ಈ ಸಮಸ್ಯೆ ರಾಜ್ಯದಾದ್ಯಂತ ಇದ್ದು, ಆಧಾರ್ ಸಮಸ್ಯೆ, ರೇಷನ್ ಕಾರ್ಡ್​ ಸಮಸ್ಯೆ, ಪಹಣಿ ಪತ್ರಿಕೆಯಲ್ಲಿ ವ್ಯತ್ಯಾಸ ಸೇರಿದಂತೆ ಅನೇಕ ತಾಂತ್ರಿಕ ಸಮಸ್ಯೆಗಳಿಂದ ರೈತರು ಸಾಲಮನ್ನಾ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಬೆಳೆ ಸಾಲವನ್ನು ಪ್ರಾಥಮಿಕ ಪತ್ತಿ‌ನ ಸಹಕಾರಿ ಸಂಘದಿಂದ ರೈತರು ಪಡೆದುಕೊಂಡಿದ್ದು, ಅಲ್ಲಿ ವಿಚಾರಿಸಿದಲ್ಲಿ ಯಾವುದೇ ಉತ್ತರ ಇಲ್ಲ. ಸೌಲಭ್ಯ ನೀಡದೇ ಹೋದಲ್ಲಿ ಮನ್ನಾ ಯಾಕೆ ಮಾಡಬೇಕು ? ಜೀವನ ಮಾಡುವುದೇ ಕಷ್ಟ ಎನ್ನುವಾಗ ಸರ್ಕಾರ ಹಿಂದಿನ ಮನ್ನಾ ಸೌಲಭ್ಯ ನೀಡಿ ರೈತರನ್ನು ಬದುಕಿಸಬೇಕು ಎನ್ನುವುದು ಕೃಷಿಕ ಗಣಪತಿ ಹೆಗಡೆ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ 341 ಕೋಟಿ : 'ಈ ಹಿಂದೆ ತಾಂತ್ರಿಕ ಕಾರಣವಿದ್ದರೂ ಸಹ ಅದನ್ನು ಸರಿಪಡಿಸಿ ರೈತರಿಗೆ ಸಾಲ ಮನ್ನಾ ಸೌಲಭ್ಯ ನೀಡಬಹುದು ಎಂದು ಸರ್ಕಾರದಿಂದ ಗ್ರೀನ್ ಲಿಸ್ಟ್ ಮಾಡಲಾಗಿತ್ತು. ಇದು ಕಳೆದ ಜನವರಿಗೆ ಕೊನೆಯ ಬಾರಿ ಪರಿಷ್ಕರಣೆ ಮಾಡಲಾಗಿದ್ದು, ನಂತರ ಬಿಡುಗಡೆಯ ಯಾವ ಸೂಚನೆಯೂ ಸಹ ಇಲ್ಲ. ಇದಲ್ಲದೇ ರಾಜ್ಯದಲ್ಲಿ ಒಟ್ಟು 341 ಕೋಟಿ ರೂ. ಬಿಡುಗಡೆ ಆಗಬೇಕಿದ್ದು, ಇದಕ್ಕಾಗಿ ಈಗಾಗಲೇ ವಿವಿಧ ಜಿಲ್ಲೆಗಳ ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷರು, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಗಳು ಸಹಕಾರ ಸಚಿವರನ್ನು ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೂ ಮನವಿ ಮಾಡಲಾಗಿದೆ. ಈಗಾಗಲೇ 6-7 ವರ್ಷ ಕಳೆದಿದೆ. ಇದು ಬ್ಯಾಂಕಿನ ಮೇಲೂ ದುಷ್ಪರಿಣಾಮ ಬೀರುತ್ತದೆ. ಜೊತೆಗೆ ಕೃಷಿಕನಿಗೂ ತೊಂದರೆಯಾಗಿದೆ. ಕಾರಣ ಶೀಘ್ರವಾಗಿ ಹಣ ಬಿಡುಗಡೆಗೆ ಒತ್ತಾಯಿಸಲಾಗಿದೆ' ಎನ್ನುತ್ತಾರೆ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ್ ಹೆಬ್ಬಾರ್.

ಒಟ್ಟಾರೆಯಾಗಿ ಬರಗಾಲ, ರೋಗ ಬಾಧೆ ಸೇರಿದಂತೆ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿರುವ ರೈತರಿಗೆ ಸರ್ಕಾರದ ನಿಯಮಗಳು ಮತ್ತಷ್ಟು ಸಂಕಷ್ಟ ತಂದೊಡ್ಡಿವೆ. ಕಾರಣ ನಿಯಮಗಳನ್ನು ಸರಳೀಕರಣಗೊಳಿಸಿ ಶೀಘ್ರವಾಗಿ ಸಾಲಮನ್ನಾ ಸೌಲಭ್ಯ ಸಿಗುವಂತೆ ಮಾಡಬೇಕು ಎಂಬುದು ವಂಚಿತರ ಆಗ್ರಹವಾಗಿದೆ.

ಇದನ್ನೂ ಓದಿ:ಕಾವೇರಿ ಭಾಗದ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ಕೊಡಿ, ಸಾಲ ಮನ್ನಾ ಮಾಡಿ: ಸರ್ಕಾರಕ್ಕೆ ಬೊಮ್ಮಾಯಿ ಆಗ್ರಹ

ABOUT THE AUTHOR

...view details