ಕಾರವಾರ:ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಫೆಬ್ರವರಿ 11 ರಿಂದ 17ರವರೆಗೆ ಮೆಗಾ ಉದ್ಯಮಿ ಸಂತೆಯನ್ನು ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದೇಶಪಾಂಡೆ ಫೌಂಡೇಶನ್ ಉತ್ತರಕನ್ನಡ ವಿಭಾಗ ಮ್ಯಾನೇಜರ್ ಪ್ರಸನ್ನ ಕುಲಕರ್ಣಿ ಹೇಳಿದರು.
ನಗರದಲ್ಲಿ ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ದೇಶಪಾಂಡೆ ಫೌಂಡೇಶನ್ ವತಿಯಿಂದ ಸಣ್ಣ ಉದ್ದಿಮೆದಾರರಿಗೆ ನೆರವಾಗುವ ನಿಟ್ಟಿನಲ್ಲಿ ಮತ್ತು ಅವರ ಬ್ರಾಂಡ್ಗಳನ್ನು ಜನಸಾಮಾನ್ಯರಿಗೆ ದೊಡ್ಡಮಟ್ಟದಲ್ಲಿ ಪರಿಚಯಿಸಲು ಇಂತಹ ವೇದಿಕೆ ಕಲ್ಪಿಸಲಾಗುತ್ತಿದೆ. ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಫೆ. 11 ರಿಂದ ಒಂದು ವಾರ ಉದ್ಯಮಿ ಸಂತೆ ನಡೆಯಲಿದ್ದು, ಸ್ಥಳೀಯವಾಗಿಯೇ ತಯಾರಿಸಿದ ಆಹಾರ ಪದಾರ್ಥಗಳು, ಸಿಹಿ ತಿಂಡಿ, ಸಿರಿಧಾನ್ಯಗಳು, ಕರಕುಶಲ ವಸ್ತುಗಳು, ಉಡುಪು, ಗೃಹ ಅಲಕಾಂರಿಕ ವಸ್ತುಗಳ ಮಾರಾಟ ನಡೆಯಲಿದೆ. ಸುಮಾರು 150 ಕ್ಕೂ ಹೆಚ್ಚು ಮಳಿಗೆಗಳನ್ನು ಇಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.