ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾಮಳೆಯಿಂದ ಹಾನಿಯಾದ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು.
ಅಂಕೋಲಾದ ಡೊಂಗ್ರಿ, ಸುಂಕಸಾಳ, ರಾಮನಗುಳಿ ಸೇರಿದಂತೆ ಕುಮಟಾ, ಯಲ್ಲಾಪುರ ಭಾಗಗಳಿಗೆ ತೆರಳಿ ಸಂತ್ರಸ್ತರ ಸಮಸ್ಯೆ ಆಲಿಸಿ ಸಾಂತ್ವನ ಹೇಳಿದರು. ಅಲ್ಲದೆ ಈ ಭಾಗದಲ್ಲಿ ಕೊಚ್ಚಿ ಹೋಗಿರುವ ಸೇತುವೆಗಳಿಂದ ಉಂಟಾದ ಸಮಸ್ಯೆ ಬಗ್ಗೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದರು.
ಗುಳ್ಳಾಪುರ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಮನೆಯಲ್ಲಿನ ಪಾತ್ರೆ, ಬಟ್ಟೆ ಇನ್ನಿತರೆ ಅಗತ್ಯ ಸಾಮಾನುಗಳನ್ನು ಕಳೆದುಕೊಂಡವರಿಗೆ ತಕ್ಷಣ ತಾತ್ಕಾಲಿಕ ಪರಿಹಾರವಾಗಿ ₹ 10 ಸಾವಿರ ಹಾಗೂ ಮನೆ ಗೋಡೆಗಳು ಕುಸಿದಿದ್ದರೆ ₹ 25 ಸಾವಿರ ನೀಡಿ. ಇವುಗಳಿಗೆ ಹೆಚ್ಚಿನ ದಾಖಲೆ ಕೇಳಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.